ಚುನಾವಣೆ ಮುಗಿದರೂ ಆರಂಭವಾಗದೆ ಅರ್ಧಕ್ಕೆ ನಿಂತ ವೈಟ್ ಟಾಪಿಂಗ್ ಕಾಮಗಾರಿ
ಬೆಂಗಳೂರು, ಜೂನ್ 8: ವಿಧಾನಸಭಾ ಚುನಾವಣೆಗೂ ಮುನ್ನ ನಗರದ ವಿವಿಧ ಭಾಗಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆದಿದೆ. ಚುನಾವಣೆ ಘೋಷಣೆಯಾದ ಬಳಿಕ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.
ಆದರೆ ಚುನಾವಣೆ ಮುಗಿದು ತಿಂಗಳಾಗುತ್ತಾ ಬಂದಿದೆ, ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ ಆದರೆ ಕಾಮಗಾರಿ ಇನ್ನೂ ವಿಳಂಬವಾಗುತ್ತಲೇ ಇದೆ. ಮೈಸೂರು ರಸ್ತೆ, ಹೊಸೂರು ರಸ್ತೆ, ಹೊರ ವರ್ತುಲ ರಸ್ತೆ, ಹೆಣ್ಣೂರು ಜಂಕ್ಷನ್ನಿಂದ ಕೆಆರ್ ಪುರ ವರೆಗಿನ ರಸ್ತೆ, ವಿಜಯನಗರ ವೆಸ್ಟ್ ಆಫ್ ಕಾರ್ಡ್ ರಸ್ತೆ, ತುಮಕೂರು ರಸ್ತೆ, ಗೊರಗುಂಟೆ ಪಾಳ್ಯ ಸೇರಿದಂತೆ ಮೊದಲ ಹಂತದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಆರಂಭವಾಗಿದ್ದ ರಸ್ತೆಗಳಲ್ಲಿ ಕಾಮಗಾರಿ ಅರ್ಧಕ್ಕೆ ನಿಂತು ಹೋಗಿದೆ.
ಬೆಂಗಳೂರು: ಇನ್ನೂ 150 ಕಿ.ಮೀ ರಸ್ತೆಗೆ ವೈಟ್ ಟಾಪಿಂಗ್
ಚುನಾವಣೆ ಬಳಿಕ ಪ್ರಾರಂಭವಾಗಬೇಕಿದ್ದ ಕಾಮಗಾರಿಗೆ ಇನ್ನೂ ಮುಹೂರ್ತ ಬಂದಿಲ್ಲ, ಮಳೆ ಬಂದು ಜನರು, ವಾಹನಗಳ ಸಂಚಾರಕ್ಕೆ ಪರದಾಡುತ್ತಿದ್ದರೂ ಬಿಬಿಎಂಪಿ ಕಣ್ಣಿಗೆ ಕಾಣುತ್ತಿಲ್ಲ, ರಾಜಕಾಲುವೆ ದುರಸ್ತಿ ಕಾಮಗಾರಿ, ಗುಂಡಿ ಬಿದ್ದಿರುವ ರಸ್ತೆಗಳ ದುರಸ್ತಿ ಕಾರ್ಯಗಳ ಬಗ್ಗೆ ಏಕೆ ಗಮನಹರಿಸುತ್ತಿಲ್ಲ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಮೊದಲ ಹಂತದಲ್ಲಿ 35 ಕಿ.ಮೀ ಉದ್ದದ ನಗರದ ವಿವಿಧ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಆರಂಭಿಸಿತ್ತು. ಬಹುತೇಕ ರಸ್ತೆಗಳಲ್ಲಿ ಒಂದು ಬದಿಯ ರಸ್ತೆಗೆ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದ್ದು, ಇದರಿಂದ ಸುಮಾರು 13 ಕಿ.ಮೀ ಉದ್ದ ಕಾಮಗಾರಿ ಪೂರ್ಣಗೊಂಡಂತಾಗಿದೆ. ವೈಟ್ ಟಾಪಿಂಗ್ ನಿಂತಿಲ್ಲ ಎನ್ನುವ ಹಾರಿಕೆ ಉತ್ತರವನ್ನು ಬಿಬಿಎಂಪಿ ಅಧಿಕಾರಿಗಳು ನೀಡುತ್ತಿದ್ದಾರೆ.