ಎನ್ ಜಿಇಎಫ್ ಉದ್ಯೋಗಿಗಳ ಕೊಡುಗೆ 'ತಾಂತ್ರಿಕ ಪದಕೋಶ' ಏನಾಯಿತು?
ಎನ್ ಜಿಇಎಫ್ ಕನ್ನಡ ಮಣ್ಣಿನ ಕಾರ್ಖಾನೆ. ಅಲ್ಲಿನ ನೌಕರರೆಲ್ಲ ಸೇರಿ ಮಾಡಿಕೊಂಡಿದ್ದ ತಾಂತ್ರಿಕ ಪದಕೋಶ ಕನ್ನಡಕ್ಕೆ ಅದ್ಭುತವಾದ ಕೊಡುಗೆ ಆಗಬಲ್ಲ ನಿಘಂಟು. ಅದೀಗ ಏನಾಗಿದೆ ಎಂದು ತಿಳಿದು, ಮತ್ತಷ್ಟು-ಮಗದಷ್ಟು ಪದ ಸೇರಿಸಿ ಪುನರ್ ಮುದ್ರಣವಾಗಬೇಕು.
ಬೆಂಗಳೂರು, ಡಿಸೆಂಬರ್ 20: ಎನ್ ಜಿಇಎಫ್ ಅಂದ ತಕ್ಷಣ ದೊಡ್ಡ ಸಂಖ್ಯೆಯ ಜನರಿಗೆ ನೆನಪಾಗುವುದು ಕನ್ನಡ ಮಣ್ಣಿನಲ್ಲಿ ನೆಲೆ ನಿಂತು, ರಾಷ್ಟ್ರ ಮಟ್ಟದಲ್ಲಿ ಮಾತಾಗಿದ್ದ ಕಾರ್ಖಾನೆ. ಅಲ್ಲಿ ಕನ್ನಡ ಬಳಕೆ, ಕನ್ನಡಿಗರು ಹಾಗೂ ಕಲೆ-ಸಾಂಸ್ಕೃತಿಕ ಚಟುವಟಿಕೆಗಳು ಕೂಡ ಮರೆಯುವಂಥದ್ದಲ್ಲ.
ಆ ಕಾರ್ಖಾನೆಯಲ್ಲಿ ತಾಂತ್ರಿಕ ಹಾಗೂ ವಾಣಿಜ್ಯ ಪದಗಳನ್ನು ಸಹ ಕನ್ನಡದಲ್ಲಿ ಬಳಸುತ್ತಿದ್ದರು. ಅದಕ್ಕಾಗಿ ಪುಸ್ತಕವೊಂದನ್ನು ಮೀಸಲಿಟ್ಟು, ಅಲ್ಲಿನ ಎಲ್ಲ ನೌಕರರು ತಮ್ಮಿಂದ ಆದ ಒಂದೋ, ಎರಡೋ, ಹತ್ತೋ ಕನ್ನಡದ ಪದಗಳನ್ನು ಕೊಡುಗೆ ನೀಡುತ್ತಿದ್ದರು. ಅಂಥ ಎಲ್ಲ ಪದಗಳನ್ನು ಒಗ್ಗೂಡಿಸಿ 'ಕನ್ನಡ ತಾಂತ್ರಿಕ ಪದಕೋಶ' ಎಂಬ ನಿಘಂಟನ್ನೇ ಮಾಡಿದ್ದರು.[ಡಿಸೆಂಬರ್ 24, 25ರಂದು ಮಂಗಳೂರಲ್ಲಿ 'ಜನನುಡಿ' ಸಾಹಿತ್ಯ ಸಮಾವೇಶ]
ಅಲ್ಲಿನ ನೌಕರರಿಗೆ ತಾಂತ್ರಿಕ ಜ್ಞಾನ, ಪದ ಬಳಕೆ ಬಗ್ಗೆ ತರಬೇತಿ ನೀಡಲಾಗುತ್ತಿತ್ತು. ಇವೆಲ್ಲವನ್ನೂ ನೆನಪಿಸಿಕೊಂಡಿರುವ ಎನ್ ಜಿಇಎಫ್ ನ ನಿವೃತ್ತ ಉದ್ಯೋಗಿ-ದಾವಣಗೆರೆಯ ಮುರಳಿ ಅವರು, ತ.ರಂ.ಕೃಷ್ಣೇಗೌಡ ಎಂಬುವರು ಒಬ್ಬರು ಕಾರ್ಖಾನೆಯಲ್ಲಿದ್ದರು. ಅವರಿಗೆ ಕನ್ನಡದ ಬಗ್ಗೆ ಅಪಾರ ಪ್ರೇಮ. ಈ ರೀತಿ ತಾಂತ್ರಿಕ ಪದಕೋಶದ ಆಲೋಚನೆ ಅವರದಾಗಿತ್ತು.
ಆಗ ಎನ್ ಜಿಇಎಫ್ ನಲ್ಲಿ ಕೆಲಸ ಮಾಡುತ್ತಿದ್ದ ಡಾ.ಸಂಧ್ಯಾರೆಡ್ಡಿ ಹಾಗೂ ಪ್ರತಿಭಾ ನಂದಕುಮಾರ್ ಅವರು ಪದಕೋಶದ ಕೆಲಸವನ್ನು ಹೆಚ್ಚು ಪರಿಣಾಮಕಾರಿಯಾಗಿ, ಪ್ರಯೋಜನಕಾರಿಯಾಗಿ ಮಾಡಿದರು. ಎಷ್ಟೋ ಐಎಎಸ್ ಅಧಿಕಾರಿಗಳ ವಿರೋಧ ಎದುರಿಸಿಯೂ ಕೃಷ್ಣೇಗೌಡರು ಅದ್ಭುತ ಕೆಲಸ ಮಾಡಿದರು ಎಂದು ಅವರು ಹೇಳಿದರು.
ಅಂಥ ಅದ್ಭುತವಾದ ತಾಂತ್ರಿಕ ಪದಕೋಶ ಎಲ್ಲಿ ದೂಳು ಕುಡಿಯುತ್ತಿದೆಯೋ ಗೊತ್ತಿಲ್ಲ. ಆ ಪದಕೋಶಕ್ಕೆ ಎನ್ ಜಿಇಎಫ್ ನೌಕರರ ಕೊಡುಗೆ ಇದೆ. ಕನ್ನಡದಲ್ಲಿ ಅಂಥದ್ದೊಂದು ಕೆಲಸವನ್ನು ಮಾಡುವುದು ಖಂಡಿತಾ ಸಲೀಸಲ್ಲ. ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾಗಿದ್ದ ನಲ್ಲೂರು ಪ್ರಸಾದ್ ಅವರ ಬಳಿ ಎರಡು ಬಾರಿ ಈ ಬಗ್ಗೆ ಪ್ರಸ್ತಾವ ಮಾಡಿದ್ದರಂತೆ ನಿವೃತ್ತ ಉದ್ಯೋಗಿ ಮುರಳಿ.[ಮೈಸೂರಿನಲ್ಲಿ 83ನೇ ಸಾಹಿತ್ಯ ಸಮ್ಮೇಳನ: ಸಿಹಿ ಹಂಚಿ ಸಂಭ್ರಮಾಚರಣೆ]
ಆದರೆ, ಯಾವುದೇ ಕೆಲಸವಾಗಿಲ್ಲ. ತಾಂತ್ರಿಕ ಪದಕೋಶವನ್ನು ಕಾಪಾಡುವ ಕೆಲಸ ಆಗಬೇಕು. ಅದರರ್ಥ, ಯಾರ ಬಳಿಯಾದರೂ ಇರಬಹುದಾದ ಆ ಕೋಶವನ್ನು ಪುನರ್ ಮುದ್ರಿಸುವ, ಅದಕ್ಕೆ ಮತ್ತಷ್ಟು-ಮಗದಷ್ಟು ತಾಂತ್ರಿಕ ಪದಗಳನ್ನು ಸೇರಿಸಿ, ಶ್ರೀಮಂತಗೊಳಿಸುವ ಕೆಲಸವಾಗಬೇಕು. ಕವಯಿತ್ರಿ ಪ್ರತಿಭಾ ನಂದಕುಮಾರ್ ಅಂಥವರು ಅಂದಿನ ಕೆಲಸದಲ್ಲಿ ಭಾಗೀದಾರರು ಆದ್ದರಿಂದ ಅವರ ನೆರವನ್ನು ಪಡೆಯಬಹುದು.