ಪೌರಕಾರ್ಮಿಕರ ಸಿಂಗಪುರ ಪ್ರವಾಸಕ್ಕೆ 14 ಕೋಟಿ ರೂ.: ಆದ ಲಾಭವೇನು?
ಬೆಂಗಳೂರು, ಸೆಪ್ಟೆಂಬರ್ 7: ಪ್ರತಿ ವರ್ಷವೂ ಬಿಬಿಎಂಪಿ ಪೌರಕಾರ್ಮಿಕರನ್ನು ಸಿಂಗಪುರ ಪ್ರವಾಸಕ್ಕೆ ಕರೆದೊಯ್ಯುತ್ತಿದೆ. ಕಸ ನಿರ್ವಹಣೆಯ ತಂತ್ರಜ್ಞಾನದ ಬಗ್ಗೆ ಪೌರಕಾರ್ಮಿಕರಿಗೆ ತಿಳಿವಳಿಕೆ ಮೂಡಿಸುವುದು ಈ ಪ್ರವಾಸದ ಉದ್ದೇಶ ಎಂದು ಅಧಿಕಾರಿಗಳು ಹೇಳುತ್ತಾರೆ.
ಆದರೆ, ಇಷ್ಟು ವರ್ಷಗಳಿಂದ ಪೌರಕಾರ್ಮಿಕರನ್ನು ಸಿಂಗಪುರಕ್ಕೆ ಕರೆದೊಯ್ದು ಬಿಬಿಎಂಪಿ ಸಾಧಿಸಿದ್ದೇನು? ಕೋಟಿಗಟ್ಟಲೆ ಹಣ ವ್ಯಯಿಸಿ ಮಾಡುವ ಈ ಪ್ರವಾಸದಿಂದ ಬೆಂಗಳೂರಿನ ತ್ಯಾಜ್ಯ ನಿರ್ವಹಣೆಯ ಸಮಸ್ಯೆ ಬಗೆಹರಿದಿದೆಯೇ?
ಬಾಗಲೂರು ತ್ಯಾಜ್ಯ ಘಟಕ ದುರವಸ್ತೆ: ಬಿಬಿಎಂಪಿಗೆ ಎನ್ಜಿಟಿ ತಪರಾಕಿ
ಕಳೆದ 15 ವರ್ಷಗಳಲ್ಲಿ ಬೆಂಗಳೂರಿನ ತ್ಯಾಜ್ಯ ಉತ್ಪಾದನೆಯ ಪ್ರಮಾಣ ಶೇ 1,750ರಷ್ಟು ಹೆಚ್ಚಾಗಿದೆ. ಕಸ ಸಂಗ್ರಹ ಮತ್ತು ನಿರ್ವಹಣೆಯ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ.
ಮತ್ತೊಂದು ಪ್ರವಾಸಕ್ಕೆ ಸಜ್ಜು
ಕಳೆದ ವರ್ಷದಂತೆಯೇ ಪೌರಕಾರ್ಮಿಕರಿಗೆ ಕೆಲವೇ ತಿಂಗಳಲ್ಲಿ ಸಿಂಗಪುರ ಪ್ರವಾಸದ ಭಾಗ್ಯ ಕಲ್ಪಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ಪ್ರವಾಸಕ್ಕೆ ಸೂಕ್ತ ಪೌರಕಾರ್ಮಿಕರ ಪಟ್ಟಿಯನ್ನು ಕಳುಹಿಸುವಂತೆ ಬಿಬಿಎಂಪಿ ವಲಯ ಅಧಿಕಾರಿಗಳಿಗೆ ನೋಟಿಸ್ ರವಾನಿಸಿದೆ.
1,800 ಪೌರಕಾರ್ಮಿಕರಿಗೆ ಪ್ರವಾಸ
ಒಟ್ಟಾರೆ ಸುಮಾರು 1,800 ಪೌರಕಾರ್ಮಿಕರನ್ನು ಪ್ರವಾಸಕ್ಕೆ ಕಳುಹಿಸುವ ಗುರಿ ಹೊಂದಿರುವ ಸರ್ಕಾರ, ಅದಕ್ಕಾಗಿ 14.40 ಕೋಟಿ ರೂ. ವೆಚ್ಚ ತಗುಲಬಹುದೆಂದು ಅಂದಾಜಿಸಿದೆ. 2017ರ ಕೊನೆಯ ಎಂಟು ತಿಂಗಳಲ್ಲಿ ವಿವಿಧ ನಗರ ಸಂಸ್ಥೆಗಳ 502 ಪೌರಕಾರ್ಮಿಕರನ್ನು ನಾಲ್ಕು ದಿನಗಳ ಪ್ರವಾಸಕ್ಕಾಗಿ ಸಿಂಗಪುರಕ್ಕೆ ಕಳುಹಿಸಲಾಗಿದೆ. ಪ್ರತಿ ಪೌರಕಾರ್ಮಿಕನಿಗೆ ತಗುಲುವ ವೆಚ್ಚ 80 ಸಾವಿರ ರೂಪಾಯಿ.
ಜಾಗ ಯಾವುದಯ್ಯ ಬೆಂಗಳೂರಿನ ತ್ಯಾಜ್ಯ ಹಾಕೋಕೆ ದಾರಿ ತೋರಿಸಯ್ಯ!
ವಿವಿಧ ಬಗೆಯ ಪಾಠಗಳು
ಕಳೆದ ವರ್ಷದಂತೆಯೇ ನಾಲ್ಕು ದಿನ ಪೌರಕಾರ್ಮಿಕರಿಗೆ ಸುರಕ್ಷತೆಯ ಸಾಧನಗಳು ಮತ್ತು ಉಪಕರಣಗಳು, ಪರಿಸರ, ಸೌಂದರ್ಯೀಕರಣ, ಸಿಂಗಪುರದ 50 ವರ್ಷದ ಇತಿಹಾಸ, ನೀರು ಸಂರಕ್ಷಣೆ, ಮರುಬಳಕೆ ಮತ್ತು ಸಂಸ್ಕರಣೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಮಾಹಿತಿ ನೀಡಲಾಗಿತ್ತು. ಪ್ರವಾಸಕ್ಕೆ ಮುನ್ನ ಮತ್ತು ನಂತರ ಪೌರಕಾರ್ಮಿಕರನ್ನು ಸಂದರ್ಶನಕ್ಕೆ ಒಳಪಡಿಸಲಾಗಿತ್ತು. ಅವರ ಅಭಿಪ್ರಾಯ ಹಾಗೂ ಕಲಿತಿದ್ದನ್ನು ದಾಖಲಿಸಿಕೊಳ್ಳಲಾಗಿತ್ತು.
10-15 ಬ್ಯಾಚ್ಗಳು
2017ರಲ್ಲಿ ಪಾಲಿಕೆ ಆಡಳಿತ ನಿರ್ದೇಶನಾಲಯ (ಡಿಎಂಎ) ಮತ್ತು ಬಿಬಿಎಂಪಿಗಳಿಂದ 10-15 ಬ್ಯಾಚ್ಗಳನ್ನು ಪ್ರವಾಸಕ್ಕೆ ಕಳುಹಿಸಲಾಗಿತ್ತು. ಬಿಬಿಎಂಪಿ ವ್ಯಾಪ್ತಿಯ 18,000 ಪೌರಕಾರ್ಮಿಕರ ಪೈಕಿ 80 ಮಂದಿಯನ್ನು ಆಯ್ದುಕೊಳ್ಳಲಾಗಿತ್ತು. ಈ ವರ್ಷವೂ ಬಿಬಿಎಂಪಿ ಅವರ ಪಾಸ್ಪೋರ್ಟ್ಗಳಿಗೆ ಅರ್ಜಿ ಸಲ್ಲಿಸಲಿದೆ.
ಪ್ರತಿ ಬ್ಯಾಚ್ನಲ್ಲಿಯೂ ಮೂವರು ಅಧಿಕಾರಿಗಳು ಮತ್ತು 39 ಪೌರಕಾರ್ಮಿಕರನ್ನು ಒಳಗೊಂಡ 42 ಸದಸ್ಯರಿರುತ್ತಾರೆ. ಸಿಂಗಪುರದ ಬಸ್ಗಳಿಗಿರುವುದು 42 ಜನರನ್ನು ಕರೆದೊಯ್ಯುವ ಸಾಮರ್ಥ್ಯ. ಪ್ರತಿ ಗುಂಪಿಗೂ ಒಂದು ಬಸ್ ಸರಿಯಾಗುತ್ತದೆ.
ಪ್ರವಾಸಕ್ಕೆ ತೆರಳುವ ಒಂದು ವಾರದ ಮುನ್ನ ಪೌರಕಾರ್ಮಿಕರಿಗೆ 'ಶಿಷ್ಟಾಚಾರ ಮತ್ತು ವಿದೇಶಿ ಸಂಸ್ಕೃತಿ'ಯ ತರಬೇತಿ ನೀಡಲಾಗುತ್ತದೆ. ಕಳೆದ ವರ್ಷ ಸಿಂಗಪುರ ಪ್ರವಾಸಕ್ಕಾಗಿ 2 ಕೋಟಿ ವ್ಯಯ ಮಾಡಲಾಗಿತ್ತು.
ಮ್ಯಾನ್ಹೋಲ್ ಸ್ವಚ್ಛತೆ ಯಾರಿಗೆ?
ಸ್ವಚ್ಛತೆ, ಮ್ಯಾನ್ಹೋಲ್ ಸ್ವಚ್ಛಗೊಳಿಸುವ ಪದ್ಧತಿಗಳನ್ನು ಕಾರ್ಮಿಕರಿಗೆ ಹೇಳಿಕೊಡಲಾಗುತ್ತದೆ ಎಂದು ಆಗಿನ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ತಿಳಿಸಿದ್ದರು.
ಆದರೆ, ಮ್ಯಾನ್ಹೋಲ್ ನಿರ್ವಹಣೆ ಕಾರ್ಯ ಇರುವುದು ಜಲಮಂಡಳಿ ಅಡಿಯಲ್ಲಿಯೇ ಹೊರತು ಬಿಬಿಎಂಪಿ ಅಡಿಯಲ್ಲಿ ಅಲ್ಲ. ಮ್ಯಾನ್ಹೋಲ್ ಸ್ವಚ್ಛತೆಗಾಗಿ ಗುಂಡಿಯೊಳಗೆ ಇಳಿದು ಕಾರ್ಮಿಕರು ಸಾವನ್ನಪ್ಪುತ್ತಿರುವ ಘಟನೆಗಳು ಈಗಲೂ ವರದಿಯಾಗುತ್ತಿವೆ. ಮ್ಯಾನ್ಹೋಲ್ಗಳ ಸ್ವಚ್ಛತೆ ವ್ಯವಸ್ಥೆ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಅಗತ್ಯವಾಗಿದೆ. ಹೀಗಿರುವಾಗ ಬಿಬಿಎಂಪಿ ಕಾರ್ಮಿಕರ ಪ್ರವಾಸ ಜಲಮಂಡಳಿಯ ಸಮಸ್ಯೆಗೆ ಹೇಗೆ ಪರಿಹಾರ ಒದಗಿಸಬಲ್ಲದು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಬಿಬಿಎಂಪಿ ಮತ್ತು ಜಲಮಂಡಳಿಗಳ ಸಹಯೋಗದಲ್ಲಿ ಕೆಲಸ ಮಾಡದ ಹೊರತು ಈ ಬಗೆಯ ಅವಘಡಗಳು ನಿಯಂತ್ರಣಕ್ಕೆ ಬರುವುದಿಲ್ಲ.
ಸ್ವಚ್ಛ ಭಾರತದ ಹಣವನ್ನು ಕಟ್ಟಡಕ್ಕೆ ಬಳಸಿದ ಪಾಲಿಕೆ: ಮೋದಿಗೆ ದೂರು
ಪ್ರವಾಸವಷ್ಟೇ, ಜಾರಿಯಿಲ್ಲ
ಸಿಂಗಪುರಕ್ಕೆ ಕಾರ್ಮಿಕರನ್ನು ಕರೆದುಕೊಂಡು ಹೋಗಿಬಂದರೂ ಅಲ್ಲಿನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾತ್ರ ನಡೆದಿಲ್ಲ. ಹಾಗಿದ್ದೂ ಉತ್ತಮ ಆಡಳಿತದಿಂದಾಗಿ ತ್ಯಾಜ್ಯ ವಿಲೇವಾರಿ, ಬೇರ್ಪಡಿಸುವಿಕೆ, ಸಂಸ್ಕರಣೆಯ ಚಟುವಟಿಕೆಗಳು ಸಾಕಷ್ಟು ಸುಧಾರಿಸಿವೆ. ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರ ವಿದೇಶಿ ತಂತ್ರಜ್ಞಾನವನ್ನು ಅಳವಡಿಸುವ ಪ್ರಯತ್ನದಲ್ಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ.
ಅರಿವು ಮೂಡಿಸುತ್ತಿರುವ ಕಾರ್ಮಿಕರು
ಪೌರಕಾರ್ಮಿಕರ ಪ್ರವಾಸಕ್ಕೂ ಸೇವಾ ಸುಧಾರಣೆಗೂ ಸಂಬಂಧವಿದೆಯೇ ಎನ್ನುವುದು ಎಲ್ಲರ ಮುಂದಿರುವ ಪ್ರಶ್ನೆ. ಅಧಿಕಾರಿಗಳ ಪ್ರಕಾರ ಪೌರಕಾರ್ಮಿಕರು ಸ್ವಚ್ಛತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಸಾಧ್ಯ ಎನ್ನುವುದನ್ನು ಅರಿತಿದ್ದಾರೆ. ಅವರು ಹೊಸ ಆಲೋಚನೆಗಳನ್ನು ಕಲಿತು ಅದನ್ನು ಹಂಚಿಕೊಳ್ಳುತ್ತಾರೆ.
ಈ ತಂಡಗಳು ವಿವಿಧ ಸ್ಥಳಗಳಿಗೆ ತೆರಳಿ ಕೆಲವು ವಿಚಾರಗಳನ್ನು ಕಲಿಯುತ್ತವೆ. ಅವರಿಗೆ ಸಿಗುವುದು ವ್ಯಕ್ತಿತ್ವ ವಿಕಸನ ಮತ್ತು ಅಂತಾರಾಷ್ಟ್ರೀಯ ವ್ಯವಸ್ಥೆಗಳು ಬಗ್ಗೆ ಮಾಹಿತಿ. ಆದರೆ, ಅವರಿಗೆ ಸ್ಥಳೀಯವಾದ ನೈಜ ಸ್ಥಿತಿ ಮತ್ತು ವ್ಯವಸ್ಥೆ ಸುಧಾರಣೆಗೆ ಅಗತ್ಯವಾದದ್ದು ಸಿಗುವುದಿಲ್ಲ.
ಪೌರಕಾರ್ಮಿಕರು ಸಲಕರಣೆಗಳನ್ನು ಬಳಸಿಕೊಳ್ಳಲು ಆಸಕ್ತಿ ತೋರಿಸುತ್ತಿಲ್ಲ ಎನ್ನುತ್ತಾರೆ ಕೆಲವು ಅಧಿಕಾರಿಗಳು. ಮುಖ್ಯವಾಗಿ ಸ್ವಯಂಚಾಲಿತ ಗುಡಿಸುವ ಯಂತ್ರವನ್ನು ಅವರು ಬಳಸುತ್ತಿಲ್ಲವಂತೆ. ಹಾಗೆಂದು, ಬೆಂಗಳೂರಿನಲ್ಲಿ ಈ ಯಂತ್ರಗಳೂ ಇಲ್ಲ.
ಪ್ರಯೋಜನವಾಗಿಲ್ಲ
ಸಿಂಗಪುರದ ಪ್ರವಾಸದಿಂದ ಪೌರಕಾರ್ಮಿಕರಿಗೆ ಯಾವ ಪ್ರಯೋಜನವೂ ಆಗಿಲ್ಲ. ಕೆಲವು ಸಂಗತಿಗಳನ್ನು ಅದರಿಂದ ತಿಳಿದುಕೊಂಡಿದ್ದೇವಷ್ಟೇ ಎನ್ನುತ್ತಾರೆ ಪೌರಕಾರ್ಮಿಕರು. ನಾವು ಬಳಸುವ ಸಾಧನಗಳನ್ನು ಬಳಸಿಯೇ ಸಿಂಗಪುರದಲ್ಲಿ ಸ್ವಚ್ಛತೆ ನಡೆಸುತ್ತಾರೆ. ಆದರೆ, ಅವರಲ್ಲಿ ಹೊಸ ಮಾದರಿಗಳಿವೆ ಎನ್ನುತ್ತಾರೆ ಅವರು.
ಅಲ್ಲಿರುವ ಆಡಳಿತವೇ ಬೇರೆ
ಅಲ್ಲಿರುವ ನಿರ್ವಹಣೆ ಮತ್ತು ಆಡಳಿತ ವ್ಯವಸ್ಥೆಯೇ ಬೇರೆ, ನಮ್ಮಲ್ಲಿನ ವ್ಯವಸ್ಥೆಯೇ ಬೇರೆ ಎನ್ನುವುದು ಅವರ ಅರಿವಿಗೆ ಬಂದಿದೆ. ಅಲ್ಲಿ ಉಸ್ತುವಾರಿ ನಡೆಸುವವರು ಕಾರ್ಮಿಕರೊಂದಿಗೆ ಉತ್ತಮ ಸಂಬಂಧ ಹೊಂದಿರುತ್ತಾರೆ. ಆದರೆ, ಇಲ್ಲಿ ಕಿರುಕುಳ ನೀಡುತ್ತಾರೆ. ಬಿಬಿಎಂಪಿ ನೀಡುವ ಸುರಕ್ಷಾ ಸಾಧನಗಳು ಹೆಚ್ಚು ಕಾಲ ಬಾಳಿಕೆಯೂ ಬರುವುದಿಲ್ಲ.
ನಾಲ್ಕು ದಿನದ ಮೋಜು
ಒಳ್ಳೆಯ ಹೋಟೆಲ್, ಒಳ್ಳೆಯ ಊಟ, ದೂರದ ಸುತ್ತಾಟಗಳು ಅವರಿಗೆ ನಾಲ್ಕು ದಿನ ಮೋಜಿನ ಅನುಭವ ನೀಡುತ್ತವೆ. ಅಲ್ಲಿ ನೋಡಿದ್ದು ಚೆನ್ನಾಗಿದೆ ಎನಿಸಿದರೂ, ನಮ್ಮಲ್ಲಿನ ಪರಿಸ್ಥಿತಿಯಲ್ಲಿ ಸಿಂಗಪುರದ ಯಂತ್ರೋಪಕರಣ ಮತ್ತು ಆಡಳಿತ ವ್ಯವಸ್ಥೆ ಸಿಗುವುದು ಕಷ್ಟ ಎನ್ನುವುದು ಅವರ ಅಭಿಪ್ರಾಯ.
ಸಿಂಗಪುರದ ಮಟ್ಟಕ್ಕೆ ಏರಲಾರೆವು
ಮೂಲಸೌಕರ್ಯಗಳ ವಿಚಾರದಲ್ಲಿ ತೀರಾ ಹಿಂದಿರುವ ನಾವು, ಸಿಂಗಪುರದ ಮಟ್ಟಕ್ಕೆ ಹೋಗುವುದು ಸಾಧ್ಯವಿಲ್ಲ ಎನ್ನುವುದು ಅಧಿಕಾರಿಗಳು ಅಭಿಪ್ರಾಯವೂ ಹೌದು. ಅಲ್ಲಿ ಅತ್ಯದ್ಭುತ ಸೌಲಭ್ಯಗಳಿವೆ. ನಾವು ಹೆಚ್ಚು ಶ್ರಮವಹಿಸಿ ಕೆಲಸ ಮಾಡುತ್ತಿದ್ದೇವೆ ಆದರೆ, ಜಾಣ್ಮೆಯಿಂದಲ್ಲ ಎನ್ನುವುದು ಅವರು ಮಾತು.