ಬಿಬಿಎಂಪಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಬಗ್ಗೆ ಗೌಡರು ಹೇಳಿದ್ದೇನು?
ಬೆಂಗಳೂರು, ಮಾರ್ಚ್ 08 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುರಿದು ಬೀಳುವುದಿಲ್ಲ. ಜೆಡಿಎಸ್ ಪಕ್ಷ ಕಾಂಗ್ರೆಸ್ಗೆ ನೀಡಿರುವ ಬೆಂಬಲವನ್ನು ವಾಪಸ್ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಬುಧವಾರ ಬೆಂಗಳೂರಿನಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಪತ್ರಿಕಾಗೋಷ್ಠಿ ನಡೆಸಿದರು. 'ಬಿಬಿಎಂಪಿಯಲ್ಲಿ ಕಾಂಗ್ರೆಸ್ಗೆ ನೀಡಿರುವ ಬೆಂಬಲ ವಾಪಸ್ ಪಡೆಯುವುದಿಲ್ಲ. ಆದರೆ, ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮುಂದುವರೆಸುತ್ತೇವೆ' ಎಂದರು.
ಬಿಬಿಎಂಪಿಯ ಮೈತ್ರಿ ಮುರಿಯುವ ಸುಳಿವು ಕೊಟ್ಟ ದೇವೇಗೌಡರು!
'ರಾಜ್ಯಸಭೆ ಚುನಾವಣೆಗೆ ಬಿ.ಎಂ.ಫಾರೂಕ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗುತ್ತದೆ. ಅಲ್ಪಸಂಖ್ಯಾತರ ರಕ್ಷಕರು ಎನ್ನುವ ಕಾಂಗ್ರೆಸ್ ಅದೇ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗೆ ಏಕೆ ಬೆಂಬಲ ನೀಡುವುದಿಲ್ಲ?. ನಮಗೆ ಕೆಲವು ಮತಗಳ ಅಗತ್ಯವಿದೆ. ಕುಪೇಂದ್ರ ರೆಡ್ಡಿಗೆ ಬೆಂಬಲ ನೀಡುವ ಅವರು ಫಾರೂಕ್ ಅವರನ್ನು ಏಕೆ ಬೆಂಬಲಿಸುವುದಿಲ್ಲ' ಎಂದು ಪ್ರಶ್ನಿಸಿದರು.
ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ಅವರು ಕಾಂಗ್ರೆಸ್ ಸೇರಿದ ಮೇಲೆ ದೇವೇಗೌಡರು ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದರು. 'ಬಿಬಿಎಂಪಿಯಲ್ಲಿ ನೀಡಿರುವ ಬೆಂಬಲ ವಾಪಸ್ ಪಡೆಯುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ' ಎಂದು ಹೇಳಿದ್ದರು.
ಇದರಿಂದಾಗಿ ಬಿಬಿಎಂಪಿಯಲ್ಲಿನ ಮೈತ್ತಿ ಮುರಿಯುವ ಆತಂಕ ಎದುರಾಗಿತ್ತು. ಆದರೆ, ಬೆಂಬಲ ವಾಪಸ್ ಪಡೆಯುವುದಿಲ್ಲ ಎಂದು ದೇವೇಗೌಡರು ಸ್ಪಷ್ಟಪಡಿಸಿದ್ದಾರೆ. ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಮೇಯರ್ ಮತ್ತು ಉಪ ಮೇಯರ್ ಪಟ್ಟವನ್ನು ಹಂಚಿಕೊಂಡಿವೆ...
ಉಪಮುಖ್ಯಮಂತ್ರಿ ಮಾಡಲಿ
'ಅಶೋಕ್ ಖೇಣಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡಿರುವ ಬಗ್ಗೆ ಅಸೂಯೆ ಇಲ್ಲ. ಸಿದ್ದರಾಮಯ್ಯ ಮತ್ತು ಖೇಣಿ ನಡುವೆ ಒಳ ಒಪ್ಪಂದವಿರಬಹುದು. ಅವರನ್ನು ಬೇಕಿದ್ದರೆ ಉಪ ಮುಖ್ಯಮಂತ್ರಿ ಮಾಡಿಕೊಳ್ಳಲಿ' ಎಂದು ದೇವೇಗೌಡರು ಹೇಳಿದರು.
ಸಿಬಿಐ ತನಿಖೆಗೆ ಶಿಫಾರಸು
'ನೈಸ್ ಅಕ್ರಮದ ಕುರಿತು ಸಿಬಿಐ ಅಥವ ಜಾರಿ ನಿರ್ದೇಶನಾಲಯದ ಮೂಲಕ ತನಿಖೆ ನಡೆಸಬೇಕು ಎಂದು ಸದನ ಸಮಿತಿ ಶಿಫಾರಸು ಮಾಡಿದೆ. ಆದರೆ, ರಾಜ್ಯ ಸರ್ಕಾರ ವರದಿಯನ್ನು ಬಹಿರಂಗ ಮಾಡಿಲ್ಲ. ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿಲ್ಲ' ಎಂದು ದೇವೇಗೌಡರು ದೂರಿದರು.
ರಾಜ್ಯಪಾಲರಿಗೆ ದೂರು
'ನೈಸ್ ಅಕ್ರಮದ ಕುರಿತು ರಾಜ್ಯಾದ್ಯಂತ ಹೋರಾಟ ಮಾಡಲಾಗುತ್ತದೆ. ಈ ಕುರಿತು ರಾಜ್ಯಪಾಲರಿಗೂ ದೂರು ನೀಡಲು ಸಿದ್ಧತೆ ನಡೆಸಲಾಗಿದೆ. ಸದನ ಸಮಿತಿ ವರದಿ ನೀಡಿದ ಮೇಲೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ. ಇದು ಪಾರದರ್ಶಕ ಆಡಳಿತವೇ?' ಎಂದು ದೇವೇಗೌಡರು ಪ್ರಶ್ನೆ ಮಾಡಿದರು.
ಬಿಬಿಎಂಪಿ ಮೈತ್ರಿಗೆ ಭಂಗವಿಲ್ಲ
'ಬಿಬಿಎಂಪಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೀಡಿರುವ ಬೆಂಬಲ ಹಿಂದಕ್ಕೆ ಪಡೆಯುವುದಿಲ್ಲ. ಆದರೆ, ರಾಜ್ಯ ಸರ್ಕಾರದ ವಿರುದ್ಧದ ಹೋರಾಟವನ್ನು ಮುಂದುವರೆಸುತ್ತೇವೆ' ಎಂದು ದೇವೇಗೌಡರು ಹೇಳಿದರು.
ಮೇಯರ್-ಉಪಮೇಯರ್ ಪಟ್ಟ
2015ರ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ 100, ಕಾಂಗ್ರೆಸ್ 76, ಜೆಡಿಎಸ್ 14 ಸ್ಥಾನಗಳಲ್ಲಿ ಜಯಗಳಿಸಿತ್ತು. 8 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಜೆಡಿಎಸ್ ಬೆಂಬಲ ಪಡೆದ ಕಾಂಗ್ರೆಸ್ ಮೇಯರ್ ಪಟ್ಟವನ್ನು ಪಡೆದುಕೊಂಡಿದೆ. ಉಪ ಮೇಯರ್ ಪಟ್ಟ ಜೆಡಿಎಸ್ ಪಕ್ಷಕ್ಕೆ ಒಲಿದಿದೆ.