ಬೆಂಗಳೂರು: ಕಾರ್ಡ್ ರಸ್ತೆಯ ಮಂಜುನಾಥನಗರ ಫ್ಲೈಓವರ್ ಲೋಕಾರ್ಪಣೆ
ಬೆಂಗಳೂರು, ಆಗಸ್ಟ್ 27: ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಮಂಜುನಾಥನಗರ ಮೇಲ್ಸೇತುವೆಯನ್ನು ಉಪಮುಖ್ಯಮಂತ್ರಿ ಜಿ ಪರಮೇಶ್ವರ ಸೋಮವಾರ ಲೋಕಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ಕಳೆದ ಐದು ವರ್ಷದಲ್ಲಿ ಬಿಬಿಎಂಪಿಗೆ 15 ಸಾವಿರ ಕೋಟಿ ರು.ಅನುದಾನವನ್ನು ಸರಕಾರದಿಂದ ನೀಡಲಾಗಿದೆ. ಆದರೂ ಸಾಕಷ್ಟು ಮೇಲ್ಸೇತುವೆ, ಕೆಳಸೇತುವೆಗಳು ಆಗಬೇಕಿದೆ. ಬಿಬಿಎಂಪಿ ವೇಗವಾಗಿಯೇ ಸಾಕಷ್ಟು ಕೆಲಸ ಮಾಡಲಾಗುತ್ತಿದೆ ಎಂದರು.
ಕಸ ನಿರ್ವಹಣೆ, ಅನಧಿಕೃತ ಕೇಬಲ್ ಅಳವಡಿಕೆಯಲ್ಲು ಸಾಕಷ್ಟು ಕ್ರಮ ಕೈಗೊಂಡಿದ್ದೇವೆ. 8 ಸಾವಿರ ಕಿ.ಮೀ. ಅನಧಿಕೃತ ಕೇಬಲ್ ತೆರವು ಗೊಳಿಸಿದ್ದೇವೆ, ಬಿಬಿಎಂಪಿ ಟೆಂಡರ್ ಕರೆಯುವ ಸಂದರ್ಭದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅವಧಿ ನಿಗದಿ ಮಾಡಿದರೂ ಅವಧಿಯೊಳಗೇ ಕಾಮಗಾರಿ ಮುಗಿಯುತ್ತಿಲ್ಲ.
ಇದರಿಂದ ಹೆಚ್ಚುವರಿ ಹಣ ವೆಚ್ಚವಾಗುತ್ತಿದೆ. ಹೀಗಾಗಿ ಗುತ್ತಿಗೆದಾರರಿಗೆ ಸಮಯದ ಬಗ್ಗೆ ಎಚ್ಚರಿಕೆ ನೀಡಿ. ದಂಡ ಹಾಕುವ ಅವಕಾಶವೂ ಇದೆ. ಅದನ್ನು ಬಿಬಿಎಂಪಿ ಬಳಸಬಹುದು ಎಂದು ಹೇಳಿದರು.
ನಗರದಲ್ಲಿ ವ್ಯವಸ್ಥಿತವಾಗಿ ಜಾಹೀರಾತು ಪ್ರದರ್ಶನಕ್ಕೆಂದೇ ನೂತನ 'ಜಾಹೀರಾತು ಪಾಲಿಸಿ' ತರಲು ಚಿಂತಿಸಲಾಗಿದೆ ನ್ಯಾಯಾಲಯದ ನಿರ್ದೇಶನದ ಬಳಿಕ ಎಲ್ಲ ಫ್ಲೆಕ್ಸ್ಗಳನ್ನು ತೆರವುಗೊಳಿಸಲಾಗಿದೆ. ಕೆಲ ಜಾಹೀರಾತುದಾರರು ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇದೆ. ಅದಕ್ಕಾಗಿಯೇ ಮುಂದಿನ ದಿನಗಳಲ್ಲಿ ಜಾಹೀರಾತು ಪಾಲಿಸಿ ಮಾಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ, ಮೇಯರ್ ಸಂಪತ್ ರಾಜ್, ಶಾಸಕ ಸುರೇಶ್ ಕುಮಾರ್, ಆಯುಕ್ತ ಮಂಜುನಾಥ್ ಪ್ರಸಾದ್ ಇದ್ದರು.