ಪಾರದರ್ಶಕ ಆಡಳಿತ ನೀಡುವುದೇ ಕೆಪಿಜೆಪಿ ಸಿದ್ಧಾಂತ
ಬೆಂಗಳೂರು, ಅಕ್ಟೋಬರ್ 31: ಅಂತೂ ಉಪೇಂದ್ರರ ಹೊಸ ಪಕ್ಷ 'ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ' ಘೋಷಣೆ ಮಾಡಿದ್ದಾರೆ. ಟಿವಿ 9 ಮಾಹಿತಿ ಪ್ರಕಾರ ಅವರ ಪಕ್ಷದ ಲಾಂಛನ ಆಟೋ.
ಒಂದು ದಿನ ಮುಂಚಿತವಾಗಿ ಕನ್ನಡ ರಾಜ್ಯೋತ್ಸವ ಹೇಳುವ ಮೂಲಕ ನಟ-ನಿರ್ದೇಶಕ ಉಪೇಂದ್ರ ಎಲ್ಲರಿಗೂ ಸ್ವಾಗತ ಕೋರಿದರು. ತಮ್ಮ ಹೊಸ ರಾಜಕೀಯ ಪಕ್ಷದ ಹೆಸರೂ ಸೇರಿದಂತೆ ಇತರ ಮಾಹಿತಿಗಳನ್ನು ನೀಡಲು ಮಂಗಳವಾರ ಗಾಂಧಿ ಭವನದಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರು ಉಪೇಂದ್ರ.
ಉಪೇಂದ್ರರ ಪತ್ನಿ, ತಾಯಿ ಸೇರಿದಂತೆ ಇತರ ಕುಟುಂಬ ಸದಸ್ಯರೂ ಈ ಸಂದರ್ಭದಲ್ಲಿ ಖಾಕಿ ಷರ್ಟ್ ಧರಿಸಿದ್ದರು. ಉಪೇಂದ್ರರನ್ನು ಬೆಂಬಲಿಸಲು ಬಂದಿದ್ದ ಹಲವರು, ಉಪೇಂದ್ರ ಕೂಡ ಖಾಕಿ ಅಂಗಿ ತೊಟ್ಟಿದ್ದರು. ಶಮಿತಾ ಮಲ್ನಾಡ್ ಅವರು ಗಣಪತಿ ಪ್ರಾರ್ಥನೆ ಹಾಗೂ ಕುವೆಂಪು ಅವರ ತನುವು ನಿನ್ನದು ಹಾಡನ್ನು ಹಾಡಿದರು.
ವೇದಿಕೆಯ ಮೇಲಿದ್ದ ಪತ್ರಕರ್ತರು ದೀಪ ಹಚ್ಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಉಪೇಂದ್ರ ಭಾಷಣದ ಮುಖ್ಯಾಂಶಗಳು
* "ನನ್ನ ಸಿನಿಮಾ ಬುದ್ಧಿವಂತರಿಗಾದರೆ, ಪಕ್ಷ ಪ್ರಜ್ಞಾವಂತರಿಗೆ"
* ಎಲ್ಲರಿಗೂ ಉಚಿತ ಶಿಕ್ಷಣ ಸಿಗುವಂತಾಗಬೇಕು
* ಎಲ್ಲ ರಂಗದಲ್ಲೂ ಸಂಪೂರ್ಣ ಬದಲಾವಣೆ ತರಬೇಕು
* ಅರವತ್ತು- ಎಪ್ಪತ್ತು ಅಭ್ಯರ್ಥಿಗಳು ಈಗಾಗಲೇ ಸಿದ್ಧವಾಗಿದ್ದಾರೆ
* ಆದರೆ, ನಾನು ಚುನಾವಣೆಗೆ ನಿಲ್ಲುವುದಾ ಎಂದು ಸಂಕೋಚ ಪಡುತ್ತಿದ್ದಾರೆ
* ನಿಮ್ಮ ಐಡಿಯಾಗಳನ್ನು ನಮಗೆ ಹೇಳಿ, ನಿಮ್ಮ ಪರವಾಗಿ ನಾನು ಪ್ರಚಾರ ಮಾಡ್ತೀನಿ
* ನಮಗೆ ಸ್ಮಾರ್ಟ್ ಸಿಟಿಯಲ್ಲ, ಸ್ಮಾರ್ಟ್ ವಿಲೇಜ್ ಬೇಕು
* ಜನರಿಗೆ ಪಾರದರ್ಶಕ ಆಡಳಿತ ನೀಡುವುದೇ ಕೆಪಿಜೆಪಿ ಸಿದ್ಧಾಂತ
* ನವೆಂಬರ್ ಹತ್ತನೇ ತಾರೀಕು ಕೆಪಿಜೆಪಿ ಮೊಬೈಲ್ ಅಪ್ಲಿಕೇಷನ್, ವೆಬ್ ಸೈಟ್ ಆರಂಭ
* ನಮ್ಮ ಅಭ್ಯರ್ಥಿಯಿಂದ ಅಥವಾ ನನ್ನಿಂದಲೇ ತಪ್ಪಾದರೂ ಜನರೇ ವಿಚಾರಿಸಿಕೊಳ್ಳಿ
* ಸಂವಿಧಾನದ ಪ್ರಕಾರ ಪಕ್ಷದ ಸದಸ್ಯತ್ವ ಅರ್ಜಿಯಲ್ಲಿ ಜಾತಿ ಕಾಲಂ ಇದೆ. ನಮ್ಮ ಪಕ್ಷದಲ್ಲಿ ಜಾತಿಯಿಲ್ಲ