ಭಿಕ್ಷೆ ಬೇಡುವ ಮಹಿಳೆಯರ ಕಂಕುಳಲ್ಲಿನ ಮಕ್ಕಳು ಏಕೆ ಸದಾ ಮಲಗಿರ್ತವೆ?
ಬೆಂಗಳೂರು, ಜುಲೈ 11: "ಇಂಥವನ್ನೆಲ್ಲ ಕೇಳೋರು ಯಾರೂ ಇಲ್ಲವಾ ಅಂತ ನೈತಿಕತೆ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಆದರೆ ಸರಕಾರದ ಸಂಬಂಧಪಟ್ಟ ಇಲಾಖೆಗಳಿಗೆ ಫೋನ್ ಮಾಡಿದರೆ ಅಧಿಕಾರಿಗಳು ಬರ್ತೀವಿ ಅಂತ ಹೇಳೋದು ಬಿಟ್ಟರೆ ಅವರಿಂದ ಏನನ್ನೂ ನಿರೀಕ್ಷೆ ಮಾಡುವುದಕ್ಕೂ ಆಗಲ್ಲ"- ಆ ಯುವತಿ ಒಂದೇ ಸಮ ಸಿಟ್ಟಿನಲ್ಲಿ ಹೇಳುತ್ತಾ ಹೋದರು.
ಅವರ ಹೆಸರೇನು, ಎಲ್ಲಿಯವರು, ಏನು ಹೇಳುತ್ತಿದ್ದಾರೆ ಎಂಬುದು ಕೂಡ ಆ ಕ್ಷಣಕ್ಕೆ ಗೊತ್ತಾಗದ ಕಾರಣಕ್ಕೆ, "ಸ್ವಲ್ಪ ಸಮಾಧಾನ ಆಗಿ. ಏನಾಯಿತು, ನೀವು ಯಾರು? ಯಾವುದರ ಬಗ್ಗೆ ಹೇಳುತ್ತಿದ್ದೀರಿ ಅನ್ನೋದನ್ನ ಸರಿಯಾಗಿ ಹೇಳಿ" ಅಂದ ಮೇಲೆ ಆಕೆ ಸಿಟ್ಟು ಸ್ವಲ್ಪ ಕಡಿಮೆ ಆಯಿತು. ಅಲ್ಲಿಂದ ಮುಂದೆ ಅವರು ತಮ್ಮ ಮಾತಿನಲ್ಲೇ ಸಿಟ್ಟಿನ ಘಟನೆ ವಿವರಿಸಿದರು.
ಮೈಸೂರು: ಕಳ್ಳರಿಂದ ರಕ್ಷಿಸಲ್ಪಟ್ಟ ಮಕ್ಕಳಿನ್ನೂ ಅನಾಥ
ಇವತ್ತು (ಬುಧವಾರ, ಜುಲೈ 11) ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ರೈಲಿನಲ್ಲಿ ಬರುತ್ತಿದ್ದೆ. ಆ ಹೊತ್ತಿಗೆ ಒಬ್ಬ ಮಹಿಳೆ ಬಂದು, ನನ್ನ ಹತ್ತಿರವೇ ಒಂದು ಕಾರ್ಡ್ ಎಸೆದಳು. ಆದರಲ್ಲಿ ತಾನು ಕಷ್ಟದಲ್ಲಿದ್ದೀನಿ. ನೀವು ಸಹಾಯ ಮಾಡಿದರೆ ಒಂದಿಷ್ಟು ಅನುಕೂಲ ಆಗುತ್ತದೆ ಎಂಬ ಒಕ್ಕಣೆ ಇತ್ತು. ಇಂಥ ಕಾರ್ಡ್ ಗಳು ನನಗೆ ಖಂಡಿತಾ ಹೊಸದಲ್ಲ.
ಆದರೆ, ಈ ರೀತಿಯ ಕಾರ್ಡ್ ಎಸೆಯುವ ಮಹಿಳೆಯರ ಜತೆಗೆ ಕಣ್ಣೇ ಬಿಡದಂತೆ ಸದಾ ನಿದ್ದೆಯಲ್ಲಿರುವ ಮಕ್ಕಳನ್ನು ನೋಡಿ- ನೋಡಿ ಬೇಸತ್ತು ಹೋಗಿದ್ದೀನಿ. ಆ ಮಕ್ಕಳೇಕೆ ಹಾಗೆ ಪ್ರಾಣವೇ ಇಲ್ಲದಂತೆ ಬಿದ್ದುಕೊಂಡಿರ್ತವೆ ಎಂಬ ಅನುಮಾನ ನನ್ನದು. ತಮಿಳಿನ ಯಾವುದೋ ಸಿನಿಮಾದಲ್ಲಿ ನೋಡಿದ ನೆನಪು ಮಕ್ಕಳು ಗಲಾಟೆ ಮಾಡದಿರಲಿ ಅಂತಲೇ ಯಾವುದೋ ನಿದ್ದೆ ಬರುವ ಮಾತ್ರೆ ಹಾಕಿ ಮಲಗಿಸಿರ್ತಾರೆ ಅಂತ. ಅದೆಷ್ಟು ನಿಜವೋ ನನಗೆ ಗೊತ್ತಿಲ್ಲ.
ಆದರೆ, ಇವತ್ತು ನನ್ನ ಜೊತೆಯೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಆ ಮಹಿಳೆ ಜತೆಗೆ ಮಾತಿಗೆ (ಜಗಳಕ್ಕೆ) ಇಳಿದರು. ಈ ರೀತಿ ಭಿಕ್ಷೆ ಬೇಡಬಾರದು. ನಿಂದು ಯಾವ ಊರು, ಆ ಮಗುವನ್ನು ಎಬ್ಬಿಸು... ಹೀಗೆ ಒಂದೇ ಸಮ ಪ್ರಶ್ನೆಗಳನ್ನು ಕೇಳಿದರು. ಪೊಲೀಸರಿಗೆ ಫೋನ್ ಮಾಡುವುದಾಗಿಯೂ ಹೆದರಿಸಿದರು.
ಬಹುಶಃ ಎಂದೂ ಎದುರಿಸದ ಸನ್ನಿವೇಶವೊಂದನ್ನು ಮಗು ಎತ್ತಿಕೊಂಡಿದ್ದ ಮಹಿಳೆ ಎದುರಿಸಿದಳು ಅನ್ನಿಸುತ್ತದೆ. ಯಾವಾಗ ಈ ರೀತಿ ಪ್ರಶ್ನೆ ಎದುರಾಯಿತೋ ಆ ಮಹಿಳೆ ಸಿಟ್ಟಾದಳು. ಇನ್ನು ನಾವೆಲ್ಲ ಸೇರಿ ಆ ಮಗುವನ್ನು ಎಬ್ಬಿಸಲು ಪ್ರಯತ್ನ ಪಟ್ಟರೆ ಅದು ಸಾಧ್ಯವೇ ಆಗಲಿಲ್ಲ. ನಾನೂ ಸೇರಿದಂತೆ ನಾಲ್ಕೈದು ಮಂದಿ ಮಕ್ಕಳ ರಕ್ಷಣಾ ಇಲಾಖೆ ಫೋನ್ ನಂಬರ್ ಗೆ ಕರೆ ಮಾಡಿ, ದೂರು ನೀಡಲು ನಿರ್ಧರಿಸಿದೆವು. ಆ ಕಡೆಯಿಂದ, ನಾವು ಬಂದು ನೋಡಿಕೊಳ್ತೀವಿ ಎಂಬ ಉತ್ತರವೂ ಬಂತು.
ಆದರೆ, ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣಕ್ಕೆ ಬಂದು ಇಳಿದ ಮೇಲೂ ಯಾರೊಬ್ಬರ ಸುಳಿವಿಲ್ಲ. ಟ್ರಾಫಿಕ್ ಸಿಗ್ನಲ್ ಗಳಲ್ಲಿ, ರೈಲುಗಳಲ್ಲಿ, ಹೆಸರಾಂತ ಆಸ್ಪತ್ರೆಗಳ ಬಳಿ ಇಂಥವರು ಕಂಡುಬರುತ್ತಲೇ ಇರುತ್ತಾರೆ. ಇನ್ನು ಇವರ ಕಂಕುಳಲ್ಲಿ ಕಾಣಿಸಿಕೊಳ್ಳುವ ಮಕ್ಕಳು ಎಚ್ಚರವಾಗಿದ್ದದ್ದು ಯಾರಾದರೂ ಕಂಡಿದ್ದರೆ ಹೇಳಲಿ ನೋಡೋಣ. ನಾವು ಎಷ್ಟು ಹೊತ್ತು ಅಂತ ಅಧಿಕಾರಿಗಳಿಗೆ ಕಾಯೋದು ಅಂತ ಹೊರಟು ಬಂದಿವಿ.
ಈ ರೀತಿ ಮಹಿಳೆಯರು ಭಿಕ್ಷೆ ಬೇಡುವುದನ್ನು ಯಾರು ಏಕೆ ಪ್ರಶ್ನೆ ಮಾಡುವುದಿಲ್ಲ? ಇಂಥವರು ಒಬ್ಬಿಬ್ಬರಲ್ಲ, ಒಂದು ದೊಡ್ಡ ಗುಂಪೇ ಇದೆ. ಏಕೆಂದರೆ, ಇದೇ ರೀತಿಯ ಮಹಿಳೆಯರನ್ನು ರೈಲಿನಲ್ಲಿ ಪ್ರತಿ ದಿನ ನೋಡ್ತಾ ಇರ್ತೀನಿ. ಆ ಮಕ್ಕಳು ಏಕೆ ಕಣ್ಣೇ ಬಿಡುವುದಿಲ್ಲ ಅನ್ನೋದಂತೂ ಯಕ್ಷ ಪ್ರಶ್ನೆ. ನಿಮಗೊಂದು ಫೋಟೋ ಕಳಿಸ್ತೀನಿ. ಇವತ್ತು ನಮಗೆ ಕಂಡ ಮಹಿಳೆ ಫೋಟೋ ಅದು. ಇನ್ನು ನನ್ನ ಫೋನ್ ನಂಬರ್ ತೆಗೆದುಕೊಳ್ಳಿ. ಇನ್ನೇನು ಮಾಹಿತಿ ಬೇಕು ಅಂದರೂ ಕರೆ ಮಾಡಿ ಎಂದು ಹೇಳಿ ಆ ಯುವತಿ ಫೋನಿಟ್ಟರು.
ಹಾಗಿದ್ದರೆ ಇಂಥ ಪರಿಸ್ಥಿತಿ ಅಥವಾ ಸನ್ನಿವೇಶವನ್ನು ತಡೆಯುವುದು ಹೇಗೆ ಅನ್ನೋದು ತಲೆಯಲ್ಲಿ ಕೊರೆಯುವುದಕ್ಕೆ ಶುರುವಾಯಿತು. ಈ ರೀತಿ ಮಕ್ಕಳನ್ನು ಕಂಕುಳಲ್ಲಿ ಇಟ್ಟುಕೊಂಡ ಮಹಿಳೆಯರು ಕಂಡಾಗ ಸಾರ್ವಜನಿಕರು ಒಟ್ಟಾಗಿ ಪ್ರಶ್ನಿಸಬೇಕು. ಯಾವ ಕಾರಣಕ್ಕೂ ಅವರಿಗೆ ಹಣ ನೀಡಬಾರದು. ತಕ್ಷಣವೇ ಸಂಬಂಧಪಟ್ಟ ಇಲಾಖೆಗೆ ಫೋನ್ ಮಾಡಿ ತಿಳಿಸಬೇಕು. ಇದು ನಮಗ್ಯಾಕೆ- ನಮ್ಮ ಜವಾಬ್ದಾರಿ ಅಲ್ಲ ಎಂಬ ಆಲೋಚನೆ ಬಿಟ್ಟರೆ ಬದಲಾವಣೆ ನಿರೀಕ್ಷೆ ಮಾಡಬಹುದು ಅನ್ನಿಸಿತು.