ಇಂದಿರಾ ಬೇಡ, ಅಕ್ಕ ಕ್ಯಾಂಟೀನ್ ಬೇಕು: ಟ್ವಿಟ್ಟರ್ ಅಭಿಯಾನ
ಇಂದಿರಾ ಕ್ಯಾಂಟೀನ್ ಗೆ ಅಕ್ಕ ಕ್ಯಾಂಟೀನ್ ಎಂದು ಹೆಸರಿಡಬೇಕೆಂದು ಆನ್ ಲೈನ್ ಅಭಿಯಾನವೊಂದನ್ನು ಕನ್ನಡಿಗರು ಆರಂಭಿಸಿದ್ದಾರೆ. ಇದಕ್ಕೆ ನೀವೂ ಬೆಂಬಲ ನೀಡಬಹುದು.
ಬೆಂಗಳೂರು, ಏಪ್ರಿಲ್ 20: ರಾಜ್ಯ ಸರ್ಕಾರ ಪ್ರಾರಂಭಿಸುತ್ತಿರುವ ನಮ್ಮ ಕ್ಯಾಂಟೀನ್ ಯೋಜನೆಗೆ ಇಂದಿರಾ ಕ್ಯಾಂಟೀನ್ ಎಂಬ ಹೆಸರನ್ನು ಇಡುವುದಕ್ಕೆ ಹೊರಟಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಹಲವು ಕನ್ನಡಿಗರು ಸರ್ಕಾರದ ಈ ನಡೆಯನ್ನು ವಿರೋಧಿಸಿದ್ದಾರೆ. ಅದಕ್ಕೆಂದೇ ಇಂದು ಇಂದಿರಾ ಬೇಡ, ಅಕ್ಕ ಬೇಕು ಎಂಬ ಆನ್ ಲೈನ್ ಅಭಿಯಾನವೊಂದನ್ನು ಕನ್ನಡಿಗರು ಆರಂಭಿಸಿದ್ದಾರೆ.
ಇಂದು (ಏಪ್ರಿಲ್ 20) ಬೆಳಗ್ಗೆ 9 ರಿಂದ #IndiraBedaAkkaBeku ಎಂಬ ಹ್ಯಾಶ್ ಟ್ಯಾಗ್ ಉಪಯೋಗಿಸಿ, ನಮ್ಮ ಕ್ಯಾಂಟಿನ್ ಗೆ ಇಂದಿರಾ ಬದಲು ಅಕ್ಕ ಕ್ಯಾಂಟೀನ್ ಎಂದು ಹೆಸರಿಡಿ ಎಂದು ಟ್ವೀಟ್ ಮಾಡುವ ಮೂಲಕ ಕನ್ನಡಿಗರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಈ ಅಭಿಯಾನದಲ್ಲಿ ಪ್ರತಿಯೊಬ್ಬರೂ ಭಾಗವಹಿಸಬಹುದಾಗಿದೆ.[ಇಂದಿರಾ ಕ್ಯಾಂಟೀನ್ ಏಕೆ? ಹೈ ಕಮಾಂಡ್ ಗುಲಾಮಗಿರಿ ಬಿಡಿ]
ಕರ್ನಾಟಕ ಸರ್ಕಾರ ಬಡಜನರಿಗಾಗಿ ಕ್ಯಾಂಟೀನ್ ಆರಂಭಿಸುತ್ತಿರುವುದು ಒಳ್ಳೆಯದೇ. ಇದರಿಂದ ರಾಜ್ಯದ ನಾನಾ ಭಾಗಗಳಿಂದ ಬೆಂಗಳೂರಿಗೆ ಕೂಲಿ ಕೆಲಸಕ್ಕೆ ಬರುವ ಬಡ ಜನರಿಗೆ ಅನುಕೂಲವಾಗುತ್ತದೆ.['ಇಂದಿರಾ ಕ್ಯಾಂಟೀನ್'ಗೆ ಈರುಳ್ಳಿ-ಬೆಳ್ಳುಳ್ಳಿ ಸಂಕಟ]
ಆದರೆ ಈ ಯೋಜನೆಗೆ ಮೊದಲು "ನಮ್ಮ ಕ್ಯಾಂಟೀನ್" ಎಂಬ ಹೆಸರಿಟ್ಟು ಇದೀಗ "ಇಂದಿರಾ ಕ್ಯಾಂಟೀನ್" ಎಂದು ಹೆಸರು ಬದಲಾಯಿಸುತ್ತಿರುವುದೇಕೆ? ಬಡವರಿಗಾಗಿ ಪರಿಚಯಿಸುತ್ತಿರುವ ಯೋಜನೆಗೆ ರಾಜಕೀಯದ ಬಣ್ಣ ಲೇಪಿಸಬೇಕೆ ಎಂಬ ಕೂಗು ಈಗ ರಾಜ್ಯದೆಲ್ಲೆಡೆ ಕೇಳಿ ಬರುತ್ತಿದೆ. ಈ ಬಗ್ಗೆ ಹಲವು ಟ್ವೀಟ್ಟರ್ ಹೇಳಿಕೆಗಳೂ ಓಡಾಡುತ್ತಿವೆ.[ನಮ್ಮ ಕ್ಯಾಂಟೀನ್ ಅಲ್ಲ, ಇಂದಿರಾ ಕ್ಯಾಂಟೀನ್: ಸಿದ್ದರಾಮಯ್ಯ]
|
ಕರ್ನಾಟಕದ ಮಹನೀಯರ ಹೆಸರಿಡಿ
ಈ ಯೋಜನೆಗೆ ಕರ್ನಾಟಕ ನಾಡು-ನುಡಿಗಾಗಿ ಶ್ರಮಿಸಿದ ಮಹನೀಯರೊಬ್ಬರ ಹೆಸರು ಇಡುವುದಕ್ಕಾಗುವುದಿಲ್ಲವೇ? ಎಂಬ ಪ್ರಶ್ನೆಯೂ ಉದ್ಭವವಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳಿಗಾದರೆ ದೆಹಲಿ ಮೂಲದ ನಾಯಕರ ಹೆಸರು ಇಟ್ಟರೆ ತಪ್ಪಿಲ್ಲ. ಆದರೆ ರಾಜ್ಯ ಸರ್ಕಾರದ ಯೋಜನೆಗಳಿಗಾದರೂ ಕನ್ನಡಿಗರ ಹೆಸರು ಇಡಬಾರದೆ ಎಂಬುದು ಕನ್ನಡಿಗರ ಪ್ರಶ್ನೆ.[ಸರ್ಕಾರದ ಕ್ಯಾಂಟೀನ್ಗೆ 'ಇಂದಿರಾ' ಹೆಸರು : ಕರವೇ ತೀವ್ರ ಆಕ್ಷೇಪ]
|
ಇವರಲ್ಲಿ ಒಬ್ಬರ ಹೆಸರನ್ನಾದರೂ ಇಡಬಾರದೇಕೆ?
ಕನ್ನಡ ನಾಡು-ನುಡಿಗಾಗಿ ಶ್ರಮಿಸಿದ ಬಸವಣ್ಣ, ಪುಲಿಕೇಶೀ, ಕೆಂಪೇಗೌಡ, ಮದಕರಿ, ರಾಯಣ್ಣ, ಚೆನ್ನಮ್ಮ , ನಿಜಲಿಂಗಪ್ಪ, ಓಬವ್ವ, ಅಬ್ಬಕ್ಕ ಕೆಂಗಲ್ ಹನುಮಂತಯ್ಯ, ದೇವರಾಜ್ ಅರಸ್, ವಿಶ್ವೇಶ್ವರಯ್ಯ ಅವರಂತಹ ಮಹನೀಯರ ಹೆಸರುಗಳನ್ನು ಈ ಯೋಜನೆಗೆ ಇಡಬಾರದೆ? ಎಂಬುದು ಹಲವು ಕನ್ನಡ ಪ್ರೇಮಿಗಳ ಪ್ರಶ್ನೆ.
|
ಅಕ್ಕಮಹಾದೇವಿ ಹೆಸರೇ ಸೂಕ್ತ
ಇಂದಿರಾ ಕ್ಯಾಂಟೀನ್ ಬದಲು ,"ಅಕ್ಕ ಕ್ಯಾಂಟೀನ್" ಎಂದು ಇಟ್ಟು, ಮಹಾಶರಣೆ ಅಕ್ಕಮಹಾದೇವಿ ಹೆಸರನ್ನು ಈ ಕ್ಯಾಂಟೀನ್ ಗೆ ನಾಮಕರಣ ಮಾಡಿದರೆ ಯೋಜನೆಗೆ ಸರಿಯಾದ ಅರ್ಥ ಬರುತ್ತದೆ. ದಾಸೋಹದಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದ ಅಕ್ಕಮಹಾದೇವಿ ಅವರ ಹೆಸರನ್ನ ಈ ಯೋಜನೆಗೆ ಇಟ್ಟರೆ ಯೋಜನೆಗೂ ಅರ್ಥ ಬರುತ್ತದೆ ಎಂಬುದು ಕೆಲವರ ಅಭಿಪ್ರಾಯ.
|
ಆನ್ ಲೈನ್ ಅಭಿಯಾನ
ಅಕ್ಕ ಹೆಸರಿಡಲುಒತ್ತಾಯಿಸಿ ಕರ್ನಾಟಕದ ವಿವಿಧ ಭಾಗಗಳಿಂದ ಬಂದು ಬೆಂಗಳೂರಲ್ಲಿ ನೆಲೆಸಿ, ಉದ್ಯೋಗದಲ್ಲಿ ತೊಡಗಿರುವ ಕನ್ನಡಿಗರು ಆನ್ ಲೈನ್ ಅಭಿಯಾನ ಆರಂಭಿಸಿದ್ದು, ಈ ಅಭಿಯಾನ ಇಂದು ಬೆಳಗ್ಗೆ 9 ಗಂಟೆಯಿಂದ ಆರಂಭವಾಗಿದೆ.
|
ನೀವೂ ಟ್ವೀಟ್ ಮಾಡಿ
ಈ ಅಭಿಪ್ರಾಯಕ್ಕೆ ನಿಮ್ಮ ಬೆಂಬಲವೂ ಇದ್ದರೆ, #IndiraBedaAkkaBeku ಎಂಬ ಹ್ಯಾಶ್ ಟ್ಯಾಗ್ ಬಳಸಿ, ನೀವೂ ನಿಮ್ಮ ಅಭಿಪ್ರಾಯವನ್ನು ಟ್ವೀಟ್ ಮಾಡಬಹುದು.