ಬಿಬಿಎಂಪಿ ತೆರವು ಕಾರ್ಯಾಚರಣೆ ಬಂದ್ ಮಾಡಿದ್ದೇಕೆ?
ಬೆಂಗಳೂರು, ಆಗಸ್ಟ್, 23: ಬೆಂಗಳೂರಿನಾದ್ಯಂತ ರಾಜಕಾಲುವೆ ಒತ್ತುವರಿ ಹೆಸರಲ್ಲಿ ಜೆಸಿಬಿ ಘರ್ಜನೆ ಮಾಡಿಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇದ್ದಕ್ಕಿದ್ದಂತೆ ಸುಮ್ಮನಾಗಿದೆ. ಅದಕ್ಕೆ ಕಾರಣ ಏನು ಎಂದು ಕೇಳಿದರೆ ಜಂಟಿ ಸರ್ವೆ ಮಾಡಿ ಮುಂದೆ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಉತ್ತರ ನೀಡುತ್ತದೆ.[ರಾಜಕಾಲುವೆ ಒತ್ತುವರಿ ವಿವರ ಈಗ ವೆಬ್ಸೈಟ್ನಲ್ಲಿ ಲಭ್ಯ]
ಇಷ್ಟು ದಿನ ಜನರ ಮಾತಿಗೆ ಬೆಲೆಕೊಡದೆ ತಾನು ಮಾಡಿದ್ದೆ ಅಂತಿಮ, ಕಂದಾಯ ಇಲಾಖೆಯ ವರದಿಯೇ ಅಂತಿಮ ಎಂದು ಹೇಳುತ್ತಾ ಆಗಸ್ಟ್ 6 ರಿಂದ ಕಾರ್ಯಾಚರಣೆ ಆರಂಭಿಸಿದ್ದ ಬಿಬಿಎಂಪಿ ಬೊಮ್ಮನಹಳ್ಳಿ ವಲಯದ ಅವನಿ ಶೃಂಗೇರಿನಗರ, ಮಹದೇವಪುರ ವಲಯದ ಕಸವನಹಳ್ಳಿ ಹಾಗೂ ಯಲಹಂಕ ವಲಯದ ಶಿವನಹಳ್ಳಿಯಲ್ಲಿ ಅನೇಕರ ಮನೆ ಒಡೆದು ಹಾಕಿತ್ತು.[ಮನೆ ಕಳೆದುಕೊಂಡವರಿಂದ ಬಿಬಿಎಂಪಿಗೆ ಪ್ರಶ್ನೆಗಳ ಸುರಿಮಳೆ]
ಯಾವ ಕಾರಣಕ್ಕೂ ಒತ್ತುವರಿ ತೆರವು ಕಾರ್ಯಾಚರಣೆ ನಿಲ್ಲಿಸಲ್ಲ, ಪ್ರಭಾವಿಗಳ ಮಾತಿಗೂ ಬೆಲೆ ಕೊಡಲ್ಲ ಎಂದು ಹೇಳಿದ್ದ ಬಿಬಿಎಂಪಿ ಇದೀಗ ಏಕೆ ಇಬ್ಬಗೆಯ ನೀತಿ ಅನುಸರಿಸುತ್ತಿದೆ ಎಂಬುದು ಸಾಮಾನ್ಯ ನಾಗರಿಕನ ಪ್ರಶ್ನೆ....
ಕಾರ್ಯಾಚರಣೆ ಕೈ ಬಿಡುವ ನಾಟಕ?
ಒರಾಯನ್ ಮಾಲ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ, ಮಾನ್ಯತಾ ಟೆಕ್ ಪಾರ್ಕ್, ಶಾಮನೂರು ಶಿವಶಂಕರಪ್ಪ ಅವರ ಎಸ್ ಎಸ್ ಆಸ್ಪತ್ರೆ ಸಹ ರಾಜಕಾಲುವೆ ಭಾಗದಲ್ಲಿ ನಿರ್ಮಾಣವಾಗಿದೆ ಎಂಬ ಪ್ರಾಥಮಿಕ ಅಂಕಿ ಅಂಶಗಳು ಸಿಕ್ಕಿದ್ದೇ ಬಿಬಿಎಂಪಿ ಕಾರ್ಯಾಚರಣೆ ಬಂದ್ ಮಾಡಲು ಕಾರಣ ಎಂಬುದು ನಾಗರಿಕರ ಆರೋಪ.
ಜಂಟಿ ಸರ್ವೆ ಮಾಡ್ತೇವೆ
ರಾಜರಾಜೇಶ್ವರಿನಗರ ಐಡಿಯಲ್ ಹೋಂ ಬಡಾವಣೆ, ಒರಾಯನ್ ಮಾಲ್, ಮಾನ್ಯತಾ ಟೆಕ್ ಪಾರ್ಕ್ ಬಳಿ ಇನ್ನೊಂದು ಸುತ್ತಿನ ಜಂಟಿ ಸರ್ವೆ ಮಾಡುತ್ತೇವೆ, ವರದಿ ಬರಲು ಮೂರು ದಿನ ಬೇಕಿದ್ದು ಅಕ್ರಮ ಕಟ್ಟಡ ನೆಲಸಮ ಮಾಡುವುದಕ್ಕೆ ಬದ್ಧ ಎಂದು ಆಯುಕ್ತ ಮಂಜುನಾಥ ಪ್ರಸಾದ್ ಹೇಳಿಕೆ ನೀಡಿದ್ದಾರೆ.
ಯಾರಿಂದ ಸರ್ವೆ
ಕಂದಾಯ ಇಲಾಖೆ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜಂಟಿಯಾಗಿ ಸರ್ವೆ ಮಾಡಲಿದೆ. ದಾಖಲೆಗಳನ್ನು ಇನ್ನೊಂದು ಸುತ್ತು ಪರಿಶೀಲನೆ ಮಾಡಿ ಮುಂದಕ್ಕೆ ಹೆಜ್ಜೆ ಇಡಲಿದೆ.
ಗಣ್ಯರ ಆಸ್ತಿಗೆ ಸರ್ವೆ ಏಕೆ?
ಕಾಡಿ ಬೇಡಿಕೊಂಡರೂ ಸಾಮಾನ್ಯ ಜನರಿಗೆ ತೆರವಿಗೆ ಕೆಲ ದಿನಗಳ ಅವಕಾಶವನ್ನು ನೀಡದೆ ಮನೆ ತೆರವು ಮಾಡಿದ ಬಿಬಿಎಂಪಿ ಇದೀಗ ಜಂಟಿ ಸರ್ವೆ ಮಾಡುತ್ತಿರುವುದು ಯಾಕೆ? ಸಾಮಾನ್ಯ ಜನರಿಗಿಲ್ಲದ ಜಂಟಿ ಸರ್ವೆ, ಪ್ರತಿಷ್ಠಿತರಿಗೆ ಮಾತ್ರ ಏಕೆ? ಜನರ ಪ್ರಶ್ನೆಗೆ ಬಿಬಿಎಂಪಿಯೇ ಉತ್ತರ ಹೇಳಬೇಕು.
ಹಿರೇಮಠ್ ಆಗ್ರಹ
ರಾಜಕಾಲುವೆ ಒತ್ತುವರಿ ಪ್ರಕರಣದಲ್ಲಿ ಸಣ್ಣ-ಪುಟ್ಟ ಒತ್ತುವರಿ ಮಾತ್ರ ತೆರವು ಮಾಡಲಾಗಿದೆ. ಬಡವರನ್ನು ಗುರಿಯಾಗಿರಿಸಿಕೊಂಡು ಕಾರ್ಯಾಚರಣೆ ಮಾಡಲಾಗಿದೆ. ಇದೇ ರೀತಿ ಶ್ರೀಮಂತರು ಹಾಗೂ ಬಲಾಢ್ಯರ ಒತ್ತುವರಿಯನ್ನೂ ತೆರವುಗೊಳಿಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯ ಮುಖ್ಯಸ್ಥ ಎಸ್.ಆರ್. ಹಿರೇಮಠ್ ಆಗ್ರಹಿಸಿದ್ದಾರೆ.
ಪ್ರಕರಣ ನ್ಯಾಯಾಲಯದಲ್ಲಿದೆ
ಪ್ರಕರಣ ನ್ಯಾಯಾಲಯದಲ್ಲಿದೆ. ರಾಜಕಾಲುವೆ ಒತ್ತುವರಿ ತೆರವು ಸಂಬಂಧ ನ್ಯಾಯಾಲಯ ಸ್ಪಷ್ಟ ಆದೇಶ ನೀಡುವವರೆಗೂ ಬಿಬಿಎಂಪಿ ಯಾವ ಆಸ್ತಿಯನ್ನು ಮುಟ್ಟಬಾರದು ಎಂದು ಐಡಿಯಲ್ ಹೋಂ ಸಂಸ್ಥೆ ಹೇಳಿದೆ.