ವಿದ್ವತ್ ಪರ ವಕೀಲರಿಗೆ ನಲಪಾಡ್ ಚೇಲಾಗಳಿಂದ ಬೆದರಿಕೆ: ದೂರು
ಬೆಂಗಳೂರು, ಫೆಬ್ರವರಿ 22: ಹಲ್ಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಮೊಹಮ್ಮದ್ ನಲಪಾಡ್ ಅವರ ಸಹಚರರು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ವಿದ್ವತ್ ಪರ ವಕೀಲ ಶಾಮ್ ಸುಂದರ್ ದೂರು ದಾಖಲಿಸಿದ್ದಾರೆ.
ಕೇಸು ಕೈಬಿಡಬೇಕೆಂದು ಇಲ್ಲವಾದರೆ ಕೊಲ್ಲುವುದಾಗಿ ಹೆದರಿಸಿ ಸಾಕಷ್ಟು ಕರೆಗಳು ಬಂದಿವೆ ಎಂದು ಶಾಮ್ ಸುಂದರ್ ಅವರು ಇಂದು ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ಅವರ ಬಳಿ ದೂರು ನೀಡಿದ್ದಾರೆ.
ಯುಬಿ ಸಿಟಿಯಿಂದ ಜೈಲು : ನಲಪಾಡ್ ಪ್ರಕರಣದ 10 ಬೆಳವಣಿಗೆ
ದೂರು ಸ್ವೀಕರಿಸಿದ ಆಯುಕ್ತರು ಡಿಸಿಪಿಗೆ ತನಿಖೆಗೆ ಸೂಚಿಸಿದ್ದು, ಯಾವುದೇ ತೊಂದರೆ ಆಗದಂತೆ ಸೂಕ್ತ ಭದ್ರತೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಮ್ ಸುಂದರ್ ಹೇಳಿದ್ದಾರೆ.
'ನಿನ್ನೆ ನ್ಯಾಯಾಲಯದ ಆವರಣದಲ್ಲಿಯೇ ಕೆಲವರು ನನ್ನ ಬಳಿ ಬಂದು ನನಗೆ ಬೆದರಿಕೆ ಹಾಕಿದರು, ಆ ನಂತರ ಕೂಡಾ ಕೂಡ ಸಾಕಷ್ಟು ಮೆಸೆಜ್ಗಳು, ಕರೆಗಳನ್ನು ಮಾಡಿ ಹೆದರಿಸಲು ಪ್ರಯತ್ನಿಸಿದ್ದಾರೆ, ಮೊಹಮ್ಮದ್ ನಲಪಾಡ್ನ ಸಹಚರರು ನನ್ನ ಮೇಲೆ ಕೋಪದಿಂದಿದ್ದು, ಏನಾದರೂ ಹಾನಿ ಮಾಡುವ ಸಂಭವ ಇರುವ ಕಾರಣ ಸೂಕ್ತ ಭದ್ರತೆ ನೀಡಬೇಕು' ಎಂದು ಮನವಿ ಮಾಡಿರುವುದಾಗಿ ಅವರು ಹೇಳಿದ್ದಾರೆ.
'ನಮ್ಮ ಗುರುಗೆ ಬೇಲ್ ಸಿಗದ ಹಾಗೆ ಮಾಡಿದೆ ಅಲ್ವಾ ನಿಂಗೆ ಕಾದಿದೆ' ಎಂದು ಕೆಲವರು ನ್ಯಾಯಾಲಯದ ಆವರಣದಲ್ಲಿ ನೇರವಾಗಿ ಧಮ್ಕಿ ಹಾಕಿದರು ಅಷ್ಟೆ ಅಲ್ಲದೆ ಕೆಟ್ಟ ಶಬ್ದಗಳನ್ನು ನನ್ನನ್ನು ನಿಂದಿಸಿದರು ಎಂದು ಅವರು ಹೇಳಿದ್ದಾರೆ.
ನಲಪಾಡ್ ಗ್ಯಾಂಗ್ ದಾಳಿಗೆ ನಲುಗಿದ ವಿದ್ವತ್ ಯಾರು?
ನಿನ್ನೆ ಸೆಷನ್ಸ್ ಕೋರ್ಟ್ ಮುಂದೆ ಹಾಜರಾಗಿದ್ದ ಮೊಹಮ್ಮದ್ ನಲಪಾಡ್ನನ್ನು ಮಾರ್ಚ್ 7 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.