ವಿಧಾನಸೌಧ ಮೊಗಸಾಲೆಯಲ್ಲಿ ಹುಟ್ಟುಹಬ್ಬ ಆಚರಣೆ: ಭಾರಿ ವಿವಾದ
ಬೆಂಗಳೂರು, ಜು.20: ವಿಧಾನಸೌಧದ ಮೊಗಸಾಲೆಯಲ್ಲಿ ವಿಧಾನಸಭೆ ಕಾರ್ಯದರ್ಶಿ ಎಸ್. ಮೂರ್ತಿಯವರು ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರುವುದು ಇದೀಗ ಭಾರಿ ವಿವಾದಕ್ಕೆ ಗ್ರಾಸವಾಗಿದೆ.
ವಿಧಾನಸೌಧವು ಪ್ರತಿನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ ಸುದ್ದಿಯಾಗುತ್ತಿದೆ, ಒಂದು ದಿನ ವಿಧಾನಸೌಧ ಕೊಠಡಿಗಳ ವಿನ್ಯಾಸ ಬದಲಾವಣೆಗೆ ಸಂಬಂಧಿಸಿದಂತೆ ಇನ್ನೊಂದು ದಿನ ಸಚಿವರ ಕಾರು ಹೀಗೆ ಹಲವಾರು ರೀತಿಯಲ್ಲಿ ಸುದ್ದಿಯಲ್ಲಿದೆ, ಈಗ ಮತ್ತೊಂದು ವಿವಾದಕ್ಕೆ ಗುರಿಯಾಗಿದೆ.
ವಿಧಾನಸೌಧದ ಪ್ರಾಂಗಣವೋ ಕಾಂಗ್ರೆಸ್ ಕಚೇರಿಯೋ? ಟ್ವೀಟ್ ತರಾಟೆ
ಸರ್ಕಾರಿ ಕಚೇರಿಯಲ್ಲಿ ಹುಟ್ಟುಹಬ್ಬ ಮತ್ತಿತರೆ ಸಂದರ್ಭಗಳಲ್ಲಿ ಸರಳವಾಗಿ ಅಭಿನಂನೆ ಸಲ್ಲಿಸಲಾಗುತ್ತದೆ ಆದರೆ ವಿಧಾನಸಭೆಯ ಮೊಗಸಾಲೆಯಲ್ಲಿ ಸಿಬ್ಬಂದಿಗಳ ಸಮ್ಮುಖದಲ್ಲಿ ಮೂರ್ತಿಯವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ.
ಈ ಮಧ್ಯೆ, ಶಾಸಕರ ಭವನದಲ್ಲಿ ನಿಯಮಾವಳಿ ಮೀರಿ ಖರೀದಿ ಮತ್ತಿತರ ಚಟುವಟಿಕೆಗಳು ನಡೆಯುತ್ತಿವೆ. ಕಿಟಕಿಗಳ ಕರ್ಟನ್, ಬೆಡ್, ಬೆಡ್ಶೀಟ್ ಬದಲಾವಣೆಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂಬ ದೂರುಗಳು ಕೇಳಿಬಂದಿವೆ.
ಜತೆಗೆ, ಮಾಜಿ ಶಾಸಕರು, ಹೊರರಾಜ್ಯಗಳಿಂದ ಆಗಮಿಸುವ ಶಾಸನಸಭೆ ಸಮಿತಿಗಳ ಸದಸ್ಯರು ಹಾಗೂ ಅತಿಥಿಗಳಿಗಾಗಿ ಮೀಸಲಿಡುವ ಶಾಸಕರ ಭವನದ ಕೊಠಡಿಯೊಂದರಲ್ಲಿ ಸಚಿವಾಲಯದ ಸಿಬ್ಬಂದಿಯೊಬ್ಬರು ಹಲವು ತಿಂಗಳಿಂದ ಸಂಸಾರದೊಂದಿಗೆ ವಾಸ್ತವ್ಯ ಹೂಡಿದ್ದಾರೆ ಎಂದು ದೂರುಗಳು ವಿಧಾನಸಭಾಧ್ಯಕ್ಷರಿಗೆ ಬಂದಿವೆ ಎಂದು ಹೇಳಲಾಗಿದೆ.
ಶಾಸಕರ ಭವನದ ಕ್ಷೇತ್ರಾಧಿಕಾರಿ ಪುಟ್ಟ ಓಬಳರೆಡ್ಡಿ ಅವರನ್ನು ಸ್ಪೀಕರ್ ಕೆ.ಆರ್. ರಮೇಶ್ಕುಮಾರ್ ಅವರ ಸೂಚನೆಯಂತೆ ಗುರುವಾರ ಆ ಜವಾಬ್ದಾರಿಯಿಂದ ಬಿಡುಗಡೆ ಮಾಡಲಾಗಿದೆ. ಓಬಳರೆಡ್ಡಿ ಅವರಿಗೆ ಹೊಸ ಜವಾಬ್ದಾರಿ ನೀಡದೆ ತಕ್ಷಣದಿಂದ ಜಾರಿಗೆ ಬರುವಂತೆ ಶಾಸಕರ ಭವನದ ಕ್ಷೇತ್ರಾಧಿಕಾರಿ ಹೊಣೆಯನ್ನು ಹಿಂಪಡೆದು ಗುರುವಾರ ಆದೇಶ ಹೊರಡಿಸಲಾಗಿದೆ ಎಂದು ತಿಳಿದುಬಂದಿದೆ.