ಬೆಂಗಳೂರು: ನಾಗರ ಹಾವು ಕಂಡು ದಿಕ್ಕಾಪಾಲಾದ ಮತದಾರರು
ಬೆಂಗಳೂರು, ಮೇ 12: ಸಾಲುಗಟ್ಟಿ ನಿಂತು ಮತದಾನ ಮಾಡುವ ಗಡಿಬಿಡಿಯಲ್ಲಿದ್ದ ಮತದಾರರು ನಾಗರ ಹಾವು ಕಂಡೊಡನೆ ದಿಕ್ಕಾಪಾಲಾಗಿ ಓಡಿದ ಘಟನೆ ಬೆಂಗಳೂರಿನ ಮಹದೇವಪುರ ವಿಧಾನಸಭೆ ಮತಕ್ಷೇತ್ರದಲ್ಲಿ ಸಂಭವಿಸಿದೆ.
ಮಹದೇವಪುರ ಕ್ಷೇತ್ರದ ವ್ಯಾಪ್ತಿಯ ಕಿತ್ತಗನೂರಿನಲ್ಲಿರುವ ಮತಗಟ್ಟೆ ಸಂಖ್ಯೆ 52ರಲ್ಲಿ ಈ ಘಟನೆ ನಡೆದಿದೆ. ಮತಗಟ್ಟೆ ಎದುರು ಸಾಲುಗಟ್ಟಿ ನಿಂತಿದ್ದ ಮತದಾರರಿಗೆ ಮತಗಟ್ಟೆ ಕಟ್ಟಡದ ಒಳಗಿನಿಂದ ನಾಗರ ಹಾವು ಹೊರ ಹೋಗುತ್ತಿರುವುದು ಕಣ್ಣಿಗೆ ಬಿದ್ದಿದೆ.
LIVE: ಕರ್ನಾಟಕದ ಹಣೆಬರಹ ಬರೆಯುತ್ತಿರುವ ಮತದಾರರು
ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು, ಮತಗಟ್ಟೆಗಳಲ್ಲಿ ಸಮರ್ಪಕ ಬೆಳಕು ಇಲ್ಲದ ಕಾರಣ ಹಾವು ಬಂದಿರುವುದು ತಕ್ಷಣಕ್ಕೆ ತಿಳಿದಿಲ್ಲ, ಮತದಾನ ಮಾಡುವ ವೇಳೆಗೆ ಹಾವು ಕಾಣಿಸಿಕೊಂಡಿದೆ, ಮತದಾರರು ಹಾಗೂ ಚುನಾವಣಾ ಸಿಬ್ಬಂದಿಗಳೆಲ್ಲರೂ ಕೆಲ ಕಾಲ ಆತಂಕಗೊಂಡಿದ್ದರು.
In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು
ತಿಳಿಯುತ್ತಿದ್ದಂತೆಯೇ ಜನರು ದಿಕ್ಕಾಪಾಲಾಗಿ ಓಡಿ ಹೋದರು. ಸ್ಥಳದಲ್ಲಿ ಪೊಲೀಸರು ಕೂಡ ಏನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಪೊಲೀಸರು ಜನರನ್ನು ನಿಯಂತ್ರಿಸಲು ಯತ್ನಿಸಿದರೆ ವಿನಃ ಹಾವಿಗೆ ಏನೂ ಮಾಡಲು ಸಾಧ್ಯವಾಗಲಿಲ್ಲ. ನಂತರ ಜನರ ಓಡಾಟ ಹೆಚ್ಚಾದ್ದರಿಂದ ನಾಗರಹಾವು ಪಕ್ಕದಲ್ಲಿದ್ದ ಪೊದೆಯೊಂದರಲ್ಲಿ ನುಸುಳಿ ಹೋಯಿತು.
ನಂತರ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತದಾರರನ್ನು ಮತ್ತೆ ಕರೆತರಲು ಹರಸಾಹಸ ಮಾಡಿದರು. ಹಾವು ಮತಗಟ್ಟೆಯಿಂದ ಹೊರ ಹೋಗಿದೆ ಬನ್ನಿ ಎಂದು ಕರೆ ತರಬೇಕಾಯಿತು. ಸುಮಾರು ಅರ್ಧಗಂಟೆಗಳ ಕಾಲ ಮತಗಟ್ಟೆ ಬಳಿ ಮತದಾರರು ಸುಳಿಯಲಿಲ್ಲವಾದರೂ ಮತಗಟ್ಟೆ ಸಿಬ್ಬಂದಿ ಮತ್ತು ಪೊಲೀಸರು ಮಾತ್ರ ಭಯದ ನಡುವೆಯೂ ಅನಿವಾರ್ಯವಾಗಿ ಮತಪೆಟ್ಟಿಗೆ ಕಾಯಬೇಕಾಯಿತು.