ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸಲು ಮನವಿ
ಬೆಂಗಳೂರು, ಜು. 5 : ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣವನ್ನು ಅಂತಾರಾಷ್ಟ್ರೀಯ ದರ್ಜೆಗೇರಿಸುವಂತೆ ಮೂಲಭೂತ ಸೌಲಭ್ಯ ಅಭಿವೃದ್ಧಿ, ಹಜ್ ಹಾಗೂ ವಾರ್ತಾ ಸಚಿವ ಆರ್. ರೋಷನ್ ಬೇಗ್ ಅವರು ಕೇಂದ್ರ ರೈಲ್ವೆ ಸಚಿವ ಡಿ.ವಿ. ಸದಾನಂದ ಗೌಡ ಅವರಿಗೆ ಸಲಹೆ ಮಾಡಿದ್ದಾರೆ.
ರಾಜ್ಯದ ರಾಜಧಾನಿ ಬೆಂಗಳೂರಿನ ಜನಸಂಖ್ಯೆ 90 ಲಕ್ಷ ದಾಟಿದ್ದರೂ, ನಗರದಲ್ಲಿ ಕೇವಲ ಎರಡು ರೈಲ್ವೇ ನಿಲ್ದಾಣಗಳಿಂದಲೇ ರೈಲುಗಳ ಸಂಚಾರ ಪ್ರಾರಂಭವಾಗುತ್ತದೆ. ಬೆಂಗಳೂರು ನಗರ ರೈಲ್ವೇ ನಿಲ್ದಾಣದಿಂದ 67 ರೈಲುಗಳು ಹಾಗೂ ಯಶವಂತಪುರ ನಿಲ್ದಾಣದಿಂದ 42 ರೈಲುಗಳು ಪ್ರತಿದಿನ ವಿವಿಧ ಗಮ್ಯಸ್ಥಾನಗಳತ್ತ ಪ್ರಯಾಣ ಬೆಳೆಸುತ್ತವೆ.
ಆದರೆ, ನಗರದ ಜನಸಂಖ್ಯೆಯ ಅವಶ್ಯಕತೆಗಳಿಗೆ ರೈಲುಗಳ ಸಂಖ್ಯೆ ಕಡಿಮೆಯೇ ಆಗಿದೆ. ಹೆಚ್ಚುವರಿ ರೈಲುಗಳನ್ನು ಪ್ರಾರಂಭಿಸಲು ರೈಲ್ವೆ ಸಂಚಾರ ದಟ್ಟಣೆಯ ಕಡಿತಗೊಳಿಸಲು ಬೆಂಗಳೂರಿಗೆ ಪರ್ಯಾಯ ರೈಲ್ವೇ ನಿಲ್ದಾಣದ ಅವಶ್ಯಕತೆ ಇದೆ. ಬೆಂಗಳೂರಿನ ಬೈಯ್ಯಪ್ಪನಹಳ್ಳಿ ರೈಲ್ವೇ ನಿಲ್ದಾಣದಲ್ಲಿ 80 ಎಕರೆ ರೈಲ್ವೇ ಜಮೀನು ಲಭ್ಯವಿರುವ ಹಿನ್ನೆಲೆಯಲ್ಲಿ ಈ ರೈಲ್ವೇ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ವಿಪುಲ ಅವಕಾಶಗಳಿವೆ.
ಈ ರೈಲ್ವೇ ನಿಲ್ದಾಣಕ್ಕೆ ಹೊಂದಿಕೊಂಡಂತೆ ಮೆಟ್ರೋ ರೈಲು ನಿಲ್ದಾಣವೂ ಇರುವುದರಿಂದ ಬೈಯ್ಯಪ್ಪನಹಳ್ಳಿಯಿಂದ ಪೀಣ್ಯಾವರೆಗೆ, ಮುಂಬರುವ ದಿನಗಳಲ್ಲಿ ಕನಕಪುರ ರಸ್ತೆಯಿಂದ ಕೆಂಗೇರಿಯವರೆಗೆ ಮೆಟ್ರೋ ಸಂಪರ್ಕ ಕಲ್ಪಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಈ ಕುರಿತ ಕಾಮಗಾರಿಗಳನ್ನು ಪ್ರಸ್ತುತ ರೈಲ್ವೇ ಬಜೆಟ್ನಲ್ಲಿಯೇ ಅಳವಸುವಂತೆ ರೋಷನ್ ಬೇಗ್ ಅವರು ಕೆಂದ್ರ ರೈಲ್ವೇ ಸಚಿವರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.