ಆಸಿಡ್ ಸಂತ್ರಸ್ತೆಯರು ಮಾಸಿಕ ಮಾಸಾಶನ ಪಡೆದುಕೊಳ್ಳುವಂತೆ ಉಮಾಶ್ರೀ ಮನವಿ
ಬೆಂಗಳೂರು, ಜನವರಿ. 22 : ರಾಜ್ಯದಲ್ಲಿ ಮಹಿಳಾ ಉದ್ದೇಶಿತ ಆಯವ್ಯಯದಲ್ಲಿ 2016-17ನೇ ಸಾಲಿಗೆ 66,694 ಕೋಟಿ ರೂ. ಅನುದಾನ ನಿಗದಿ ಪಡಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ಅವರು ತಿಳಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಹಿಳಾ ಉದ್ದೇಶಿತ ಆಯವ್ಯಯದ ಅನುಷ್ಠಾನದ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸಿಡ್ ಸಂತ್ರಸ್ತೆಯರಿಗೆ ಮಹಿಳಾ ಆಯೋಗದಿಂದ ಮಾಸಿಕ 3 ಸಾವಿರ ರೂ.ಗಳ ಮಾಸಾಶನ ನೀಡಲಾಗುತ್ತಿದೆ. ಈ ವರೆಗೆ 189 ಸಂತ್ರಸ್ತೆಯರಲ್ಲಿ 12 ಮಂದಿ ಮಾತ್ರ ಈ ಸೌಲಭ್ಯ ಪಡೆಯುತ್ತಿದ್ದಾರೆ.
ಉಳಿದವರಿಗೆ ಈ ಸೌಲಭ್ಯ ಪಡೆದುಕೊಳ್ಳುವಂತೆ ಮತ್ತೊಮ್ಮೆ ಪತ್ರ ಬರೆಯಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ಅವರು ತಿಳಿಸಿದರು.
ಎಪಿಎಂಸಿಗೆ ಮಹಿಳೆಯರ ನಾಮನಿರ್ದೇಶನ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಸರ್ಕಾರ ಎರಡು ಸದಸ್ಯ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಿದೆ.
ಜೊತೆಗೆ ಪ್ರತಿ ಎಪಿಎಂಸಿಗೆ ಒಬ್ಬ ಮಹಿಳೆಯನ್ನು ಸರ್ಕಾರದಿಂದ ನಾಮನಿರ್ದೇಶನ ಮಾಡಲಾಗುತ್ತಿದೆ. ಇದರಿಂದಾಗಿ ರಾಜ್ಯದ 131 ಎಪಿಎಂಸಿಗಳಲ್ಲಿ ಮಹಿಳಾ ಸದಸ್ಯರ ಸಂಖ್ಯೆ 393ಕ್ಕೇರಲಿದೆ ಎಂದು ಸಚಿವೆ ಉಮಾಶ್ರೀ ಅವರು ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ 14 ಲಕ್ಷ ಮಹಿಳೆಯರು ಪಹಣಿ ಹೊಂದಿದ್ದಾರೆ. ಅಂತೆಯೇ ನಗರ ಪ್ರದೇಶಗಳಲ್ಲಿ ಮಹಿಳೆಯರಿಗೆ ಪಹಣಿ ವಿತರಿಸುವ ಗುರಿ ಇದೆ. ಮೀನುಗಾರಿಕಾ ಇಲಾಖೆಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳನ್ನು ಹೆಚ್ಚಿಸಲು ಸೂಚಿಸಲಾಗಿದೆ.
ರೈತರ ಆತ್ಮಹತ್ಯೆ ಕುರಿತಂತೆ ಜಿಲ್ಲೆಗಳಿಂದ ಮಾಹಿತಿ ಪಡೆಯಲಾಗುತ್ತಿದೆ. ಸಭೆಗೆ ಮಾಹಿತಿ ನೀಡದ ಹಾಗೂ ಅಪೂರ್ಣ ಮಾಹಿತಿ ನೀಡಿದ ಇಲಾಖೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.