ಬಡ್ಡಿ ಮನ್ನಾ 'ಅಳೋ ಮಕ್ಕಳ ಕೈಗೆ ಅಪ್ಪ ಏನೋ ಕೊಟ್ಟ ಹಾಗೆ': ದೇವೇಗೌಡ
ಬೆಂಗಳೂರು, ಜನವರಿ 4: ದೇಶದಲ್ಲಿ ಬರಗಾಲ, ಕೆಲವೆಡೆ ಪ್ರವಾಹ, ಬೆಳೆ ನಷ್ಟ ಎದುರಿಸುತ್ತಿರುವ ರೈತರಿಗೆ ಸಾಲದ 60 ದಿನಗಳು ಕೇಂದ್ರ ಬಡ್ಡಿ ಮನ್ನಾ ಮಾಡಿರುವುದು ' ಅಳೋ ಮಕ್ಕಳ ಕೈಗೆ ಅಪ್ಪ ಏನೋ ಕೊಟ್ಟ ಹಾಗೆ ಎಂದು ಪ್ರಧಾನಿ ಮೋದಿ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಲೇವಡಿ ಮಾಡಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ನೋಟ್ ಬ್ಯಾನ್ ನಿರ್ಧಾರವನ್ನು ನಾನು ಸ್ವಾಗತಿಸಿದೆ. ಆದರೆ ನಗದು ರದ್ಧತಿ ಬಳಿಕ ತೆಗೆದುಕೊಂಡ 60 ಮಾರ್ಪಾಡುಗಳು ಬೇಸರ ಮುಡಿಸಿವೆ. ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತವೆ ಎಂದು ಮೋದಿ ಹೇಳಿದ್ದರು. ಆದರೆ ದೇಶದ ಜನತೆ ಚಿಲ್ಲರೆಗಾಗಿ ಪರದಾಡುತ್ತಿದ್ದಾರೆ ಎಂದು ಅಸಮಾಧಾನ ಗೊಂಡರು.[ಏಕರೂಪ ನಾಗರಿಕ ಸಂಹಿತೆ ಜಾರಿಗೆ ದೇವೇಗೌಡರ ವಿರೋಧ]
ರಾಜ್ಯದಲ್ಲಿ ಬೀಕರ ಬರಗಾಲವಿದ್ದರೂ ರೈತರ ಸಾಲ ಮನ್ನಾ ಮಾಡದೇ ಕೇವಲ ರೈತರ ಸಾಲಕ್ಕೆ 60ದಿನಗಳ ಬಡ್ಡಿ ಮನ್ನಾ ಮಾಡಿರುವುದು 'ಅಳೋ ಮಕ್ಕಳ ಕೈಗೆ ಅಪ್ಪ ಏನೋ ನೀಡಿ ಸಮಾಧಾನ ಪಡಿಸಿದ ಹಾಗೆ' ಎಂದು ಮಾಜಿ ಪ್ರಧಾನಿ ವ್ಯಂಗ್ಯವಾಡಿದರು.
ಒಳ್ಳೆಯ ಉದ್ದೇಶ ವಿದ್ದರೂ ಪೂರ್ವಾಲೋಚನೆ ಮಾಡದೇ ತೆಗೆದುಕೊಳ್ಳುವ ನಿರ್ದಾರಗಳು ಕಾರ್ಯರೂಪಕ್ಕೆ ಬರುವುದಿಲ್ಲ ಅಂತಯೇ ನೋಟು ನಿಷೇಧ ಕೂಡ ಆಗಿದೆ. ಮೊನ್ನೆ ಮೋದಿಯವರು ಮಾಡಿದ ಭಾಷಣ ನಿರಾಶಾದಾಯಕವಾಗಿತ್ತು. ಕೇವಲ ಮಾತಿನಿಂದ ದೇಶದ ಜನರ ಮನಸನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದರು. ನೋಟು ರದ್ಧತಿ ವಿರುದ್ಧ ಮಮತಾ ಬ್ಯಾನರ್ಜಿ ಸಿಡಿದೆದ್ದಿರುವುದಕ್ಕೆ ಆಕೆ ದಿಟ್ಟ ಮಹಿಳೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.