ಕೆಎಸ್ಪಿಸಿಬಿ ಸೂಪರ್ ಸೀಡ್ ಮಾಡಬಹುದೇ?
ಬೆಂಗಳೂರು, ಆ.19 : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಏಕೆ ಸೂಪರ್ ಸೀಡ್ ಮಾಡಬಾರದು? ಎಂದು ಹೈಕೋರ್ಟ್ ಸರ್ಕಾರಕ್ಕೆ ಪ್ರಶ್ನಿಸಿದೆ. ಈ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಿ ಕೋರ್ಟಿಗೆ ಉತ್ತರ ನೀಡುವಂತೆಯೂ ಸೂಚನೆ ನೀಡಿದೆ.
ಬೆಂಗಳೂರು ಮತ್ತು ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಶಬ್ದ ಹಾಗೂ ವಾಯು ಮಾಲಿನ್ಯ ತಡೆಯಲು ಯಾವುದೇ ರೀತಿಯ ಸಮಗ್ರ ಕ್ರಿಯಾ ಯೋಜನೆ ರೂಪಿಸದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರ್ಯವೈಖರಿಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು.
ನಗರದಲ್ಲಿ ಹೆಚ್ಚಾಗುತ್ತಿರುವ ಮಾಲಿನ್ಯಗಳ ಬಗ್ಗೆ ಸ್ವಯಂ ಪ್ರೇರಿತ ಪಿಐಲ್ ದಾಖಲಿಸಿಕೊಂಡಿರುವ ಹೈಕೋರ್ಟ್ ಸೋಮವಾರ ವಿಚಾರಣೆ ನಡೆಸಿತು. ಈ ವೇಳೆ ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವಘೇಲಾ ಹಾಗೂ ನ್ಯಾಯಮೂರ್ತಿ ಅಶೋಕ್ ಬಿ.ಹಿಂಚಿಗೇರಿ ಅವರಿದ್ದ ವಿಭಾಗೀಯ ಪೀಠ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. [ಕೆಎಸ್ ಪಿಸಿಬಿ ವೆಬ್ ಸೈಟ್ ನೋಡಿ]
ಬೆಂಗಳೂರು ಮಹಾನಗರದಲ್ಲಿರುವ 80 ಲಕ್ಷ ಜನ ಮಾಲಿನ್ಯದಿಂದ ನಾನಾ ರೀತಿಯ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇಷ್ಟಾದರೂ ನಿಮಗೆ ಸಮಸ್ಯೆಯ ಅರಿವಾಗಿಲ್ಲವೇ? ನೀವಿನ್ನೂ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲವೇ? ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಪ್ರಶ್ನಿಸಿದರು. [ಬೆಂಗಳೂರಿನಲ್ಲಿ ಶಬ್ದ ಮಾಲಿನ್ಯ, ಹೈಕೋರ್ಟ್ ಗರಂ]
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ಪಿಸಿಬಿ) ಯಾವ ಕೆಲಸ ಮಾಡಿದೆ? ಕಾನೂನಿನಲ್ಲಿ ಅವಕಾಶವಿದ್ದರೂ ನಿಷ್ಕ್ರಿಯವಾಗಿರುವ ಮಂಡಳಿಯನ್ನು ಏಕೆ ಇನ್ನೂ ಸೂಪರ್ಸೀಡ್ ಮಾಡಿಲ್ಲ? ಎಂದು ಸರ್ಕಾರವನ್ನು ಪ್ರಶ್ನಿಸಿದ ಕೋರ್ಟ್, ಮಂಡಳಿಯನ್ನು ಏಕೆ ಸೂಪರ್ಸೀಡ್ ಮಾಡಬಾರದು ಎಂದು ನೋಟಿಸ್ ಜಾರಿ ಮಾಡಿ ಈ ಬಗ್ಗೆ ಉತ್ತರಿಸುವಂತೆ ಸೂಚನೆ ನೀಡಿತು.