ಬೆಂಗಳೂರು ವಿವಿಯಲ್ಲಿ ಶ್ರೀಗಂಧದ ಮರ ಕಳವು ತಡೆಗೆ ವಾಚ್ ಟವರ್
ಬೆಂಗಳೂರು, ಮೇ 24: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಶ್ರೀಗಂಧದ ಕಳವು ಹೆಚ್ಚಾಗಿದೆ. ಹಾಗಾಗಿ ಗಂಧದ ಕಳ್ಳರ ಮೇಲೆ ನಿಗಾ ಇಡಲು ಆವರಣದ ನಾಲ್ಕು ಭಾಗಗಳಲ್ಲಿ ವಾಚ್ ಟವರ್ ನಿರ್ಮಾಣ ಮಾಡಲಾಗುತ್ತಿದೆ.
ಈ ವಾಚ್ಟವರ್ ನಲ್ಲಿ ನಿವೃತ್ತ ಯೋಧರು ಕಣ್ಣಿಡಲಿದ್ದಾರೆ. 2015ರಿಂದ ಇಲ್ಲಿಯವರೆಗೆ ಕ್ಯಾಂಪಸ್ ನಲ್ಲಿ ಗಂಧದ ಕಳ್ಳರು 89 ಶ್ರೀಗಂಧದ ಮರಗಳನ್ನು ಕಡಿದು ಸಾಗಿಸಿದ್ದಾರೆ. ಮೇ 10ರಂದು ಮಹಿಳಾ ವಿದ್ಯಾಥಿನಿಲಯದ ಬಳಿಯೇ 5 ಅಡಿ ಎತ್ತರದ ಗಂಧದ ಮರವನ್ನು ದುಷ್ಕರ್ಮಿಗಳು ದೋಚಿದ್ದಾರೆ.
ಕೆಲವು ಬೋಧಕ-ಬೋಧಕೇತರ ಸಿಬ್ಬಂದಿ ಸ್ವಯಂಪ್ರೇರಿತವಾಗಿ ರಾತ್ರಿ ವೇಳೆ ಗಸ್ತು ತಿರುಗಳು ಸಮ್ಮತಿಸಿದ್ದಾರೆ. ಅಕ್ಕ-ಪಕ್ಕದವರ ನೆರವಿನಿಂದ ಗಸ್ತು ತಿರುಗಸಲಿರುವ ಸಿಬ್ಬಂದಿಗೆ ವಾಹನಗಳನ್ನು ಒದಗಿಸುವುದರ ಜತೆಗೆ ನಿವೃತ್ತ ಯೋಧರ ಸೇವೆ ಬಳಸಿಕೊಂಡು ಅವರಿಗೆ ಶಸ್ತ್ರಾಸ್ತ್ರ ಒದಗಿಸಲು ಚಿಂತನೆ ನಡೆದಿದೆ. ಈ ಸಂಬಂಧ ಅನುಮತಿಗಾಗಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಬೆಂಗಳೂರು ವಿವಿ ಕುಲಸಚಿವ ಡಾ. ಬಿಕೆ ರವಿ ತಿಳಿಸಿದ್ದಾರೆ.
ಜ್ಞಾನಭಾರತಿ: ಒಂದು ವರ್ಷದಲ್ಲಿ 36 ಗಂಧದ ಮರ ಕಳವು
ನಿವೃತ್ತ ಯೋಧರನ್ನು ಬಳಸಿಕೊಳ್ಳುವುದರಿಂದ ಅವರಿಗೆ ತರಬೇತಿ ನೀಡುವ ಅಗತ್ಯವಿರುವುದಿಲ್ಲ. ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ ನಂತರ ಅವರಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸುವ ಕುಇರುತ ನಿರ್ಧರಿಸಲಾಗುತ್ತದೆ. ಇನ್ನು ಬಯೋ-ಪಾರ್ಕ್ನ ಸುತ್ತ ನಾಲ್ಕು ಕಡೆ ಕಾವಲು ಗೋಪುರಗಳನ್ನು ನಿರ್ಮಿಸಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.