ಬಿಬಿಎಂಪಿಯಲ್ಲಿ ಯಾರಿಗೆ ಬೆಂಬಲ?, ಜೆಡಿಎಸ್ ನಡೆ ನಿಗೂಢ
ಬೆಂಗಳೂರು, ಆಗಸ್ಟ್ 29 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಬೇಕೆ?, ಬಿಜೆಪಿ ಜೊತೆ ಕೈ ಜೋಡಿಸಬೇಕೆ? ಎಂಬ ಬಗ್ಗೆ ಜೆಡಿಎಸ್ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ.
ಮೇಯರ್ ಆಗಿರುವ ಬಿ.ಎನ್.ಮಂಜುನಾಥ್ ರೆಡ್ಡಿ (ಕಾಂಗ್ರೆಸ್) ಮತ್ತು ಉಪ ಮೇಯರ್ ಎಸ್.ಪಿ.ಹೇಮಲತಾ (ಜೆಡಿಎಸ್) ಅವರ ಅಧಿಕಾರಾವಧಿ ಸೆಪ್ಟೆಂಬರ್ 14ರಂದು ಕೊನೆಗೊಳ್ಳಲಿದೆ. ಸೆ.19ರಂದು ನೂತನ ಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದೆ.[ಬಿಬಿಎಂಪಿ ಮೈತ್ರಿ : ಮೇಯರ್ ಪಟ್ಟಕ್ಕೆ ಬೇಡಿಕೆ ಇಟ್ಟ ಜೆಡಿಎಸ್]
ಮೇಯರ್ ಚುನಾವಣೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಜೆಡಿಎಸ್ ಬೆಂಬಲ ಕೇಳಿವೆ. ಆದ್ದರಿಂದ, ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, ಮುಸ್ಲಿಂ ಧರ್ಮಗುರುಗಳ ಸಭೆ ಕರೆದು ಬೆಂಬಲ ನೀಡುವ ಕುರಿತು ಚರ್ಚೆ ನಡೆಸಲಿದ್ದಾರೆ.[ಬಿಬಿಎಂಪಿ ಮೇಯರ್ ಚುನಾವಣೆ : ಜೆಡಿಎಸ್ ಬೆಂಬಲ ಯಾರಿಗೆ?]
ಬಿಜೆಪಿ ಜೊತೆ ಕೈ ಜೋಡಿಸಿದರೆ ಮುಸ್ಲಿಂಮರು ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಬೆಂಬಲ ನೀಡದಿರುವ ಸಾಧ್ಯತೆ ಇದೆ. ಆದ್ದರಿಂದ, ಮುಂದಿನ ತೀರ್ಮಾನವನ್ನು ಕೈಗೊಳ್ಳಲು ಧರ್ಮಗುರುಗಳ ಸಭೆ ನಡೆಸಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ.[ಮೈತ್ರಿ ಮುರಿಯುವ ಮಾತನಾಡಿದ ಕುಮಾರಸ್ವಾಮಿ!]
ಈ ಬಾರಿಯ ಚುನಾವಣೆಯಲ್ಲಿ ಮೇಯರ್ ಪಟ್ಟ ಹಿಂದುಳಿದ ವರ್ಗ (ಬಿ) ಮಹಿಳೆ ಮತ್ತು ಉಪ ಮೇಯರ್ ಪಟ್ಟ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಕಳೆದ ವರ್ಷ ಜೆಡಿಎಸ್ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿತ್ತು. ಈ ಬಾರಿ ಬೆಂಬಲ ಮುಂದುವರೆಯುವುದೇ ಕಾದು ನೋಡಬೇಕು.
ಮೇಯರ್ ಬಿ.ಎನ್.ಮಂಜುನಾಥ್ ರೆಡ್ಡಿ ಮತ್ತು ಆಡಳಿತ ಪಕ್ಷದ ನಾಯಕ, ದತ್ತಾತ್ರೇಯ ವಾರ್ಡ್ನ ಕಾಂಗ್ರೆಸ್ ಸದಸ್ಯ ಆರ್.ಎಸ್. ಸತ್ಯನಾರಾಯಣ ಅವರು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿ ಮೈತ್ರಿ ಬಗ್ಗೆ ಮಾತುಕತೆ ನಡೆಸಿದ್ದಾರೆ. ಆದರೆ, ಅಂತಿಮ ನಿರ್ಧಾರ ಹೊರಬಿದ್ದಿಲ್ಲ.