ಕೊಡಗುರ್ಕಿ ಗ್ರಾಮಕ್ಕೆ ಬಂದದ್ದು ಮಕ್ಕಳ ಕಳ್ಳಿಯೋ, ಭಿಕ್ಷುಕಿಯೋ..?
ದೇವನಹಳ್ಳಿ, ಮೇ.25 : ತಾಲೂಕಿನ ನಂದಿ ರಸ್ತೆಯಲ್ಲಿರುವ ಕೊಡುಗುರ್ಕಿ ಗ್ರಾಮದಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎಂದು ತಿಳಿದು ಅವರನ್ನು ಹಿಡಿಯಲು ಗ್ರಾಮಸ್ಥರು ಮಚ್ಚು, ದೊಣ್ಣೆ ಹಿಡಿದು ಸುತ್ತಮುತ್ತಲಿನ ತೋಪುಗಳಲ್ಲಿ ಹುಡುಕಿದ ಘಟನೆ ಗುರುವಾರ ನಡೆದಿದೆ.
ಬೆಳಗ್ಗೆ ಗ್ರಾಮದ ಹೊರವಲಯದದಲ್ಲಿರುವ ಜಯಂತಿ ಎಂಬ ಮಹಿಳೆಯ ಮನೆಗೆ ಹೋದ ಭಿಕ್ಷುಕಿಯೊಬ್ಬಳು ಭಿಕ್ಷೆ ನೀಡುವಂತೆ ಕೇಳಿದ್ದಾಳೆ. ಈ ವೇಳೆ ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆ ಬೆಳಗ್ಗೆಯೇ ಇನ್ನೂ ಊಟ ಆಗಿಲ್ಲ ಎಂದು ಹೇಳಿದಾಗ ಭಿಕ್ಷುಕಿ ವೇಷದಲ್ಲಿ ಬಂದ ಮಹಿಳೆ ಚಾಕು ತೋರಿಸಿದಳಂತೆ.
ಮಕ್ಕಳ ಕಳ್ಳರ ವದಂತಿಗೆ ಕಿವಿಗೊಡಬೇಡಿ: ಡಿಸಿಪಿ ರವಿ ಡಿ. ಚನ್ನಣ್ಣನವರ್
ಇದರಿಂದ ಭಯಭೀತಗೊಂಡ ಮನೆಯೊಡತಿ ಕಿರುಚುತ್ತ ಗ್ರಾಮದ ಒಳಗೆ ಓಡಿ ಬಂದಿದ್ದಾಳೆ. ಕಿರುಚುತ್ತ ಬಂದ ಮಹಿಳೆಯನ್ನು ಕಂಡು ಗ್ರಾಮಸ್ಥರೆಲ್ಲ ಮಕ್ಕಳ ಕಳ್ಳರು ಬಂದಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದಾರೆ.
ಸುದ್ದಿ ತಿಳಿದ ಗ್ರಾಮದ ಸುಮಾರು 100 ಕ್ಕೂ ಅಧಿಕ ಗ್ರಾಮಸ್ಥರು ದೊಣ್ಣೆ, ಮಚ್ಚು ಹಿಡಿದು ಊರಿನ ಪ್ರತಿ ಬೀದಿ, ಗ್ರಾಮದ ಹೊರವಲಯದ ತೋಟ, ಗದ್ದೆ ಹುಡಿಕಿದ್ದಾರೆ. ಆದರೆ ಆಕೆ ಪತ್ತೆಯಾಗಿಲ್ಲ.
ಇನ್ನು ಜಯಂತಿ ಮನೆಗೆ ಭಿಕ್ಷುಕಿ ಬಂದು ಚಾಕು ತೋರಿಸಿರುವುದು ಧೃಢವಾಗಿಲ್ಲ. ಗ್ರಾಮಸ್ಥರು ಭಯಭೀತರಾಗಿದ್ದರಿಂದ ಗ್ರಾಮದಲ್ಲಿ ಪೋಲಿಸರನ್ನು ನೇಮಿಸಲಾಗಿದೆ. ಇದಕ್ಕೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಕಾರಣವಾಗಿದೆ.
ಮಕ್ಕಳ ಕಳ್ಳನೆಂದು ಥಳಿಸಿ ಕೊಂದ ಸ್ಥಳೀಯರು: 9 ಮಂದಿ ಬಂಧನ
ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸ್ ಆಪ್ ನಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವಿಡಿಯೋಗಳು ಸಾಕಷ್ಟು ವೈರಲ್ ಆಗಿವೆ.
ಇದಕ್ಕೆ ಪ್ರತ್ಯುತ್ತರವಾಗಿ ಮಕ್ಕಳ ಕಳ್ಳರು ಬಂದಿರುವುದು ಸುಳ್ಳು. ಇದನ್ನು ಯಾರು ನಂಬಬಾರದು ಎಂದು ಪೋಲಿಸ್ ಇಲಾಖೆಯಿಂದ ಮಾಹಿತಿ ಸಹ ನೀಡಿದ್ದಾರೆ. ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ವಿಡಿಯೋಗಳನ್ನು ವೈರಲ್ ಮಾಡಿದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ಸಹ ನೀಡಿದ್ದಾರೆ.
ಅದರ ನಡುವೆ ದೇವನಹಳ್ಳಿ ತಾಲೂಕಿನಲ್ಲಿ ಇಂತಹ ಘಟನೆ ನಡೆದಿರುವುದು ಈ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದಂತೆ ಆಗಿದೆ. ಮಕ್ಕಳ ಕಳ್ಳರು ಸುದ್ದಿ ವೈರಲ್ ಆಗಿರುವ ಹಿನ್ನಲೆಯಲ್ಲಿ ಗ್ರಾಮಗಳಲ್ಲಿ ಪಾತ್ರೆ ಸಾಮಾನು ಮಾರುವವರನ್ನು, ಮಾನಸಿಕ ಅಸ್ವಸ್ಥರನ್ನು, ಭಿಕ್ಷುಕರನ್ನು ಹೀಗೆ ಸ್ವಲ್ಪ ಕೊಳಕಗಾಗಿ ಕಂಡು ಬಂದರೆ ಸಾಕು, ಸಾರ್ವಜನಿಕರು ಮಕ್ಕಳ ಕಳ್ಳರೆಂದು ಅನುಮಾನಿಸುತ್ತಿದ್ದಾರೆ.
ಇಷ್ಟೆಲ್ಲಾ ಘಟನೆಗಳು ನಡೆದರೂ ರಾಜ್ಯದಲ್ಲಿ ಮಕ್ಕಳ ಕಳ್ಳತನವಾಗಿರುವ ಒಂದು ಪ್ರಕರಣ ದಾಖಲಾಗಿಲ್ಲ.