ರಾಹುಲ್ ವಿರುದ್ಧ ಸೊಲ್ಲೆತ್ತಿದ ಶೆಹಜಾದ್ ಪೂನಾವಾಲಾ, ಪರಿಚಯ
ಬೆಂಗಳೂರು, ಡಿಸೆಂಬರ್ 04 : ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ 'ಕುಟುಂಬ ರಾಜಕಾರಣ'ದ ವಿರುದ್ಧ ತಿರುಗಿಬಿದ್ದಿರುವ ಏಕೈಕ ವ್ಯಕ್ತಿ, ಈ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯಿಂದ ಭರ್ತಿ ಪ್ರಶಂಸೆಗೊಳಗಾಗಿರುವ 30 ವರ್ಷದ ಯುವ ಕಾಂಗ್ರೆಸ್ ನೇತಾರ ಶೆಹಜಾದ್ ಪೂನಾವಾಲಾ ಇದ್ದಕ್ಕಿದ್ದಂತೆ ಲೈಮ್ಲೈಟಿಗೆ ಬಂದಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ಕಾಂಗ್ರೆಸ್ ನಲ್ಲೇ ಭುಗಿಲೆದ್ದ ಅಸಮಾಧಾನ!
2002ರಲ್ಲಿ ಗುಜರಾತ್ ಹತ್ಯಾಕಾಂಡ ನಡೆದಿದ್ದಾಗ ಅದರಿಂದ ರೋಸಿಹೋಗಿ ರಾಜಕೀಯ ಸೇರಲು ನಿರ್ಧರಿಸಿದ್ದ ಶೆಹಜಾದ್ ಪೂನಾವಾಲಾನ ವಯಸ್ಸು ಆಗ ಕೇವಲ 15. ನಮ್ಮಂಥ ಯುವಕರೇ ವ್ಯವಸ್ಥೆಯೊಳಗೆ ಇಳಿಯದಿದ್ದರೆ ಇಂಥ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇರುತ್ತವೆ ಎಂದು ಅವರು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರು.
ಚಿನ್ನದ ಚಮಚವನ್ನು ಬಾಯಿಯಲ್ಲಿ ಇಟ್ಟು ಹುಟ್ಟಿದ ಶೆಹಜಾದ್ ಪೂನಾವಾಲಾ 'ರಾಜಕೀಯವೆಂದರೆ ನನ್ನ ಪ್ರಕಾರ ಚುನಾವಣೆಯಲ್ಲಿ ಜಯಭೇರಿ ಬಾರಿಸುವುದಲ್ಲ, ಸೀಟು ಗೆದ್ದು ಸರಕಾರವನ್ನು ರಚಿಸುವುದಲ್ಲ, ಬದಲಾಗಿ ಸಮಾಜ ಹೇಗಿರಬೇಕು ಎಂಬ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವುದು' ಎಂದು ಪಕ್ಕಾ ರಾಜಕಾರಣಿ ಸ್ಟೈಲಲ್ಲಿ ಹೇಳಿ ರಾಜಕೀಯಕ್ಕೆ ಧುಮುಕಿದವರು.
ರಾಹುಲ್ ವಿರುದ್ಧ ಶೆಹ್ಜಾದ್ ಹೇಳಿಕೆಗೆ ಸಹೋದರ ತೆಹ್ಸೀನ್ ಖಾರದ ಪ್ರತಿಕ್ರಿಯೆ
"ರಾಜಕೀಯ ಅಂದ್ರೆ ಫ್ಯಾಮಿಲಿ ಬಿಸಿನೆಸ್ ಅಂದುಕೊಂಡ್ರಾ? ಬೇಕಿದ್ದರೆ ನನ್ನ ಜೊತೆ ಮುಕ್ತ ಚರ್ಚೆಗೆ ಬನ್ನಿ" ಎಂದು ರಾಹುಲ್ ಗಾಂಧಿ ಅವರಿಗೆ ಬಹಿರಂಗವಾಗಿ ಪತ್ರ ಬರೆದು ಸೆಡ್ಡು ಹೊಡೆದಿರುವ ಶೆಹಜಾದ್, ಮಹಾರಾಷ್ಟ್ರದ ರಾಜಕೀಯ ಅಂಗಳದಲ್ಲಿ ಗಾಂಧಿ ಕುಟುಂಬ ಸದಸ್ಯ ಎಂದೇ ಜನಜನಿತರಾಗಿದ್ದಾರೆ. ಆದರೆ, ಇದ್ದಕ್ಕಿದ್ದಂತೆ ಹೀಗೆ ತಿರುಗಿಬೀಳಲು ಕಾರಣವಾದರೂ ಏನು? ಯಕ್ಷ ಪ್ರಶ್ನೆ!
ಪುಣೆಯಲ್ಲಿ ರಾಜಕಾರಣಿ, ದೆಹಲಿಯಲ್ಲಿ ವಕೀಲ
ಪುಣೆಯ ಶ್ರೀಮಂತ ಕುಟುಂಬದಲ್ಲಿ ಹುಟ್ಟಿರುವ ಶೆಹಜಾದ್ ಪೂನಾವಾಲಾ ಅವರು, ಪುಣೆಯ ಎಂಐಟಿ ಸ್ಕೂಲ್ ಆಫ್ ಗವರ್ನಮೆಂಟ್ ನಲ್ಲಿ ಪದವಿ, ಇಂಡಿಯನ್ ಲಾ ಸ್ಕೂಲ್ ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿ, ಪ್ರಸ್ತುತ ದೆಹಲಿಯಲ್ಲಿ ವಕೀಲರಾಗಿ ಕಳೆದ ನಾಲ್ಕೈದು ವರ್ಷಗಳಿಂದ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಅಲ್ಲದೆ, ಅವರು ನಾಗರಿಕ ರಕ್ಷಣಾ ಕಾರ್ಯಕರ್ತರಾಗಿಯೂ ಸಾಕಷ್ಟು ಹೆಸರು ಗಳಿಸಿದ್ದಾರೆ.
ಧರ್ಮ ಮುಸ್ಲಿಂ, ಸಂಸ್ಕೃತಿ ಹಿಂದೂ
ಕಾಲೇಜು ಓದುತ್ತಿದ್ದಾಗ ಎನ್ಎಸ್ಯುಐ ಸೇರಿ, ಯುವ ಕಾಂಗ್ರೆಸ್ ಸದಸ್ಯನಾಗಿ ರಾಜಕೀಯಕ್ಕೆ ಧುಮುಕಿದ ಅವರು, ನಂತರ ಪುಣೆಯ ಕಾಂಗ್ರೆಸ್ ಘಟಕದ ಉಪಾಧ್ಯಕ್ಷರಾಗಿ ಮೇಲಕ್ಕೇರಿದರು. ಅವರು ತಮ್ಮನ್ನು ತಾವು ನೆಹರೂವಾದಿ, ಗಾಂಧೀವಾದಿ, ನಾಗರಿಕ ಹಕ್ಕು ಹೋರಾಟಗಾರ, TEDx ಸ್ಪೀಕರ್, ಅಂಕಣಕಾರ, ನನ್ನ ಧರ್ಮ ಮುಸ್ಲಿಂ ಆದರೂ, ನನ್ನ ಸಂಸ್ಕೃತಿ ಹಿಂದೂ, ವಿಚಾರವಾದ ಭಾರತೀಯವಾದದ್ದು ಎಂದು ಬಣ್ಣಿಸಿಕೊಂಡಿದ್ದಾರೆ.
ಮಹಾರಾಷ್ಟ್ರ ಕಾಂಗ್ರೆಸ್ ಕಾರ್ಯದರ್ಶಿ
ಪ್ರಸ್ತುತ ಮಹಾರಾಷ್ಟ್ರ ಕಾಂಗ್ರೆಸ್ ಕಾರ್ಯದರ್ಶಿಯಾಗಿರುವ ಶೆಹಜಾದ್ 2008ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರಿಕೊಂಡರು. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಾಧ್ಯಮ ವಿಭಾಗದ ಸಂಶೋಧನಾ ಮಂಡಳಿಯಲ್ಲಿ ಅವರು ಕಾರ್ಯ ನಿರ್ವಹಿಸಿದ್ದಾರೆ. ರೋಹಿತ್ ವೇಮುಲ ಆತ್ಮಹತ್ಯೆಯ ನಂತರ ಪ್ರತಿಭಟನೆ ಭುಗಿಲೆದ್ದಿದ್ದಾಗ, ವಕೀಲರಾಗಿರುವ ಅವರು ಜೆಎನ್ಯು ಪರವಾಗಿ ವಕಾಲತ್ತು ವಹಿಸಿಕೊಂಡಿದ್ದರು.
ಗಾಂಧಿ ಕುಟುಂಬದ ವಿರುದ್ಧ ದನಿಯೆತ್ತಿದ ದಿಟ್ಟಿಗ
ಇದೀಗ ಗಾಂಧಿ ಕುಟುಂಬ ರಾಜಕಾರಣದ ವಿರುದ್ಧ ತಿರುಗಿಬಿದ್ದಿದ್ದು, ರಾಹುಲ್ ಪರವಾಗಿ ಮತ ಹಾಕುವವರು ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ಪರ ಸ್ವಾಮಿನಿಷ್ಠೆ ಹೊಂದಿರುವವರು, ಇಂಥವರ ವಿರುದ್ಧ ದನಿಯೆತ್ತಲು ಧೈರ್ಯ ಬೇಕು. ಈಗ ನನ್ನ ವಿರುದ್ಧವೂ ಎಲ್ಲ ಬಗೆಯ ಟೀಕಾಸ್ತ್ರಗಳು ಬರುತ್ತಿವೆ. ಆದರೆ, ನನ್ನ ಬಳಿ ಎಲ್ಲದಕ್ಕೂ ಉತ್ತರವಿದೆ ಎಂದು ಎದೆಸೆಟಿಸಿ ಹೇಳಿದ್ದಾರೆ ಶೆಹಜಾದ್ ಪೂನಾವಾಲಾ.
ಪ್ರತಿನಿತ್ಯ ಒಂದು ಗಂಟೆ ತಪ್ಪದೆ ವ್ಯಾಯಾಮ
ಒಬ್ಬ ರಾಜಕಾರಣಿ ತನ್ನ ದೇಹದಾರ್ಢ್ಯವನ್ನು ಕಾಪಾಡಿಕೊಳ್ಳದಿದ್ದರೆ ದೇಶವನ್ನು ಹೇಗೆ ಕಾಪಾಡಬಲ್ಲ ಎಂದು ಪ್ರಶ್ನಿಸುವ ಅವರು, ಪ್ರತಿನಿತ್ಯ ಒಂದು ಗಂಟೆ ವ್ಯಾಯಾಮವನ್ನು ಮಾಡುತ್ತಾರೆ. ಅಲ್ಲದೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವಾರು ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ ಶೆಹಜಾದ್ ಪೂನಾವಾಲಾ. ಸದ್ಯಕ್ಕೆ ಅವರನ್ನು ಕಾಂಗ್ರೆಸ್ಸಿನಿಂದ ಕಿತ್ತುಹಾಕಲಾಗಿದೆ.