ಕಪ್ಪುಹಣ: ಜನಧನ್ ಖಾತೆದಾರರಿಗೆ ಯು.ಟಿ.ಖಾದರ್ ಎಚ್ಚರಿಕೆ
ಬೆಂಗಳೂರು, ನವೆಂಬರ್ 15; ಜನಧನ್ ಖಾತೆಯಲ್ಲಿ ಹೆಚ್ಚು ಹಣ ಜಮೆ ಮಾಡಬೇಡಿ ಸರ್ಕಾರಿ ಸಬ್ಸಿಡಿ ಯೋಜನೆಗಳ ಲಾಭ ದೊರೆಯುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಬೆಂಗಳೂರಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರ ಖಾತೆಯನ್ನು ಕಪ್ಪುಹಣ ಉಳ್ಳವರು ಉಪಯೋಗಿಸಿಕೊಳ್ಳಲು ಮುಂದಾಗಿದ್ದಾರೆ ಹೀಗಾಗಿ ಎಚ್ಚರ ವಹಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಬಡವರ ಖಾತೆಯಲ್ಲಿ ಹೆಚ್ಚು ಹಣ ಇದ್ದರೆ ಬಿಪಿಎಲ್ ಕಾರ್ಡ್ ರದ್ದಾಗದೆ ಇರಬಹುದು. ಆದರೆ ಸರ್ಕಾರದ ಇತರ ಬಡವರ ಪರ ಯೋಜನೆಗಳನ್ನು ಬಳಸಿಕೊಳ್ಳಲು ಸಮಸ್ಯೆಗಳು ಉದ್ಭವವಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.[ಪ್ರಧಾನಮಂತ್ರಿ ಜನಧನ ಯೋಜನೆ ಎಂದರೇನು?]
ರಾಜ್ಯದಲ್ಲಿ ಉಪ್ಪಿಗೆ ಬರವಿಲ್ಲ. ಹೆಚ್ಚು ಬೆಲೆಗೆ ಉಪ್ಪು ಮಾರಾಟ ಮಾಡಿರುವ 15 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ರಾಜ್ಯದ ಸುಮಾರು 126 ಕಡೆ ಗರಿಷ್ಠ ಚಿಲ್ಲರೆ ಬೆಲೆಗಿಂತ ಹೆಚ್ಚು ದರದಲ್ಲಿ ಉಪ್ಪು ಮಾರಾಟ ಮಾಡುತ್ತಿರುವ ಬಗ್ಗೆ ತಪಾಸಣೆ ನಡೆಸಲಾಗುವುದು ಎಂದಿದ್ದಾರೆ.[ಕರ್ನಾಟಕದಲ್ಲಿ ಉಪ್ಪು, ಸಕ್ಕರೆಗೆ ಬರವಿಲ್ಲ : ಖಾದರ್]
ದೊಡ್ಡ ದೊಡ್ಡ ಮಾಲುಗಳು ಹಾಗೂ ಸೂಪರ್ ಮಾರ್ಕೆಟ್ ಗಳಲ್ಲಿ ಆಹಾರ ಪದಾರ್ಥಗಳನ್ನು ಖರೀದಿಸುವ ಜನ ಆಹಾರ ಪದಾರ್ಥಗಳ ತೂಕ ಸರಿಯಿದೆಯೇ ಅಥವಾ ಇಲ್ಲ ಎಂಬುದನ್ನು ತಾವಾಗಿಯೇ ಪರೀಕ್ಷಿಸಿಕೊಳ್ಳಲು ಸೂಪರ್ ಮಾರ್ಕೆಟ್ ಹಾಗೂ ದೊಡ್ಡ ಅಂಗಡಿಗಳಲ್ಲಿ ತೂಕದ ಯಂತ್ರವನ್ನು ಇಡುವುದನ್ನು ಕಡ್ಡಾಯ ಮಾಡಲಾಗಿದೆ. ಇದರಿಂದ ಗ್ರಾಹಕರಿಗೆ ತೂಕದಲ್ಲಿ ಮೋಸ ಆಗುವುದಿಲ್ಲ.
ಈ ಸಂಬಂಧ ತೂಕ ಮತ್ತು ಅಳತೆ ಇಲಾಖೆ ಮಾಲು ಹಾಗೂ ದೊಡ್ಡ ದೊಡ್ಡ ಅಂಗಡಿಗಳಿಗೆ ಸೂಚನೆ ನೀಡಿದ್ದು, ರಾಜ್ಯದಲ್ಲಿ 1013 ಬೆಂಗಳೂರಿನಲ್ಲಿ ೬೩೮ ಯಂತ್ರಗಳನ್ನು ಅಳವಡಿಸಲಾಗುವುದೆಂದು ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಅಕ್ರಮ ಆಹಾರ ದಾಸ್ತಾನು ಮಾಡುವವರ ವಿರುದ್ಧ ಕೇಂದ್ರ ಸರ್ಕಾರ ಮಿತಿ ಹೇರುವ ಆದೇಶ ಹೊರಡಿಸಿದೆ. ಹೀಗಾಗಿ ಬೆಂಗಳೂರು ಸೇರಿದಂತೆ ಮಹಾನಗರ ಪಾಲಿಕೆ ಪ್ರದೇಶಗಳಲ್ಲಿ ಆಹಾರ ಧಾನ್ಯಗಳು ಹಾಗೂ ಅಡುಗೆಗೆ ಬಳಸುವ ಎಣ್ಣೆ, ಮತ್ತಿತರ ಅವಶ್ಯ ಆಹಾರ ಪದಾರ್ಥಗಳ ಸಗಟು ದಾಸ್ತಾನನ್ನು ಎರಡು ಸಾವಿರ ಕ್ವಿಂಟಾಲ್ ಗೆ ಮಿತಿಗೊಳಿಸಲಾಗಿದೆ ಎಂದ ಅವರು ಉಳಿದೆಡೆ ಸಾವಿರ ಕ್ವಿಂಟಾಲ್ ದಾಸ್ತಾನಿಗೆ ಅವಕಾಶ ನೀಡಲಾಗಿದೆ ಎಂದು ವಿವರಿಸಿದರು.
ಸರ್ಕಾರದ ನಿಗದಿಗಿಂತ ಹೆಚ್ಚಿನ ದಾಸ್ತಾನು ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.