ರಾಗಿ ನವಣೆ ಸಾಮೆಯಂಥ ಸಿರಿಧಾನ್ಯ ಹೇರಳವಾಗಿ ಬಳಸಿ
ಬೆಂಗಳೂರು, ನ. 19 : ಅತಿ ಹೆಚ್ಚು ಪೋಷಕಾಂಶ ಹಾಗೂ ನಾರಿನಾಂಶ ಹೊಂದಿರುವಂತಹ ರಾಗಿ, ನವಣೆ, ಬರಗು, ಹಾರಕ, ಸಾಮೆ, ಸಜ್ಜೆ, ಊದಲು ಮತ್ತು ಕೊರಲೆ ಮುಂತಾದ ಸಿರಿಧಾನ್ಯಗಳನ್ನು ಹೇರಳವಾಗಿ ನಾವು ಸೇವಿಸುವ ಆಹಾರದಲ್ಲಿ ಬಳಸಿದಲ್ಲಿ ಉತ್ತಮ ಆರೋಗ್ಯವನ್ನು ಹೊಂದಬಹುದಾಗಿದೆ ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ಅವರು ಹೇಳಿದ್ದಾರೆ.
ಕೃಷಿ ಇಲಾಖೆ, ಜೈವಿಕ್ ಕೃಷಿ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಶನಿವಾರ 'ಇಂದಿರಾನಗರ ಕ್ಲಬ್ನಲ್ಲಿ' ಸಾವಯವ ಉತ್ಪನ್ನಗಳು ಹಾಗೂ ಸಿರಿಧಾನ್ಯಗಳ ಕುರಿತು ಗ್ರಾಹಕರಿಗೆ ಜಾಗೃತಿ ಮೂಡಿಸುವ 'ಸಾವಯವ ಹಾಗೂ ಸಿರಿಧಾನ್ಯ ಮೇಳ' ಕಾರ್ಯಕ್ರಮ ಅವರು ಉದ್ಫಾಟಿಸಿ ಮಾತನಾಡುತ್ತಿದ್ದರು.
ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗನುಗುಣವಾಗಿ ಸಮತೋಲಿತ ಆಹಾರ ಪದ್ಧತಿಯನ್ನು ನಾವಿಂದು ಅಳವಡಿಸಿಕೊಳ್ಳಬೇಕಾಗಿದ ಅಗತ್ಯವಿದೆ. ಸಿರಿಧಾನ್ಯ ಪದಾರ್ಥಗಳಿಂದ ಮುದ್ದೆ, ರೊಟ್ಟಿಯಂತಹ ಸಾಂಪ್ರಾದಾಯಕ ಆಹಾರ ತಯಾರಿಸಬಹುದು ಎಂದು ಕೃಷ್ಣಬೈರೇಗೌಡರು ವಿವರಿಸಿದರು. [ತುಮಕೂರಿನ ವಿಶೇಷ: ತಟ್ಟೆ ಇಡ್ಲಿ, ಚಿತ್ರಾನ್ನ, ಮುದ್ದೆ, ಚಪಾತಿ ಊಟ...]
ಸಿರಿಧಾನ್ಯಗಳು ಬಡವರ ಆಹಾರವೆಂದು ನಾವಿಂದು ಭಾವಿಸಿದ್ದೇವೆ. ಈ ಹಿಂದೆ ನಮ್ಮ ಹಿರಿಯರು ತಾವು ಬಳಸುತ್ತಿದ್ದ ಆಹಾರದಲ್ಲಿ ಶೇ.60ರಷ್ಟು ಸಿರಿಧಾನ್ಯಗಳನ್ನು ಬಳಸುತ್ತಿದ್ದರು. ಆದರೆ ಇಂದಿನ ನಮ್ಮ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳ ಬಳಕೆ ಶೇ.5ಕ್ಕೂ ಕಡಿಮೆ ಇದೆ. ಇದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಲಿವೆ ಎಂದರು.
ನಮ್ಮ ದೇಶದಲ್ಲಿ ಹೃದ್ರೋಗ, ಸಕ್ಕರೆ ಖಾಯಿಲೆಗಳಿಂದ ಬಳಲುತ್ತಿರುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಮತ್ತೊಂದೆಡೆ ಜನರಿಗೆ ಆರೋಗ್ಯದ ಬಗ್ಗೆಯೂ ಕೂಡಾ ಕಾಳಜಿ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಸ್ವಾಭಾವಿಕವಾಗಿ ಖಾಯಿಲೆ ನಿಯಂತ್ರಿಸಿ ಆರೋಗ್ಯ ಕಾಪಾಡುವ ಸಿರಿಧಾನ್ಯಗಳು ಅತ್ಯುತ್ತಮ ಆಯ್ಕೆ ಎಂದು ಸಚಿವರು ತಿಳಿಸಿದರು. [ಫುಡ್ ವೇಸ್ಟೇಜ್ ಸೆನ್ಸ್, ಮತ್ತ ದೊಡ್ಡಸ್ತಿಕಿ ನಾನ್ ಸೆನ್ಸ್!]
ಹಣ್ಣು ತರಕಾರಿಗಳಿಗೆ ನೀಡಿದಂತೆ ಸಿರಿಧಾನ್ಯಗಳಿಗೆ ಪ್ರಥಮ ಆದ್ಯತೆಯನ್ನು ನಾವು ಇಂದು ನೀಡಬೇಕಿದೆ. ಅಕ್ಕಿ, ಗೋಧಿ, ಸಕ್ಕರೆಗೆ ಸಮನಾಗಿ ಸಿರಿಧಾನ್ಯಗಳನ್ನು ಯಥೇಚ್ಚವಾಗಿ ಉಪಯೋಗಿಸಬಹುದಾಗಿದೆ ಎಂದ ಸಚಿವರು, ಸಿರಿಧಾನ್ಯಗಳು ಮಾನವನಿಗೆ ಮಾತ್ರವಲ್ಲದೆ ಪರಿಸರಕ್ಕೂ ಕೂಡಾ ಪೂರಕವಾಗಿವೆ ಎಂದರು.
ಅಕ್ಕಿ, ಗೋಧಿ, ಕಬ್ಬಿನ ಬೆಳೆಗಳಿಗೆ ಒದಗಿಸುವ ನೀರಿನ ಕಾಲು ಭಾಗದಷ್ಟು ಅಲ್ಪ ಪ್ರಮಾಣದ ನೀರಿನಲ್ಲಿ ಸಿರಿಧಾನ್ಯಗಳನ್ನು ಬೆಳೆಯಬಹುದಾಗಿದ್ದು, ಸಿರಿಧಾನ್ಯ ಬೆಳೆಗಳಿಗೆ ಅತಿ ಕಡಿಮೆ ಔಷಧಿಯನ್ನು ಸಿಂಪಡಿಸಬಹುದಾಗಿದೆ. ಕಡಿಮೆ ರಾಸಾಯನಿಕ ಗೊಬ್ಬರವನ್ನು ಬೆಳೆಗಳಿಗೆ ಒದಗಿಸುವ ಮೂಲಕ ಅತಿ ಕಡಿಮೆ ಖರ್ಚಿನಲ್ಲಿ ಸ್ವಾಭಾವಿಕ ಸಾವಯವ ಪದ್ಧತಿಯಲ್ಲಿ ಸಿರಿಧಾನ್ಯಗಳನ್ನು ಬೆಳೆಯಬಹುದಾಗಿದೆ ಎಂದು ವಿವರಿಸಿದರು.