ಬಿಡುಗಡೆ ಒತ್ತಾಯದ ಕಾವಿನಲ್ಲಿ ತತ್ತರಗೊಂಡ ವಿಧಾನ ಸಭೆ
ಬೆಂಗಳೂರು, ಜುಲೈ, 15 : ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿ ನೇತಾರ, ಮಾಜಿ ಸಚಿವ ವೈಜನಾಥ್ ಪಾಟೀಲ್ ಅವರನ್ನು ಪೊಲೀಸರು ಏಕಾಏಕಿ ಬಂಧಿಸಿದ ಪರಿಣಾಮ, ಬಿಡುಗಡೆ ಮಾಡುವಂತೆ ಒತ್ತಾಯಿಸಿ ಹೋರಾಟ ಭುಗಿಲೆದ್ದಿತ್ತು. ಪಾಟೀಲ್ ಅವರನ್ನು ಬಿಡುಗಡೆಗೊಳಿಸಲು ಈಗಾಗಲೇ ಆದೇಶಿಸಲಾಗಿದೆ ಎಂದು ಗೃಹ ಸಚಿವ ಕೆ.ಜೆ ಜಾರ್ಜ್ ವಿಧಾನ ಸಭೆಯಲ್ಲಿ ಮಂಗಳವಾರ ತಿಳಿಸಿದರು.
ಫ್ರೀಡಂ ಪಾರ್ಕ್ ನಲ್ಲಿ ಆರ್ಟಿಕಲ್ 371ಜೆ ಯಲ್ಲಿ ಕೆಲವು ದೋಷಗಳಿವೆ. ಅವುಗಳನ್ನು ಸರಿಪಡಿಸಿದ ಬಳಿಕವೇ ಅನುಷ್ಠಾನಗೊಳಿಸಬೇಕು ಎಂದು ಮಾಜಿ ಸಚಿವ ಪಾಟೀಲ್ ಹೋರಾಟ ಕೈಗೊಂಡಿದ್ದರು. ಧರಣಿ ಅವಧಿಯಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಲು ಅಪೇಕ್ಷಿಸಿ, ಅನುಮತಿ ಪಡೆಯದೇ ರಾಜಭವನಕ್ಕೆ ತೆರಳುವುದಾಗಿ ಹಠ ಹಿಡಿದರು. ಈ ಕಾರಣದಿಂದಾಗಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಪಾಟೀಲ್ ಅವರನ್ನು ಬಂಧಿಸಿದ್ದಾರೆ ಎಂದು ಗೃಹ ಸಚಿವ ಕೆ.ಜೆ ಜಾರ್ಜ್ ತಿಳಿಸಿದರು.[ಹೈಕ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ]
ಆಳಂದಾ ಕ್ಷೇತ್ರದ ಕೆಜೆಪಿ ಶಾಸಕ ಬಿ. ಆರ್ ಪಾಟೀಲ್ ಸೇರಿದಂತೆ ಹಲವಾರು ಹೈಕಮಾಂಡ್ ಭಾಗದ ಶಾಸಕರು ನಾವು ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ವೈಜನಾಥ್ ಅವರನ್ನು ಬಂಧಿಸಿರುವುದು ಸರಿಯಲ್ಲ ಎಂದು ಸದನದಲ್ಲಿ ಪ್ರತಿಭಟನೆಗೆ ಮುಂದಾದರು.
ಇವರೊಂದಿಗೆ ನೈಸ್ ಸಂಸ್ಥೆ ಮುಖ್ಯಸ್ಥ ಮತ್ತು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಅಶೋಕ್ ಖೇಣಿ, ಬಿಜೆಪಿ ದೊಡ್ಡನಗೌಡ ಪಾಟೀಲ್, ಕೆಜೆಪಿಯ ಗುರುಪಾಟೀಲ್, ಜೆಡಿಎಸ್ ನ ಡಾ. ಶಿವರಾಜ ಪಾಟೀಲ್ ಧರಣಿ ಆರಂಭಿಸಿ ಸರ್ಕಾರ ಪ್ರಜಾತಂತ್ರ ವಿರೋಧಿಯಾಗಿ ವರ್ತಿಸುತ್ತಿದೆ ಎಂದು ಧಿಕ್ಕಾರ ಕೂಗಲು ಮುಂದಾದರು.
ಕೂಡಲೇ ಬಿಡುಗಡೆ ಮಾಡುವುದಾಗಿ ಭರವಸೆ ನೀಡಬೇಕೆಂದು ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ 'ಪೊಲೀಸರು ಪಾಟೀಲ್ ಅವರನ್ನು ಬಂಧಿಸಿದ್ದಾರೆಯೇ ವಿನಃ ಅವರ ಮೇಲೆ ಯಾವುದೇ ಮೊಕದ್ದಮೆ ಹೂಡಿರುವುದಿಲ್ಲ. ಅವರನ್ನು ಗೌರವಯುತವಾಗಿಯೇ ನಡೆಸಿಕೊಳ್ಳಲಾಗಿದೆ. ಈಗಾಗಲೇ ಬಿಡುಗಡೆಗೊಳಿಸುವಂತೆ ಆದೇಶ ಕಳುಹಿಸಲಾಗಿದೆ' ಎಂದು ಸಚಿವ ಜಾರ್ಜ್ ಸದನಕ್ಕೆ ಸ್ಪಷ್ಟಪಡಿಸಿದರು.