ಸುದ್ದಿಗೆ ರೆಕ್ಕೆಪುಕ್ಕ ಕಟ್ಟಿದ ಯಡಿಯೂರಪ್ಪ- ಶಾಸಕ ಬಾಲಕೃಷ್ಣ ಭೇಟಿ
ಮಾಗಡಿಯ ಶಾಸಕ-ಜೆಡಿಎಸ್ ಭಿನ್ನಮತೀಯ ಬಾಲಕೃಷ್ಣ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದು ಹಲವು ಕುತೂಹಲಗಳಿಗೆ ಕಾರಣವಾಗಿದೆ. ಈ ಭೇಟಿ ಹಿಂದಿನ ಕಾರಣ ಏನು ಅಂತ ತಿಳಿಯುವುದಕ್ಕೆ ಈ ವರದಿ ಓದಿ
ಮಾಗಡಿ, ಏಪ್ರಿಲ್ 20 : ಜೆಡಿಎಸ್ ನಲ್ಲಿ ಬಂಡಾಯ ಎದ್ದು ಹೊರಬಂದಿರುವ ಶಾಸಕರ ಪೈಕಿ ಒಬ್ಬರಾದ ಬಾಲಕೃಷ್ಣ ಕಾಂಗ್ರೆಸ್ ಪಕ್ಷವನ್ನು ಸೇರುತ್ತಿರುವ ಕುರಿತಂತೆ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಊಹಾಪೋಹಗಳು ಹುಟ್ಟಿಕೊಂಡಿವೆ. ವಿಧಾನಸಭೆ ಚುನಾವಣೆಗೆ ವರ್ಷ ಬಾಕಿಯಿದ್ದು, ಈಗಿನಿಂದಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮತ್ತೆ ಜೆಡಿಎಸ್ಗೆ ಹೋಗುವಂತಿಲ್ಲ. ಕಾಂಗ್ರೆಸ್ ಗೆ ಸೇರ್ಪಡೆಯಾದರೂ ಬಾಲಕೃಷ್ಣ ಅವರಿಗೆ ಅಲ್ಲಿ ಸ್ಥಾನ- ಮಾನಗಳು ದೊರೆಯುತ್ತವೆ ಎನ್ನಲಾಗುವುದಿಲ್ಲ.[ಸೊಗಡು ಶಿವಣ್ಣ ಮನೆಯಲ್ಲಿ ಈಶ್ವರಪ್ಪ, ಅತೃಪ್ತರು ಬುಸುಬುಸು!]
ಒಂದು ವೇಳೆ ಮುಂದಿನ ಚುನಾವಣೆಗೆ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೂ ಒಕ್ಕಲಿಗ ಮತವನ್ನು ಪಡೆಯುವುದು ಅಷ್ಟು ಸುಲಭವಲ್ಲ. ಕಾರಣ ಅಲ್ಲಿ ಜೆಡಿಎಸ್ ಗಟ್ಟಿಯಾಗಿದೆ. ಹೀಗಾಗಿ ಬಾಲಕೃಷ್ಣ ಅವರಿಗೆ ಮುಂದಿನ ಚುನಾವಣೆ ಸ್ವಲ್ಪ ಕಠಿಣವಾಗಿ ಪರಿಣಮಿಸಲಿದೆ. ಹೀಗಾಗಿ ಅವರು ಗೊಂದಲಕ್ಕೆ ಬಿದ್ದಿರುವುದಂತೂ ಸತ್ಯ.
ಈ ವ್ಯಾಪ್ತಿಯಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾತೇ ನಡೆಯುತ್ತಿರುವುದರಿಂದ ಅವರ ವಿರುದ್ಧ ಸೆಟೆದು ನಿಂತು ತನ್ನದೇ ವರ್ಚಸ್ಸು ಉಳಿಸಿಕೊಂಡು ಬಂದಿರುವ ಬಾಲಕೃಷ್ಣ ಕಾಂಗ್ರೆಸ್ ಗೆ ಹೋದರೆ ಅಲ್ಲಿ ತಮ್ಮ ಅಸ್ತಿತ್ವ ಕಂಡುಕೊಳ್ಳಲು ಸಾಧ್ಯವಾ ಎಂಬ ಪ್ರಶ್ನೆ ಕೂಡ ಅವರ ಬೆಂಬಲಿಗರನ್ನು ಕಾಡುತ್ತಿದೆ. ಹೀಗಾಗಿ ಬಿಜೆಪಿ ಸಖ್ಯವನ್ನು ಹೊಂದಲು ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿರಬಹುದೇ ಎಂಬ ಕುತೂಹಲ ಜನರದ್ದಾಗಿದೆ.[ಎಚ್ ಡಿಕೆಗೆ ಮುಕ್ತ ಆಹ್ವಾನ ನೀಡಿದ ಬಂಡಾಯ ಶಾಸಕ ಬಾಲಕೃಷ್ಣ]
ಈ ಎಲ್ಲ ಊಹೆ-ಅನುಮಾನಗಳನ್ನು ತಳ್ಳಿ ಹಾಕಿರುವ ಶಾಸಕ ಬಾಲಕೃಷ್ಣ, ಏಪ್ರಿಲ್ 23 ರಂದು ನಡೆಯುವ ಡಾ.ಶಿವಕುಮಾರಸ್ವಾಮೀಜಿ 110ನೇ ಗುರುವಂದನ ಕಾರ್ಯಕ್ರಮ ಹಾಗೂ ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಆಹ್ವಾನ ಪತ್ರಿಕೆಯನ್ನು ನೀಡಿದ್ದೇನೆ ಹೊರತು ರಾಜಕೀಯವಾಗಿ ಯಾವುದೇ ಮಾತುಕತೆ ನಡೆಸಿಲ್ಲ. ಈಗಾಗಲೇ ನಾನು ಕಾಂಗ್ರೆಸ್ ಹೋಗುವುದು ಖಚಿತವಾಗಿದೆ ಎಂದಿದ್ದಾರೆ.
ಏಪ್ರಿಲ್ 23ರಂದು ನಡೆಯುವ ಕಾರ್ಯಕ್ರಮವನ್ನು ರಾಜಕೀಯದಿಂದ ದೂರ ಇಟ್ಟು ಮಾಡುತ್ತಿದ್ದೇವೆ. ಈಗಾಗಲೇ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಆಹ್ವಾನ ನೀಡಿದ್ದಾಗಿ ಹೇಳಿದ್ದಾರೆ. ಈಗೆಲ್ಲ ಏನೇ ಹೇಳಿದರೂ ಎಲ್ಲದಕ್ಕೂ ಕಾಲವೇ ಉತ್ತರ ನೀಡಬೇಕಾಗಿದೆ.