ಜಯನಗರವನ್ನು ಬೆಳ್ಳಿತಟ್ಟೆಯಲ್ಲಿ ಕಾಂಗ್ರೆಸ್ಸಿಗೆ ಒಪ್ಪಿಸಿದ ಅನಂತ್ ಕುಮಾರ್, ಆರ್ ಅಶೋಕ್
Recommended Video
ರಾಜ್ಯದ 224 ಅಸೆಂಬ್ಲಿ ಕ್ಷೇತ್ರಗಳ ಪೈಕಿ ಬಿಜೆಪಿಯ ಭದ್ರಕೋಟೆಯಲ್ಲಿ ಜಯನಗರ ಕೂಡಾ ಒಂದಾಗಿತ್ತು. ಆದರೆ, ಬದಲಾದ ರಾಜಕೀಯ ಸಮೀಕರಣದಲ್ಲಿ ಕಾಂಗ್ರೆಸ್ ಈ ಕ್ಷೇತ್ರವನ್ನು ಗೆದ್ದುಕೊಂಡಿತು ಎನ್ನುವುದಕ್ಕಿಂತ, ತನ್ನದೇ ತಪ್ಪಿನಿಂದ ಬಿಜೆಪಿ ಈ ಕ್ಷೇತ್ರವನ್ನು ಕೈಚೆಲ್ಲಿತು.
ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಇದೆ ಎನ್ನುವ ಒಂದೇ ಕಾರಣಕ್ಕಾಗಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ಇಲ್ಲಿ ಅನುಕೂಲಕರ ವಾತಾವರಣವಿದೆ ಎನ್ನುವುದನ್ನು ಬಿಟ್ಟರೆ, ಮಿಕ್ಕೆಲ್ಲಾ ಅಂಶಗಳು ಇಲ್ಲಿ ಬಿಜೆಪಿ ಪರವಾಗಿಯೇ ಇದ್ದದ್ದು. ಆದರೆ, ಕೇಂದ್ರ ಸಚಿವ ಅನಂತ್ ಕುಮಾರ್ ಮತ್ತು ಆರ್ ಅಶೋಕ್ ಅವರ ತಪ್ಪು ಲೆಕ್ಕಾಚಾರವೇ, ಬಿಜೆಪಿ ಸೋಲಿಗೆ ಪ್ರಮುಖ ಕಾರಣ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಜಯನಗರದ ಗೆಲುವಿನಲ್ಲಿ ಮೈತ್ರಿ ಸರ್ಕಾರದ ಪಾತ್ರವೇನು?
ಬೆಂಗಳೂರು ನಗರ ವ್ಯಾಪ್ತಿಯ ಎರಡು ಉಪಚುನಾವಣೆಯಲ್ಲಿ, ರಾಜರಾಜೇಶ್ವರಿ ನಗರದ ಉಸ್ತುವಾರಿಯನ್ನು ಸದಾನಂದ ಗೌಡರಿಗೆ ಮತ್ತು ಜಯನಗರವನ್ನು ಅನಂತ್ ಕುಮಾರ್ ಅವರಿಗೆ ಅಮಿತ್ ಶಾ ಒಪ್ಪಿಸಿದ್ದರು. ಎರಡೂ ಕ್ಷೇತ್ರದಲ್ಲಿ ಬಿಜೆಪಿ ಮುಗ್ಗರಿಸಿದೆ.
ಮೇಲ್ನೋಟಕ್ಕೆ ಬಿಜೆಪಿಗಿದು ಅಸೆಂಬ್ಲಿ ಸೋಲಾಗಿದ್ದರು ಜೊತೆಗೆ, ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಈ ಉಪಚುನಾವಣೆಯ ಫಲಿತಾಂಶ ಅಷ್ಟೇನೂ ಪ್ರಭಾವ ಬೀರದಿದ್ದರೂ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಮತ್ತು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗಿದು ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿಲ್ಲದಿಲ್ಲ.
ಜಯನಗರದಲ್ಲಿ ಸೌಮ್ಯಾ ರೆಡ್ಡಿ ಗೆಲುವಿಗೆ 4 ಕಾರಣಗಳು
ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಜಯನಗರ ಕ್ಷೇತ್ರದಲ್ಲಿ ಗೆಲುವನ್ನು ಸಾಧಿಸಿದ್ದಾರೆ. ಅವರು, ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಬಿ ಎನ್ ಪ್ರಹ್ಲಾದ್ ಅವರನ್ನು 2,889 ಮತಗಳ ಅಂತರದಿಂದ ಸೋಲಿಸಿ, ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಅನಾಯಾಸವಾಗಿ ಗೆಲ್ಲಬಹುದಾಗಿದ್ದ ಜಯನಗರ ಕ್ಷೇತ್ರವನ್ನು ಬಿಜೆಪಿ ಬಿಟ್ಟುಕೂಟ್ಟಿತು ಎಂದೇ ಹೇಳಬಹುದು. ಅದಕ್ಕೆ ಹಲವು ಕಾರಣಗಳು, ಮುಂದೆ ಓದಿ..
ಜಯನಗರ ನಿವಾಸಿಯಲ್ಲ. ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಇಲ್ಲಿನ ನಿವಾಸಿ
ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಜಯನಗರ ನಿವಾಸಿಯಲ್ಲ. ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಇಲ್ಲಿನ ನಿವಾಸಿ. ಜಯನಗರದಲ್ಲಿ ನೆಲೆಸಿರುವ ಅಭ್ಯರ್ಥಿಗೆ ಆದ್ಯತೆ ಕೊಡಬೇಕು ಎನ್ನುವ ಅಂಶವನ್ನು ಮತದಾರರ ಮನಸ್ಸಿನಲ್ಲಿ ಮೂಡಿಸಲು ಬಿಜೆಪಿ ವಿಫಲವಾಯಿತು. ಕಳೆದ ಒಂದು ದಶಕದಿಂದ ಇದು ಬಿಜೆಪಿಯ ಭದ್ರಕೋಟೆಯಾಗಿತ್ತು.
ವಿಜಯ್ ಕುಮಾರ್ ರೀತಿಯಲ್ಲೇ ನೀವು ಜನಾನುರಾಗಿಯಾಗಿ ಇರುತ್ತೀರಾ
ಬಿ ಎನ್ ಪ್ರಹ್ಲಾದ್ ಚುನಾವಣಾ ಪ್ರಚಾರಕ್ಕೆ ಹೋದಲೆಲ್ಲಾ, ನಿಮ್ಮ ಸಹೋದರ ವಿಜಯ್ ಕುಮಾರ್ ರೀತಿಯಲ್ಲೇ ನೀವು ಜನಾನುರಾಗಿಯಾಗಿ ಇರುತ್ತೀರಾ, ಗೆದ್ದರೆ ಅವರಂತೇ ನಿಮ್ಮ ಭೇಟಿಗೆ ಯಾವಾಗಲೂ ಮುಕ್ತ ಅವಕಾಶವಿರುತ್ತದಾ ಎನ್ನುವ ಪ್ರಶ್ನೆ ಪ್ರಹ್ಲಾದ್ ಅವರಿಗೆ ಎದುರಾಗಿತ್ತು. ಇದು ದಿ. ವಿಜಯ್ ಕುಮಾರ್ ಅವರಿಗೆ ಕ್ಷೇತ್ರದಲ್ಲಿದ್ದ ಹಿಡಿತಕ್ಕೆ ಉದಾಹರಣೆಯಾಗಿತ್ತು. ಎಲ್ಲೋ, ವಿಜಯ್ ಕುಮಾರ್ ಅವರ ಸಾವಿನ ಅನುಕಂಪವನ್ನು ಬಿಜೆಪಿ ಮತವಾಗಿ ಪರಿವರ್ತಿಸಿಕೊಳ್ಳಲು ವಿಫಲವಾಯಿತು.
ಎರಡನೇ ಸ್ಥಾನದಲ್ಲಿರುವ ಬ್ರಾಹ್ಮಣ ಮತದಾರ
ಕ್ಷೇತ್ರದಲ್ಲಿ ಅತ್ಯಂತ ನಿರ್ಣಾಯಕ ಪಾತ್ರವಹಿಸುವುದು ಎರಡನೇ ಸ್ಥಾನದಲ್ಲಿರುವ ಬ್ರಾಹ್ಮಣ ಮತದಾರ. ಪ್ರಹ್ಲಾದ್, ಬ್ರಾಹ್ಮಣ ಅಭ್ಯರ್ಥಿಯಾಗಿದ್ದರೂ, ಜಯನಗರ ಕ್ಷೇತ್ರದಲ್ಲಿ ನಡೆದ ಒಟ್ಟು ಮತದಾನ ಶೇ. 54.9, ಅಲ್ಪಸಂಖ್ಯಾತರು ಮತ್ತು ತಮಿಳು ಭಾಷಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಮತಚಲಾಯಿಸುವಂತೆ ಮಾಡುವಲ್ಲಿ ಕಾಂಗ್ರೆಸ್ ಯಶಸ್ಸನ್ನು ಪಡೆಯಿತು. ಪಕ್ಷದ ಪಾಲಿಗೆ, ಪ್ರಮುಖವಾಗಿದ್ದ ಬ್ರಾಹ್ಮಣ, ಲಿಂಗಾಯತ ಸಮುದಾಯದವರನ್ನು ಮತಗಟ್ಟೆಗೆ ಕರೆದುಕೊಂಡು ಬರುವಲ್ಲಿ ಬಿಜೆಪಿ ವಿಫಲವಾಯಿತು ಎನ್ನುವ ಸುದ್ದಿಯಿದೆ.
ವಿಜಯ್ ಕುಮಾರ್ ಅವರ ಸಹೋದರನಿಗೆ ಮಣೆ ಹಾಕಿತು
ಪ್ರಮುಖವಾಗಿ ಬಿಜೆಪಿಗೆ ಚುನಾವಣೆ ಘೋಷಣೆಯಾದಾಗಿಂದಲೂ ಹಿನ್ನಡೆಯಾಗಿದ್ದು ಅಭ್ಯರ್ಥಿ ಆಯ್ಕೆಯ ವಿಚಾರ. ಮೂರು ಜನ ಹಾಲಿ, ಮಾಜಿ ಕಾರ್ಪೋರೇಟರುಗಳು ಟಿಕೆಟಿಗಾಗಿ ತೀವ್ರ ಸ್ಪರ್ಧೆಯನ್ನು ಒಡ್ಡಿದ್ದರು. ಕೊನೆಗೆ, ಮೂವರಲ್ಲಿ ಒಬ್ಬರಿಗೆ ಟಿಕೆಟ್ ಕೊಟ್ಟರೂ ಓಕೆ ಎನ್ನುವ ನಿರ್ಧಾರಕ್ಕೆ ಬಂದರು. ನಾಗರಾಜ್, ಸಿ ಕೆ ರಾಮಮೂರ್ತಿ, ನಟರಾಜ್ ಅವರಲ್ಲಿ ಒಬ್ಬರಿಗೆ ಟಿಕೆಟ್ ನೀಡಿದ್ದರೆ, ಬಿಜೆಪಿಗೆ ಅನುಕೂಲವಾಗುತ್ತಿತ್ತು ಎನ್ನುವ ವಾತಾವರಣವಿತ್ತು. ಆದರೆ, ಅನಂತ್ - ಅಶೋಕ್ ಎಲ್ಲರನ್ನೂ ಬಿಟ್ಟು ವಿಜಯ್ ಕುಮಾರ್ ಅವರ ಸಹೋದರನಿಗೆ ಮಣೆ ಹಾಕಿದರು.
ಬಿಬಿಎಂಪಿಯ ಏಳು ವಾರ್ಡುಗಳು
ಜಯನಗರ ಕ್ಷೇತ್ರದ ವ್ಯಾಪ್ತಿಯ ಬಿಬಿಎಂಪಿಯ ಏಳು ವಾರ್ಡುಗಳ ಪೈಕಿ, ಕಾಂಗ್ರೆಸ್ ಗೆದ್ದದ್ದು ಒಂದೇ ವಾರ್ಡಿನಲ್ಲಿ (ಗುರಪ್ಪನಪಾಳ್ಯ), ಮಿಕ್ಕೆಲ್ಲಾ ಕಡೆ ಬಿಜೆಪಿ ಗೆದ್ದಿತ್ತು. ಅಸೆಂಬ್ಲಿ ಮತ್ತು ಲೋಕಸಭಾ ಕ್ಷೇತ್ರ ಗೆಲ್ಲಲು ಇದು ಅತ್ಯಂತ ನಿರ್ಣಾಯಕ ಅಂಶವಾಗಿದ್ದರೂ, ಬಿಜೆಪಿ ಇದರ ಲಾಭ ಪಡೆಯಲು ವಿಫಲವಾಯಿತು. ಟಿಕೆಟ್ ವಿಚಾರದಲ್ಲಿ ಕಾರ್ಪೋರೇಟರ್ ಗಳು ಅನಂತ್ -ಅಶೋಕ್ ವಿರುದ್ದ ಬೇಸರಿಸಿಕೊಂಡು ಪ್ರಚಾರಕ್ಕೆ ಸರಿಯಾಗಿ (ರಾಮಮೂರ್ತಿ, ಸೋಮಶೇಖರ್ ಹೊರತು ಪಡಿಸಿ) ತಮ್ಮನ್ನು ತೊಡಗಿಸಿಕೊಳ್ಳಲೇ ಇಲ್ಲ, ಜೊತೆಗೆ ಕಾರ್ಯಕರ್ತರೂ ಕೂಡಾ. ಬಿಜೆಪಿ ಸೋಲಿಗಾದ ಹಿನ್ನಡೆಗೆ ಪ್ರಮುಖ ಕಾರಣ ಇದು ಎನ್ನಬಹುದು.
ಬಿಜೆಪಿಗೆ ಹಿನ್ನಡೆಯಾಗಿರುವುದಕ್ಕೆ ಮತ್ತೊಂದು ಕಾರಣ
ಜೆಡಿಎಸ್, ಎಂಇಪಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿಲ್ಲ. ಕಾಂಗ್ರೆಸ್ಸಿಗೆ ಈ ಪಕ್ಷಗಳು ಬೆಂಬಲ ಸೂಚಿಸಿದ್ದರಿಂದ, ಬಿಜೆಪಿಗೆ ಇದು ಹಿನ್ನಡೆಯಾಗಿರುವುದಕ್ಕೆ ಮತ್ತೊಂದು ಕಾರಣ. ಪ್ರಮುಖರನ್ನು ಪ್ರಚಾರಕ್ಕೆ ಆಹ್ವಾನಿಸದೆಯೇ, ಹಿರಿಯ ಕಾಂಗ್ರೆಸ್ ಮುಖಂಡ ರಾಮಲಿಂಗ ರೆಡ್ಡಿ ತಮ್ಮ ಪ್ರಭಾವನ್ನು ತೋರಿಸಿಕೊಟ್ಟಿದ್ದಾರೆ. ಜೊತೆಗೆ, ಅನಂತ್ ಕುಮಾರ್ ಮತ್ತು ಅಶೋಕ್ ಅವರ ತಪ್ಪು ರಾಜಕೀಯ ನಡೆ ಪಕ್ಷದ ಸೋಲಿಗೆ ಕಾರಣವಾಯಿತು ಎನ್ನುವುದು ಕಾರ್ಯಕರ್ತರು/ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತು.