ಯಾಕ್ ಸಾರ್, ಭಾರತ ಬಂದ್ ಇಲ್ವಾ? ನನ್ನದು ಒಂದೇ ಉತ್ತರ 'ಗೊತ್ತಿಲ್ಲ'!
ಬೆಂಗಳೂರು, ಸೆಪ್ಟೆಂಬರ್ 10 : "ಏನ್ ಸಾರ್ ಇವತ್ತು ಭಾರತ್ ಬಂದ್ ಇಲ್ವಾ?" ಎಂದು ಗೊತ್ತಿದ್ದೂ ಗೊತ್ತಿಲ್ಲದವನ ಹಾಗೆ ಪೆಟ್ರೋಲ್ ಬಂಕ್ ನಲ್ಲಿ ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ತುಂಬಿಸುತ್ತಿದ್ದ ಇಳಿ ವಯಸ್ಸಿನ ವ್ಯಕ್ತಿಯೊಬ್ಬನಿಗೆ ಕೇಳಿದಾಗ ಬಂದ ಒಂದೇ ಉತ್ತರ "ಗೊತ್ತಿಲ್ಲ!"
LIVE: ಇಂದು ಭಾರತ್ ಬಂದ್: ಬಳ್ಳಾರಿಯಲ್ಲಿ ರೈಲು ತಡೆದ ಪ್ರತಿಭಟನಾಕಾರರು
ನಗರದಲ್ಲಿ ಎಷ್ಟೋ ಪೆಟ್ರೋಲ್ ಬಂಕ್ ಗಳು ಬಂದ್ ಆಗಿವೆ. ನಿಮ್ಮದು ತೆರೆದಿದೆಯಲ್ಲ. ನಿಮಗೆ ರಜಾ ಇಲ್ವಾ? ಎಂಬ ಪ್ರಶ್ನೆಗೂ ಆ ವಯೋವೃದ್ಧನ ಒಂದೇ ಉತ್ತರ "ನನ್ನದು ಒಂದೇ ಉತ್ತರ, ಗೊತ್ತಿಲ್ಲ" ಎಂಬ ಖಡಾಖಂಡಿತ ಮಾತು! ಬೇರೆ ಮಾತು ಬೇಕಾಗೇ ಇರಲಿಲ್ಲ. ಪೆಟ್ರೋಲ್ ತುಂಬಿಸಿಕೊಂಡು ಜಾಗ ಖಾಲಿ ಮಾಡು ಎನ್ನುವಂತಿತ್ತು ಆತನ ನೋಟ. ಇಂದಿನ ಪೆಟ್ರೋಲ್ ರೇಟ್ ಎಷ್ಟಿದೆಯೆಂದು ನೋಡಿದರೆ 83.41 ರುಪಾಯಿ ತೋರಿಸುತ್ತಿತ್ತು.
ಆ ವ್ಯಕ್ತಿ ಪೆಟ್ರೋಲ್, ಡೀಸೆಲ್ ಏರಿಕೆಯ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣಲಿಲ್ಲ, ಬಂದ್ ಬಗ್ಗೆ ದಿವ್ಯ ನಿರ್ಲಕ್ಷ್ಯ ಇದ್ದಂತಿತ್ತು. ದೇಶದಲ್ಲಾಗುತ್ತಿರುವ ತೈಲೋತ್ಪನ್ನ ಬೆಲೆ ಏರಿಕೆ ವಿರುದ್ಧ ನಡೆಯುತ್ತಿರುವ ಭಾರತ ಬಂದ್ ಬಗ್ಗೆ ಯಾವುದೇ ಉತ್ಸಾಹವೂ ಇರಲಿಲ್ಲ. ಆತನಿಗೆ ಬೇಕಾಗಿದ್ದುದು, ಇಂದಿನ ಕೂಳಿಗೆ ಬೇಕಾಗಿರುವ ದುಡಿಮೆ ಮಾತ್ರ.
ಭಾರತ್ ಬಂದ್: ಬೆಂಗಳೂರಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಬಂದ್ ದಿನ ಮಾಡುವುದಾದರೂ ಏನು? ಪ್ರತಿಭಟನೆಯಲ್ಲಿ ಪಾಲ್ಗೊಂಡು ಟೈರಿಗೆ ಬೆಂಕಿ ಹಚ್ಚುವುದಾ? ಕಂಡಕಂಡ ಬಸ್ಸಿಗೆ ಕಲ್ಲು ಎಸೆಯುವುದಾ? ಅರ್ಧ ಶಟರ್ ಎತ್ತಿದ ಅಂಗಡಿಯನ್ನು ಪೂರ್ತಿ ಮುಚ್ಚಿಸುವುದಾ? ಹೆಂಡತಿ ಮಕ್ಕಳನ್ನು ಕರೆದುಕೊಂಡು ಟೂರಿಗೆ ಹೋಗುವುದಾ? ಮನೆಯಲ್ಲಿ ಖಾಲಿ ಕುಳಿತುಕೊಂಡು ಹೆಂಡತಿ ಮಕ್ಕಳೊಂದಿಗೆ ಛಕ್ಕಾಒಂಟಿ ಆಡುವುದಾ? ಕೆಲಸ ಮಾಡಿ ನಾಲ್ಕು ಕಾಸು ಗಿಟ್ಟಿಸಿದರೆ ಸಂಜೆ ಹೊತ್ತಿನಲ್ಲಿ ಹೊಟ್ಟೆ ತುಂಬ ಊಟ ಮಾಡುವುದು, ಮಕ್ಕಳ ಭವಿಷ್ಯಕ್ಕಾಗಿ ಒಂದಿಷ್ಟು ಹಣ ಕೂಡಿಡಬಹುದು.
ಬಂದ್ ಬಗ್ಗೆ ಆ ವ್ಯಕ್ತಿಯೊಬ್ಬನದ್ದೇ ಅಲ್ಲ ನಿರ್ಲಿಪ್ತ ಭಾವನೆ. ಎಳೆನೀರು ಮಾರುವವನು, ತನಗೂ ಈ ಲೋಕದ ಇತರ ವ್ಯಾಪಾರಕ್ಕೂ ಸಂಬಂಧವೇ ಇಲ್ಲ ಎಂದು ಎಳೆನೀರು ಗಿರಾಕಿಗಳಿಗಾಗಿ ಕಾಯುತ್ತಿದ್ದ, ಹೂವು ಮಾರುವವಳು ಮಾರುಕಟ್ಟೆಯಿಂದ ಫ್ರೆಶ್ ಆಗಿ ತಂದ ಹೂವುಗಳನ್ನು ಮಾರುವುದರಲ್ಲಿ ನಿರತಳಾಗಿದ್ದಳು, ಕಿರಾಣಿ ಅಂಗಡಿಯವ ಯಾರಾದರೂ ಬಂದು ಬಲವಂತವಾಗಿ ಬಂದ್ ಮಾಡಿಸಿದರೆ ನಂತರ ನೋಡಿಕೊಂಡರಾಯಿತು, ಅಲ್ಲೀತನಕ ಎಷ್ಟಾಗುತ್ತೋ ಅಷ್ಟು ವ್ಯಾಪಾರವಾಗಲಿ ಎಂದು ಎಲ್ಲ ಕಾಳುಕಡಿಗಳನ್ನು ಸಜ್ಜುಮಾಡುತ್ತಿದ್ದ. ಪೌರ ಕಾರ್ಮಿಕರು ಎಂದಿನಂತೆ ತಮ್ಮ ಕೆಲಸದಲ್ಲಿ ಮುಳುಗಿದ್ದರು.
ಭಾರತ್ ಬಂದ್: ರಾಜ್ಯ ಸರಕಾರವನ್ನು ಹುರಿದು ಮುಕ್ಕಿದ ಹಿರಿಯ ಕಾಂಗ್ರೆಸ್ ಮುಖಂಡ
ಹಾಗಿದ್ದರೆ ಬಂದ್ ಬೇಕಾಗಿರುವುದು ಯಾರಿಗೆ? ಕೇಂದ್ರ ಸರಕಾರದ ನೀತಿಗಳ ವಿರುದ್ಧ ಕೆರಳಿ ನಿಂತಿರುವ ವಿರೋಧ ಪಕ್ಷಗಳಿಗಾ, ಇದೇ ತಕ್ಕ ಸಮಯವೆಂದು ಕಲ್ಲು ಎಸೆಯಲು, ಟೈರು ಸುಟ್ಟು ಭಸ್ಮ ಮಾಡಲು ತಯಾರಾಗಿ ನಿಂತಿರುವ ಪುಂಡರಿಗಾ, ಪ್ರತಿಭಟನೆಯಲ್ಲಿ ಪಾಲ್ಗೊಂಡು ಧಿಕ್ಕಾರ ಕೂಡಿ, ರಾಜಕೀಯ ಪಕ್ಷಗಳಿಂದ ಒಂದಿಷ್ಟು ಗಿಟ್ಟಿಸಲು ಕಾತುರದಿಂದಿರುವ ಹೋರಾಟಗಾರರಿಗಾ, ಬೆಲೆ ಏರಿಕೆಯಿಂದ ಬಸವಳಿದು ಹೋಗಿರುವ ಶ್ರೀಸಾಮಾನ್ಯರಿಗಾ, ಬಂದ್ ಬೇಕಾಗಿರುವುದು ಯಾರಿಗೆ?
ಫಲಕಗಳನ್ನು ಹಿಡಿದುಕೊಂಡು ಪ್ರತಿಭಟನೆ ಮಾಡಿ ಒಂದಿಷ್ಟು ಧಿಕ್ಕಾರ ಕೂಗುವ ಜನರಲ್ಲಿಯೂ ಅಂದು ಎಷ್ಟೋ ಜನರು ದೈನಂದಿನ ಕೂಳಿನಿಂದ ವಂಚಿತರಾಗಿರುತ್ತಾರೆ, ಕಲ್ಲು ತೂರಾಟ ಬೆಂಕಿ ಹಚ್ಚುವಿಕೆಯಿಂದ ಎಷ್ಟೋ ಕೋಟಿ ನಷ್ಟವಾಗಿರುತ್ತದೆ. ಇದರ ಲೆಕ್ಕ ಮರುದಿನ ಸಿಗುತ್ತದೆ. ಅಥವಾ ಪ್ರತಿಭಟನೆಗೆ ಬೆದರಿ ಡಾಲರ್ ತನ್ನ ನಾಗಾಲೋಟವನ್ನು ನಿಲ್ಲಿಸುತ್ತದಾ ಅಥವಾ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿಯುತ್ತದಾ?