ದೇಶದ ಎರಡನೇ ಕ್ಯಾಪಿಟಲ್ ಆಗುತ್ತಾ ಬೆಂಗಳೂರು?
Recommended Video
ಬೆಂಗಳೂರು, ಜನವರಿ 13 : ಬೆಂಗಳೂರು ಜಗತ್ತಿನ ಐಟಿ ವಲಯದ ಚುಂಬಕ ನಗರಿ. ಹೀಗಾಗಿ ಈ ಸಿಟಿಯನ್ನು ದೇಶದ ಎರಡನೇ ರಾಜಧಾನಿಯನ್ನಾಗಿ ಘೋಷಿಸಬೇಕೆಂಬ ಕೂಗು ಈಗ ಪ್ರಧಾನಿ ನರೇಂದ್ರ ಮೋದಿಯವರ ಅಂಗಳ ತಲುಪಿದೆ.
ಕರ್ನಾಟಕ ಬೃಹತ್ ಕೈಗಾರಿಕೆ ಸಚಿವ ಆರ್.ವಿ. ದೇಶಪಾಂಡೆ ಬೆಂಗಳೂರು ದೇಶದ ಎರಡನೇ ರಾಜಧಾನಿಯನ್ನಾಗಿ ಮಾಡಿ ಎಂದು ಒತ್ತಾಯಿಸಿ ಸುದೀರ್ಘ ಪತ್ರ ಬರೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದಿರುವ ಪತ್ರದಲ್ಲಿ, ದೇಶಕ್ಕೆ ಎರಡನೇ ರಾಜಧಾನಿಯ ಅಗತ್ಯದ ಬಗ್ಗೆ ಆರ್.ವಿ. ದೇಶಪಾಂಡೆ ಪ್ರಸ್ತಾಪ ಮಾಡಿದ್ದಾರೆ. ದೇಶದ ದಕ್ಷಿಣ ಭಾಗದಲ್ಲಿರುವ ನಗರ, ನೈಸರ್ಗಿಕ ಪ್ರಕೋಪ ಮತ್ತು ಪ್ರತಿಕೂಲ ಹವಾಮಾನಗಳಿಂದ ಮುಕ್ತವಾಗಿದೆ. ವೃತ್ತಿಪರರಿಂದ ಕೂಡಿದ ವಿಭಿನ್ನ ಜನಸಮುದಾಯ ಮತ್ತು ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ವಿಸ್ತೃತ ಕೈಗಾರಿಕೆಗಳನ್ನು ಒಳಗೊಂಡ ಬೆಂಗಳೂರು ನಗರ ಎಲ್ಲಾ ವಿಧದಲ್ಲೂ ದೇಶದ ಎರಡನೇ ರಾಜಧಾನಿಯಾಗಲು ಅರ್ಹ ನಗರ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿಗೆ ದೇಶದ ಎರಡನೇ ರಾಜಧಾನಿ ಪಟ್ಟ ಸಿಗಬೇಕು
ಭಾರತಕ್ಕೆ ತುರ್ತಾಗಿ ಎರಡನೇ ರಾಜಧಾನಿಯ ಅಗತ್ಯವಿದೆ ಮತ್ತು ಆ ಹೊಣೆಯನ್ನು ನಿಭಾಯಿಸಲು ಬೆಂಗಳೂರು ಅತ್ಯುತ್ತಮ ನಗರ. ಭಾರತದಂಥ ವಿಶಾಲ ರಾಷ್ಟ್ರವನ್ನು ಒಂದು ನಗರದಿಂದ ನಿರ್ವಹಣೆ ಮಾಡಲು ಸಾಧ್ಯವಿಲ್ಲ. ವಿಶೇಷವಾಗಿ, ಸರ್ಕಾರವು ಆಡಳಿತ, ರಚನಾತ್ಮಕ ಸುಧಾರಣೆ, ರಾಷ್ಟ್ರೀಯ ಮರುನಿರ್ಮಾಣ ಮತ್ತು ಅಂತಾರಾಷ್ಟ್ರೀಯ ಸಹಭಾಗಿತ್ವಕ್ಕೆ ಸಂಬಂಧಿಸಿದಂತೆ ಮಾದರಿಯುತ ಮತ್ತು ಆಮೂಲಾಗ್ರ ಬದಲಾವಣೆಗೆ ಸಿದ್ಧತೆ ನಡೆಸುತ್ತಿರುವ ಹೊತ್ತಲ್ಲಿ ಇದರ ಅಗತ್ಯ ಹೆಚ್ಚಿದೆ ಎಂದು ಆರ್.ವಿ. ದೇಶಪಾಂಡೆ ಪತ್ರದಲ್ಲಿ ಹೇಳಿದ್ದಾರೆ. ಬಹುಮುಖಿ ಜೀವನಶೈಲಿ, ಕೈಗಾರಿಕಾ ಅಭಿವೃದ್ಧಿ ಮತ್ತು ತಂತ್ರಜ್ಞಾನ ಅನ್ವೇಷಣೆಗಳನ್ನು ಹೊಂದಿರುವ ಬೆಂಗಳೂರು, ಎರಡನೇ ರಾಜಧಾನಿ ಸ್ಥಾನಮಾನಕ್ಕೆ ನ್ಯಾಯ ಒದಗಿಸಲು ಸಮರ್ಥವಾಗಿದೆ.
ಬಾಹ್ಯ ಶಕ್ತಿಗಳಿಂದ ಸುರಕ್ಷಿತವಾದ ಬೆಂಗಳೂರು
ಬಾಹ್ಯ ಶಕ್ತಿಗಳಿಂದ ಸುರಕ್ಷಿತವಾಗಿ ಮತ್ತು ಅಂತಾರಾಷ್ಟ್ರೀಯ ಗಡಿಗಳಿಂದ ದೂರ ಇರುವ ಮತ್ತು ವರ್ಷದ ಬಹುತೇಕ ಅವಧಿಯಲ್ಲಿ ಹಿತಕರ ಹವಾಮಾನ ಹೊಂದಿರುವ, ಭಾರತದ ಉದ್ಯಾನ ನಗರಿ ಹಾಗೂ ಸಂಶೋಧನೆಗಳ ಕೇಂದ್ರ ಎಂದು ಪರಿಗಣಿಸಲ್ಪಡುವ ಬೆಂಗಳೂರಿಗೆ ಭಾರತದ ಎರಡನೇ ರಾಜಧಾನಿಯಾಗುವ ಸಾಮರ್ಥ್ಯವಿದೆ.
ಬೆಂಗಳೂರಿನಲ್ಲಿ ಎಂಜಿಯರ್ ಗಳಷ್ಟೇ ವಿಧ್ವಾಂಸರಿದ್ದಾರೆ
ಸಾಫ್ಟ್ವೇರ್ ಎಂಜಿನಿಯರ್ಗಳಷ್ಟೇ ಸಂಖ್ಯೆಯ ಶಾಸ್ತ್ರೀಯ ಭಾಷಾ ವಿದ್ವಾಂಸರನ್ನು ಕಾಣಬಹುದಾದ ದೇಶದ ಏಕೈಕ ನಗರ ಬೆಂಗಳೂರು. ದೆಹಲಿ ಹೊರತುಪಡಿಸಿದರೆ, ಬಹುಶಃ ವಿಶ್ವದಲ್ಲೇ ಅತ್ಯಂತ ವೈವಿಧ್ಯಮಯ ವಿದ್ಯಾರ್ಥಿ ಸಮುದಾಯ ಮತ್ತು ರಾಷ್ಟ್ರದಲ್ಲೇ ಅತ್ಯಂತ ವೈವಿಧ್ಯಮಯ ವೃತ್ತಿಪರರನ್ನು ಹೊಂದಿರುವ ಹಾಗೂ ವಿವಿಧ ಸಂಸ್ಕೃತಿಗಳನ್ನು ಬಿಂಬಿಸುವ ಮತ್ತು ದೃಢ ನಾಗರೀಕತೆಯುಳ್ಳ ನಗರವಾಗಿದೆ ಎಂದು ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ದೆಹಲಿ ಆಡಳಿತದ ಬಗ್ಗೆ ನಕಾರಾತ್ಮಕ ದೃಷ್ಟಿಕೋನ ಕುರಿತು ಪ್ರಸ್ತಾಪ
ಈ ನಡೆಯು ವಿಕೇಂದ್ರೀಕರಣ ವ್ಯವಸ್ಥೆ ಮತ್ತು ತ್ವರಿತ ನಿರ್ಧಾರ ಕೈಗೊಳ್ಳುವಿಕೆಯ ಭಾಗವಾಗಿದೆ. ಇದು ದಕ್ಷಿಣ ಭಾರತದ ಜನರಿಗೆ ಆಡಳಿತ ಮತ್ತು ನ್ಯಾಯಾಂಗ ವ್ಯವಸ್ಥೆಗಳನ್ನು ಸಮೀಪಕ್ಕೆ ತರುವ ಮೂಲಕ ಅವರನ್ನು ದೇಶದ ಆಡಳಿತ ವ್ಯಾಪ್ತಿಯಲ್ಲಿ ಸಹಭಾಗಿಗಳನ್ನಾಗಿಸುವಲ್ಲಿ ಸಹಕಾರಿಯಾಗಲಿದೆ. ದಕ್ಷಿಣ ಭಾರತದ ಬೇಡಿಕೆಗಳಿಗೆ ಸಂಬಂಧಿಸಿ ಇಲ್ಲಿನ ಜನರು ದೆಹಲಿ ಆಡಳಿತದ ಬಗ್ಗೆ ಹೊಂದಿರುವ ನಕಾರಾತ್ಮಕ ದೃಷ್ಟಿಕೋನದ ಬಗ್ಗೆಯೂ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. ದೂರದಲ್ಲಿರುವ ಮತ್ತು ದಕ್ಷಿಣ ಭಾರತದ ಸಂಸ್ಕೃತಿ ಮತ್ತು ಧಾರ್ಮಿಕತೆಯ ವಿಶಿಷ್ಟತೆ ಮತ್ತು ಪ್ರಾಮುಖ್ಯತೆಯನ್ನು ಗುರುತಿಸದ ಆಡಳಿತ ವ್ಯವಸ್ಥೆಯಿಂದ, ದೇಶದ ಅಭಿವೃದ್ಧಿ ಅಸಾಧ್ಯ. ಅಲ್ಲದೆ ಸಾಂಸ್ಕೃತಿಕವಾಗಿ ಶ್ರೀಮಂತ ಮತ್ತು ಸಂಕೀರ್ಣವಾಗಿರುವ ದೇಶದ ಇತಿಹಾಸಕ್ಕೆ ಇದರಿಂದ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.
ಬೆಂಗಳೂರನ್ನು ದೇಶದ ಎರಡನೇ ರಾಜಧಾನಿ ಮಾಡಿದರೆ ಹೊಸ ಅವಕಾಶ ಸೃಷ್ಟಿ
ಭಾರತದಲ್ಲಿ ಎರಡನೇ ರಾಜಧಾನಿಯನ್ನು ರಚಿಸುವ ಲಾಭವೇನೆಂದರೆ, ವಿಶೇಷವಾಗಿ ಇದು ದಕ್ಷಿಣ ಭಾರತದಲ್ಲಿದ್ದರೆ, ವಹಿವಾಟು, ಸಾಂಸ್ಕೃತಿಕ ವಿನಿಮಯ, ವೈಜ್ಞಾನಿಕ ಅನ್ವೇಷಣೆ, ತಂತ್ರಜ್ಞಾನ ಸಂಶೋಧನೆಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಲು ಅನುಕೂಲವಾಗಲಿದೆ. ಕೋಟ್ಯಂತರ ದಕ್ಷಿಣ ಭಾರತೀಯರು ರಾಷ್ಟ್ರೀಯ ಮುಖ್ಯವಾಹಿನಿಯಲ್ಲಿ ಪ್ರವೇಶಿಸಲು ಸಹ ಈ ಹೆಜ್ಜೆ ನೆರವಾಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ
ಈ ಬಗ್ಗೆ ಶ್ರೀ ಆರ್.ವಿ.ದೇಶಪಾಂಡೆರವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೂ ಕೂಡ ಮನವಿ ಸಲ್ಲಿಸಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೂಡಾ ಮನವಿ ಮಾಡಿದ್ದು, ಮುಖ್ಯಮಂತ್ರಿಗಳಿಂದಲೂ ಸಹಾ ಸೂಕ್ತ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ ಮುಖ್ಯಮಂತ್ರಿಗಳನ್ನು ಕೋರಿದ್ದಾರೆ.
ರಾಷ್ಟ್ರವು ದೆಹಲಿಯ ಶಕ್ತಿಕೇಂದ್ರದಲ್ಲಿ ನಿರ್ಧಾರವಾಗುವ ದೂರದ ವದಂತಿ ಅಲ್ಲ, ಬದಲಾಗಿ ದೇಶವು ದೈನಂದಿನ ಜನಮತ ಸಂಗ್ರಹ, ಸಂಸ್ಕೃತಿ ನಾಗರೀಕತೆ ಮತ್ತು ಅಭಿವೃದ್ಧಿಯ ದೈನಂದಿನ ಉತ್ಸವ ಎಂಬುದು ಜನರಿಗೆ ಅರ್ಥವಾಗಲಿದೆ. ಈ ರಾಷ್ಟ್ರೀಯ ಮಹತ್ವಾಕಾಂಕ್ಷೆ ಮತ್ತು ಬಯಕೆಯೊಂದಿಗೆ ನೀವು ಸಹಮತ ಹೊಂದಿದ್ದೀರಿ ಎಂಬುದು ನನ್ನ ದೃಢವಾದ ನಂಬಿಕೆ ಎಂದು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.