15 ದಿನಗಳ ಚಿಕಿತ್ಸೆ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ವಿದ್ವತ್
ಬೆಂಗಳೂರು, ಮಾರ್ಚ್ 05: ಮೊಹಮ್ಮದ್ ನಲಪಾಡ್ ಮತ್ತು ಸಹಚರರಿಂದ ಹಲ್ಲೆಗೆ ಒಳಗಾಗಿ ವಿಠಲ್ ಮಲ್ಯ ಆಸ್ಪತ್ರೆಗೆ ಸೇರಿದ್ದ ವಿದ್ವತ್ 15 ದಿನಗಳ ನಂತರ ನಿನ್ನೆ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆ ಸೇರಿದ್ದಾರೆ.
ಫೆ.17ರ ರಾತ್ರಿ ಶಾಂತಿನಗರ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಮಗ ಮೊಹಮ್ಮದ್ ನಲಪಾಡ್ ಮತ್ತು ಸಹಚರರಿಂದ ಯುಬಿಸಿಟಿ ಬಳಿಯ ಫರ್ಜಿ ಕೆಫೆಯಲ್ಲಿ ಹಲ್ಲೆಗೊಳಗಾಗಿದ್ದ ವಿದ್ವತ್ ಅಂದೇ ವಿಠಲ್ ಮಲ್ಯ ಆಸ್ಪತ್ರೆ ಸೇರಿದ್ದರು.
ಮೊಹಮ್ಮದ್ ನಲಪಾಡ್ ಪ್ರಕರಣ : ವಿದ್ವತ್ ನೀಡಿದ ಘಟನೆಯ ವಿವರ
ಮೊಹಮ್ಮದ್ ನಲಪಾಡ್ ಬಿಯರ್ ಬಾಟಲಿಯಿಂದ ಮುಖಕ್ಕೆ ಹೊಡೆದ ಕಾರಣ ವಿದ್ವತ್ನ ಮೂಗು, ಹಲ್ಲುಗಳು ಮತ್ತು ದವಡೆ ಮುರಿದಿತ್ತು, ಆತನ ದೇಹದೊಳಕ್ಕೆ ಬಾಟಲಿ ಚೂರು ಹೊಕ್ಕಿದ್ದವು, ಅಷ್ಟೆ ಅಲ್ಲದೆ ನಲಪಾಡ್ ಗ್ಯಾಂಗ್ ಹೊಡೆದ ರಭಸಕ್ಕೆ ಕಣ್ಣು ಗುಡ್ಡೆಯೊಳಗೆ ರಕ್ತ ಹೆಪ್ಪುಗಟ್ಟಿ ಬಾವು ಬಂದು ಸೋಂಕಿಗೆ ತುತ್ತಾಗಿತ್ತು. ಶ್ವಾಸಕೋಶದ ಒಂಬತ್ತು ಮೂಳೆಗಳು ಸಹ ಮುರಿದು ಹೋಗಿದ್ದವು. ಅತ್ಯಂತ ಚಿಂತಾಜನಕ ಪರಿಸ್ಥಿತಿಯಲ್ಲಿ ವಿದ್ವತ್ ಅವರು ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದರು.
ಮಲ್ಯ ಆಸ್ಪತ್ರೆಯ ಹಿರಿಯ ವೈದ್ಯ ಆನಂದ್ ಅವರ ನೇತೃತ್ವದ ತಂಡ ವಿದ್ವತ್ ಅವರಿಗೆ ಚಿಕಿತ್ಸೆ ನೀಡಲಾಗಿತ್ತು, ಆರು ದಿನಗಳ ಕಾಲ ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಿದ ಬಳಿಕ ಫೆ.25 ರಂದು ವಿದ್ವತ್ ಅವರನ್ನು ಐಸಿಯುನಿಂದ ಜನರಲ್ ವಾರ್ಡ್ ಶಿಫ್ಟ್ ಮಾಡಲಾಗಿತ್ತು,
ನಲಪಾಡ್ ಗ್ಯಾಂಗ್ ದಾಳಿಗೆ ನಲುಗಿದ ವಿದ್ವತ್ ಯಾರು?
ಜನರಲ್ ವಾರ್ಡ್ಗೆ ಶಿಫ್ಟ್ ಆಗಿದ್ದರೂ ಸಹಿತ ವಿದ್ವತ್ ಅವರು ಸಿಸಿಬಿ ಪೊಲೀಸರಿಗೆ ಹಲ್ಲೆ ಕುರಿತು ಹೇಳಿಕೆ ನೀಡಿರಲಿಲ್ಲ, ಅವರ ಆರೋಗ್ಯ ಸ್ಥಿತಿ ಸರಿಯಿಲ್ಲದ ಕಾರಣ ಹೇಳಿಕೆ ನೀಡಲು ಸಾಧ್ಯವಾಗಿಲ್ಲ ಎನ್ನಲಾಗಿತ್ತು. ನಲಾಪಾಡ್ ಜಾಮೀನು ಅರ್ಜಿ ಸೆಷನ್ಸ್ ಕೋರ್ಟ್ನಲ್ಲಿ ತಿರಸ್ಕೃತವಾದ ಬಳಿಕ ಅವರು ನಿನ್ನೆಯಷ್ಟೆ (ಮಾರ್ಚ್ 05) ಸಿಸಿಬಿಗೆ ಘಟನೆ ಕುರಿತು ಹೇಳಿಕೆ ನೀಡಿದ್ದಾರೆ. ಡಿಸ್ಚಾರ್ಜ್ ಆಗಲು ವೈದ್ಯರು ಸೂಚಿಸಿದ್ದರೂ ಸಹ ವಿದ್ವತ್ ಅವರು ಬೇಕೆಂದೇ ಡಿಸ್ಚಾರ್ಜ್ ಆಗಿಲ್ಲ ಎಂದು ನಲಪಾಡ್ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಾಡಿದ್ದರು.
ಡಿಸ್ಚಾರ್ಜ್ ಆದ ಬಳಿಕ ವಿದ್ವತ್ ಅವರು ಘಟನೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಲು ನಿರಾಕರಿಸಿದ್ದಾರೆ.