ಪೌರಕಾರ್ಮಿಕರ ವೇತನ ವಿಳಂಬ, ಹಿಂದಿರುವ ಆ ಐದು ಕಾರಣಗಳು
ಬೆಂಗಳೂರು, ಜು.10: ಬಿಬಿಎಂಪಿಯಲ್ಲಿ ನಡೆಯುತ್ತಿರುವ ಸಾವಿರಾರು ಕೋಟಿ ರೂ.ಗಳ ಸ್ವಚ್ಛತೆ ಗುತ್ತಿಗೆ ಹಗರಣ, ಪೌರಕಾರ್ಮಿಕರಿಗೆ ನೀಡಲಾಗುತ್ತಿದ್ದ, ವೇತನವನ್ನು ಆನ್ಲೈನ್ ಮಾಡಿರುವುದು ಇಡೀ ಪೌರಕಾರ್ಮಿಕರ ಸಂಬಳ ತಡೆಹಿಡಿಯಲು ಕಾರಣವಾಗಿದೆ ಎಂಬುದು ಬಹಿರಂಗಗೊಂಡಿದೆ.
ವಾರ್ಷಿಕ 938 ಕೋಟಿ ರೂ.ಗಳನ್ನು ಬಿಬಿಎಂಪಿ ಸ್ವಚ್ಛತೆಗಾಗಿ ವ್ಯಯ ಮಾಡುತ್ತಿದೆ ಈ ಪೈಕಿ ಸ್ವಚ್ಛತೆಗಾಗಿ ಪೌರಕಾರ್ಮಿಕರನ್ನು ಗುತ್ತಿಗೆ ಪಡೆಯುವ ಏಜೆನ್ಸಿಗಳು ನಕಲಿ ಪೌರಕಾರ್ಮಿಕರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಗಳ ವೇತನವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎನ್ನುವುದು ಬೆಳಕಿಗೆ ಬಂದಿತ್ತು.
ಸಂಬಳವಿಲ್ಲದೆ ಸಾಯುತ್ತಿರುವ ಪೌರಕಾರ್ಮಿಕರು:ಸರ್ಕಾರದ ವಿರುದ್ಧ ಆಕ್ರೋಶ
ಈ ಹಿನ್ನೆಲೆಯಲ್ಲಿ ಕಳೆದ ಜನವರಿಯಿಂದ ಬಿಬಿಎಂಪಿ ಪೌರಕಾರ್ಮಿಕರ ಹಾಜರಾತಿಗೆ ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಿದ್ದಲ್ಲದೆ ಯಾವ ಪೌರ ಕಾರ್ಮಿಕರು ಕೆಲಸ ಮಾಡುತ್ತಾರೋ ಅವರ ಖಾತೆಗೆ ನೇರವಾಗಿ ವೇತನ ಜಮೆಯಾಗುವಂತೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ವಿರುದ್ಧ ತಿರುಗಿ ಬಿದ್ದಿರುವ ಏಜೆನ್ಸಿಗಳು ಗುತ್ತಿಗೆ ಪೌರಕಾರ್ಮಿಕರಿಗೆ ಸಂಬಳವನ್ನು ನೀಡದೆ ಸತಾಯಿಸುತ್ತಿದೆ. ಜತೆಗೆ ಹಳೆಯ ವ್ಯವಸ್ಥೆಯನ್ನೇ ಮುಂದುವರೆಸುವಂತೆ ಬಿಗಿಪಟ್ಟು ಹಿಡಿದು ಬಿಬಿಎಂಪಿ ಮೇಲೆ ಒತ್ತಡ ಹೇರುತ್ತಿದ್ದಾರೆ.
ಈವರೆಗೆ ಸ್ವಚ್ಛತೆ ಏಜೆನ್ಸಿಗಳು 19 ಸಾವಿರ ಪೌರಕಾರ್ಮಿಕರ ಹೆಸರಿನಲ್ಲಿ ವೇತನವನನ್ನು ಪಡೆದುಕೊಳ್ಳುತ್ತಿದೆ, ಆದರೆ ವಾಸ್ತವವಾಗಿ 12 ಸಾವಿರ ಪೌರಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದು ಬಿಬಿಎಂಪಿ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗಗೊಂಡಿತ್ತು.
ಧೃತಿಗೆಡದಂತೆ ಪೌರ ಕಾರ್ಮಿಕರಿಗೆ ಪರಮೇಶ್ವರ್ ಮನವಿ
ಈ ಹಿನ್ನೆಲೆಯಲ್ಲಿ ಸರಿಸುಮಾರು 7 ಸಾವಿರ ನಕಲಿ ಖಾತೆಗಳಿಗೆ ವೇತನ ಬಟವಾಡೆಯಾಗುತ್ತಿದ್ದು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಬೆಳಗ್ಗೆ ಕೆಲಸಕ್ಕೆ ಹಾಜರಾಗುವ ಪೌರಕಾರ್ಮಿಕರಿಗೆ ಬಯೋಮೆಟ್ರಿಕ್ ಹಾಜರಾತಿ ಹಾಗೂ ಬಯೋಮೆಟ್ರೀಕ್ನಡಿ ಹಾಜರಾದ ಪೌರಕಾರ್ಮಿಕರಿಗೆ ಮಾತ್ರ ವೇತನವನ್ನು ನೇರವಾಗಿ ಅವರ ಖಾತೆಗೆ ಬಟವಾಡೆ ಮಾಡುವ ನಿರ್ಧಾರಕ್ಕೆ ಬಿಬಿಎಂಪಿ ಬಂದಿತ್ತು.
ಈ ನಿರ್ಧಾರವನ್ನು ವಿರೋಧಿಸಿ ಗುತ್ತಿಗೆ ಏಜೆನ್ಸಿಗಳು ಪೌರಕಾರ್ಮಿಕ ಕಾರ್ಮಿಕರಿಗೆ ಸಂಬಳ ನೀಡದೆ ಸತಾಯಿಸುತ್ತಿದೆ. ಇದರಿಂದ ಕಳೆದ ಆರು ತಿಂಗಳಿನಿಂದ ಪೌರಕಾರ್ಮಿಕರು ಸಂಬಳವಿಲ್ಲದೆ ಇರುವಂತಾಗಿದೆ. ಮಲ್ಲೇಶ್ವರದ ವೈಯಾಲಿಕಾವಲ್ನ ವ್ಯಕ್ತಿ ಸುಬ್ರಮಣಿ ಎಂಬ ಪೌರ ಕಾರ್ಮಿಕರೊಬ್ಬರು ಸೋಮವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇದೇ ರೀತಿ ಬೆಂಗಳೂರಿನ ಬೇರೆ ಬೇರೆ ವಾರ್ಡ್ಗಳಲ್ಲಿ ಗುತ್ತಿಗೆ ಕಾರ್ಮಿಕರು ಸಂಬಳವಿಲ್ಲದೆ ಕೆಲಸವನ್ನೂ ಮಾಡದೆ ಪ್ರತಿಭಟನೆಗೆ ಇಳಿದಿದ್ದು ಬಿಬಿಎಂಪಿಗೆ ತಲೆನೋವಾಗಿ ಪರಿಣಮಿಸಿದೆ.
ಬಯೋಮೆಟ್ರಿಕ್ ವ್ಯವಸ್ಥೆಯೇ ಪೌರಕಾರ್ಮಿಕರ ವೇತನ ವಿಳಂಬಕ್ಕೆ ಕಾರಣವಾಯ್ತಾ?
ನಿಜವಾದ ಪೌರಕಾರ್ಮಿಕರಿಗೆ ವೇತನವನ್ನು ತಲುಪಿಸುವ ನಿಟ್ಟಿನಲ್ಲಿ ಬಿಬಿಎಂಪಿಯು ಪೌರಕಾರ್ಮಿಕರ ಹಾಜರಾತಿಗೆ ಬಯೋಮೆಟ್ರಿಕ್ ಅಳವಡಿಸಿತ್ತು, ಇದೇ ಪೌರಕಾರ್ಮಿಕರ ವೇತನ ವಿಳಂಬಕ್ಕೆ ಕಾರಣವಾಗಿದೆ, ಗುತ್ತಿಗೆ ಏಜೆನ್ಸಿಗಳು ಮಾಡುತ್ತಿದ್ದ ಅಕ್ರಮ ಬಹಿರಂಗಗೊಂಡಿತ್ತು, ಹಾಗಾಗಿ ಮತ್ತೆ ಗುತ್ತಿಗೆ ಪದ್ಧತಿಯನ್ನು ಅಳವಡಿಸಿದರೆ ಮಾತ್ರ ವೇತನ ನೀಡುವುದಾಗಿ ಎಚ್ಚರಿಕೆ ನೀಡಿದ್ದರು.
ಸುದೀರ್ಘಕಾಲದಿಂದ ಪೌರಕಾರ್ಮಿಕರಿಗೆ ವೇತನ ಏಕೆ ಸಿಗುತ್ತಿಲ್ಲ
ಪೌರಕಾರ್ಮಿಕರಿಗೆ ಬಯೋಮೆಟ್ರಿಕ್ ಅಳವಡಿಸಿದ ದಿನದಿಂದಲೇ ಸ್ವಚ್ಛತಾ ಏಜೆನ್ಸಿಗಳು ಪೌರಕಾರ್ಮಿಕರ ಮೇಲೆ ಪ್ರಹಾರ ಆರಂಭಿಸಿದ್ದರು. ತಮಗೆ ಬರುತ್ತಿರುವ ಕೋಟಿ ಕೋಟಿ ಹಣ ತಪ್ಪಿ ಹೋಗುತ್ತದೆ ಎನ್ನುವ ದೃಷ್ಟಿಯಿಂದ ಹಳೆಯ ವ್ಯವಸ್ಥೆಯನ್ನೇ ಜಾರಿಗೆ ತಂದೆ ಮಾತ್ರ ಪೌರಕಾರ್ಮಿಕರಿಗೆ ವೇತನ ನೀಡುವುದಾಗಿ ಸತಾಯಿಸುತ್ತಿದ್ದಾರೆ. ಇದರಿಂದ ಪೌರ ಕಾರ್ಮಿಕರು ತೊಂದರೆ ಅನುಭವಿಸುವಂತಾಗಿದೆ.
ಗುತ್ತಿಗೆದಾರರು, ಅಧಿಕಾರಿಗಳು ಶಾಮೀಲು, ಹದೆಗೆಟ್ಟ ಸ್ವಚ್ಛತಾ ವ್ಯವಸ್ಥೆ
ಕೇವಲ 12 ಸಾವಿರದಷ್ಟು ಮಾತ್ರ ಪೌರಕಾರ್ಮಿಕರಿದ್ದರೂ 19 ಸಾವಿರ ಮಂದಿ ಇದ್ದಾರೆ ಎಂದು ಸುಳ್ಳು ಲೆಕ್ಕ ಹೇಳಿ ಪಾಲಿಕೆಯಿಂದ ಏಜೆನ್ಸಿಗಳು ಹೆಚ್ಚುವರಿ ಹಣ ಗಳಿಸುತ್ತಿದ್ದರು, ಕೆಲವು ಸಮೀಕ್ಷೆಯಿಂದ ಈ ಅಕ್ರಮ ಬಯಲಿಗೆ ಬಂದಿತ್ತು, ಇದರಲ್ಲಿ ಪಾಲಿಕೆ ಕೆಲವು ಅಧಿಕಾರಿಗಳು ಕೂಡ ಶಾಮೀಲಾಗಿದ್ದರು ಎನ್ನಲಾಗಿದೆ. ಹಾಗಾಗಿ ಹಳೆಯ ಯೋಜನೆ ಜಾರಿಗೊಳಿಸದಿದ್ದರೆ ಪೌರಕಮಾಇFಕರ ಹಣವಿಲ್ಲ ಎಂದು ಎಚ್ಚರಿಕೆ ನೀಡುತ್ತಿವೆ.
ದೊಡ್ಡವರ ಭ್ರಷ್ಟಾಚಾರ ಕಾರ್ಮಿಕರ ಹೊಟ್ಟೆ ಬರೆ ಏಕೆ
ಏಜೆನ್ಸಿ, ಬಿಬಿಎಂಪಿ ಮಟ್ಟದಲ್ಲಿ ಭ್ರಷ್ಟಾಚಾರವಾಗುತ್ತಿದೆ ಆದರೆ ಕೆಳಮಟ್ಟದಲ್ಲಿರುವ ಒಂದು ಹೊತ್ತು ಊಟಕ್ಕೂ ತೊಂದರೆ ಅನುಭವಿಸುವಂತಹ ಸ್ಥಿತಿಲಿರುವ ಪೌರಕಾರ್ಮಿಕರು ತೊಂದರೆ ಅನುಭವಿಸಬೇಕಾಗಿದೆ ಎನ್ನುವುದು ಪೌರಕಾರ್ಮಿಕರ ಅಳಲಾಗಿದೆ. ಪೌರಕಾರ್ಮಿಕರ ಸ್ಥಿತಿಯನ್ನು ಯಾರೂ ಕೂಡ ಅರ್ಥ ಮಾಡಿಕೊಳ್ಳುತ್ತಿಲ್ಲ, ಕಳೆದ ಆರು ತಿಂಗಳಿಂದ ಒಂದು ರೂ ಕೂಡ ಸಂಬಳವಿಲ್ಲದೆ ಇಂದು ಬರುತ್ತದೆ ನಾಳೆ ಸಂಬಳ ಬರುತ್ತದೆ ಎಂದು ಕಾಯುತ್ತಲೇ ಇದ್ದಾರೆ, ಅವರ ಈ ಕಾಯುವಿಕೆಗೆ ಬೆಲೆ ಇಲ್ಲದಂತಾಗಿದೆ.
ತ್ಯಾಜ್ಯ ಗುತ್ತಿಗೆ ಪದ್ಧತಿಯನ್ನು ಮತ್ತೆ ತರಲು ಒತ್ತಡ
ಬಿಬಿಎಮಪಿ ತ್ಯಾಜ್ಯ ಗುತ್ತಿಗೆದಾರರಿಗೆ ಹೊಸ ಟೆಂಡರ್ ಕರೆದಿದೆ. ಕೆಲವು ಟೆಂಡರ್ಗಳನ್ನು ಮೂರು ಬಾರಿ ರಿಜೆಕ್ಟ್ ಮಾಡಿದ್ದು, ಜು.12 ರಂದು ಹೊಸ ಟೆಂಡರ್ ಕರೆಯಲಿದೆ. ಕೌನ್ಸಿಲರ್ಸ್ಗಳು ಗುತ್ತಿಗೆ ಪದ್ದತಿಯನ್ನು ಮತ್ತೆ ತರಲು ಒತ್ತಡ ಹೇರುತ್ತಿದ್ದಾರೆ. ಯಾಕೆಂದರೆ ಕೆಲವು ಕೌನ್ಸಿಲರ್ಸ್ಗಳು ಗುತ್ತಿಗೆದಾರರಾಗಿದ್ದಾರೆ.