ಉಡುಪಿ ರಾಮಚಂದ್ರರಾಯರಿಗೆ ಸದಾ ಅದೇ ಧ್ಯಾನ - ವಿಜ್ಞಾನ
ಬೆಂಗಳೂರು, ಜುಲೈ 24 : ಕ್ಷಿತಿಜದಲ್ಲಿ ಪ್ರೊ. ಉಡುಪಿ ರಾಮಚಂದ್ರ ರಾವ್ ಎಂಬ ಭಾರತದ ಅನರ್ಘ್ಯ ನಕ್ಷತ್ರವೊಂದು ದಶಕಗಳ ಕಾಲ ಮಿನುಗಿ ಮರೆಯಾಗಿದೆ. ವಿಜ್ಞಾನದ ಬೆಳವಣಿಗೆಗಾಗಿ ಅವರು ನೀಡಿದ ಸೇವೆಯನ್ನು ಯಾವ ತಕ್ಕಡಿಯಲ್ಲಿ ಇಟ್ಟು ತೂಗಲೂ ಸಾಧ್ಯವಿಲ್ಲ, ಯಾವ ಪ್ರಶಸ್ತಿಗಳಿಗೂ ಅದು ಸಮಾನವಲ್ಲ.
ಬಾಹ್ಯಾಕಾಶ ವಿಜ್ಞಾನಿ, ಇಸ್ರೋ ಮಾಜಿ ಅಧ್ಯಕ್ಷ ಯುಆರ್ ರಾವ್ ನಿಧನ
ಉಡುಪಿ ಜಿಲ್ಲೆಯ ಅದಮಾರು ಗ್ರಾಮದಲ್ಲಿ 1932ರ ಮಾರ್ಚ್ 10ರಂದು ಹುಟ್ಟಿ, ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದು, ಉಡುಪಿಯಲ್ಲಿ ಪ್ರೌಢ ಶಿಕ್ಷಣ ಮುಗಿಸಿ, ಮದ್ರಾಸ್ ವಿಶ್ವವಿದ್ಯಾಲಯದಿಂದ ಬಿಎಸ್ಸಿ, ಬನಾರಸ್ ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ, ಖ್ಯಾತ ವಿಜ್ಞಾನಿ ವಿಕ್ರಂ ಸಾರಾಭಾಯ್ ಮಾರ್ಗದರ್ಶನದಲ್ಲಿ ಅಹ್ಮದಾಬಾದ್ ನಲ್ಲಿ ಪಿಎಚ್ಡಿ ಪದವಿ ಗಳಿಸಿದ ಯುಆರ್ ರಾವ್ ಅವರ ಜೀವನವೇ ಇಂದಿನ ವಿಜ್ಞಾನಿಗಳಿಗೆ ಸ್ಫೂರ್ತಿದಾಯಕ.
ಭಾರತದ ಹೆಮ್ಮೆಯ ಬಾಹ್ಯಾಕಾಶ ವಿಜ್ಞಾನಿ ಯು.ಆರ್.ರಾವ್ ವ್ಯಕ್ತಿ ಚಿತ್ರ
ಭಾರತದ ಪ್ರಪ್ರಥಮ ಕೃತಕ ಉಪಗ್ರಹ ಆರ್ಯಭಟದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ಹಗಲು ರಾತ್ರಿ ವಿಜ್ಞಾನವನ್ನೇ ಉಸಿರಾಡಿಸುತ್ತಿದ್ದರು, ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮುಖ್ಯಸ್ಥರಾಗಿದ್ದಾಗ ಮಾತ್ರವಲ್ಲ, ನಿವೃತ್ತರಾದ ನಂತರವೂ ಅವರು ಹಗಲಿರುಳು ವಿಜ್ಞಾನದ ಕನಸುಗಳನ್ನೇ ಕಾಣುತ್ತಿದ್ದರು. 2017ರ ಜುಲೈ 24ರಂದು ರಾವ್ ಅವರು ನಕ್ಷತ್ರವಾಗಿ ನಭೋಮಂಡಲ ಸೇರಿದ್ದಾರೆ.
ಯು.ಆರ್.ರಾವ್ ನಿಧನ: ಟ್ವಿಟ್ಟರ್ ನಲ್ಲಿ ಗಣ್ಯರ ಸಂತಾಪ
ಅತ್ಯಂತ ಸರಳಾತಿಸರಳ ಜೀವನ ನಡೆಸುತ್ತಿದ್ದ, ವಿನಮ್ರತೆಯ ಸಾಕಾರಮೂರ್ತಿಯಾಗಿದ್ದ ಉಡುಪಿ ರಾಮಚಂದ್ರ ರಾವ್ ಅವರು, ಬಾಹ್ಯ ಜಗತ್ತನ್ನು ಮರೆತು ಎಷ್ಟರಮಟ್ಟಿಗೆ ವಿಜ್ಞಾನವನ್ನೇ ಆಹಾರವನ್ನಾಗಿ ಸೇವಿಸುತ್ತಿದ್ದರು ಎಂಬುದಕ್ಕೆ ಇಲ್ಲಿ ಕೆಲವೊಂದು ನಿದರ್ಶನಗಳಿವೆ. ಅವರಲ್ಲಿ ವಿಜ್ಞಾನದ ಬಗ್ಗೆ ಎಷ್ಟು ಕಾಳಜಿ ಇತ್ತು ಮತ್ತು ಪ್ರತಿಯೊಂದನ್ನು ವೈಜ್ಞಾನಿಕವಾಗಿಯೇ ಹೇಗೆ ನೋಡುತ್ತಿದ್ದರೆಂಬುದಕ್ಕೆ ಈ ನಿದರ್ಶನಗಳೇ ಸಾಕ್ಷಿ.
ಫ್ಲೈಓವರ್ ನಿರ್ಮಣವಾದರೆ ನಕ್ಷತ್ರ ನೋಡೋದು ಹ್ಯಾಗೆ?
ಸಿದ್ದರಾಮಯ್ಯ ಸರಕಾರ ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ ಉಕ್ಕಿನ ಸೇತುವೆ ನಿರ್ಮಿಸಲು ಶತಾಯಗತಾಯ ಯತ್ನಿಸುತ್ತಿದ್ದಾಗ, ಪರಿಸರವಾದಿಗಳಿಂದ ಭಾರೀ ಪ್ರತಿಭಟನೆಗಳಾಗುತ್ತಿದ್ದವು. ಇದರಿಂದ ಹಲವಾರು ಅಪೂರ್ವ ಮರಗಳು ನಾಶವಾಗುತ್ತವೆ, ಪರಿಸರ ಎಕ್ಕುಟ್ಟಿ ಹೋಗುತ್ತದೆ ಎಂದು ಹೋರಾಟ ನಡೆಯುತ್ತಿದ್ದಾಗ ಯುಆರ್ ರಾವ್ ಅವರು ಯಾವ ರೀತಿ ಚಿಂತನೆ ಮಾಡುತ್ತಿದ್ದರು ಗೊತ್ತಾ? ಬಸವೇಶ್ವರ ವೃತ್ತದ ಬಳಿ ಮೇಲುಸೇತುವೆ ನಿರ್ಮಾಣವಾದರೆ, ಪಕ್ಕದಲ್ಲೇ ಇರುವ ಜವಾಹರಲಾಲ್ ಪ್ಲಾನಿಟೇರಿಯಂ ಮೂಲಕ ನಕ್ಷತ್ರಗಳು ಮತ್ತು ಗ್ರಹಗಳ ಚಲನವಲನಗಳನ್ನು ಜನರಿಗೆ ವೀಕ್ಷಿಸಲು ಸಾಧ್ಯವಾಗುವುದಿಲ್ಲ ಎಂದು ರಾವ್ ಅವರು ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದರು.
ಮರಣೋತ್ತರವಾಗಿ ಪ್ರಶಸ್ತಿ ಬರತ್ತೆ ಅಂದುಕೊಂಡಿದ್ದೆ
ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ 2017ರಲ್ಲಿ 85 ವರ್ಷದ ಪ್ರೊಫೆಸರ್ ಯುಆರ್ ರಾವ್ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿಯನ್ನು ಕೇಂದ್ರ ಸರಕಾರ ಪ್ರದಾನ ಮಾಡಿತು. ವಾಷ್ಟಿಂಗ್ಟನ್ ನಲ್ಲಿ 'ಸೆಟಲೈಟ್ ಹಾಲ್ ಆಫ್ ಫೇಮ್' ಸೇರಿದ ಭಾರತದ ಪ್ರಥಮ ವಿಜ್ಞಾನಿಯಾಗಿರುವ ಯುಆರ್ ರಾವ್ ಅವರು ಪದ್ಮ ವಿಭೂಷಣ ಪ್ರಶಸ್ತಿ ಸ್ವೀಕರಿದ ಸಂದರ್ಭದಲ್ಲಿ ಏನು ಹೇಳಿದ್ದರೆಂದರೆ, 'ನನಗೆ ಈ ಪ್ರಶಸ್ತಿ ಮರಣೋತ್ತರವಾಗಿ ಬರುತ್ತದೆಂದು ಅಂದುಕೊಂಡಿದ್ದೆ'! ಈ ಮಾತಿನಲ್ಲಿ ಯಾವುದೇ ವ್ಯಂಗ್ಯವೂ ಇರಲಿಲ್ಲ.
ಸತ್ತಿದ್ದು ಯಾರು? ಎಂದು ಕೇಳಿದ್ದ ರಾವ್
ಮತ್ತೊಂದು ತಮಾಷೆಯ ಸಂಗತಿಯೇನೆಂದರೆ, 1991ರಲ್ಲಿ ಇಸ್ರೋದ ಮುಖ್ಯರಾಗಿದ್ದಾಗ ಶ್ರೀಪೆರಂಬುದೂರ್ ನಲ್ಲಿ ಅಂದಿನ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರ ಹತ್ಯೆಯಾಗಿತ್ತು. ಆಗ ವಿವಿಧ ಮಾಧ್ಯಮಗಳು ಸಂತಾಪ ಸೂಚಕ ಹೇಳಿಕೆಗಳನ್ನು ಗಣ್ಯರಿಂದ ಪಡೆದುಕೊಳ್ಳುತ್ತಿದ್ದವು. ಆಗ ಕೆಲ ಮಾಧ್ಯಮಗಳು ಪ್ರೊ. ಯುಆರ್ ರಾವ್ ಅವರ ಬಳಿಯೂ ಬಂದಿದ್ದವು. ಹೇಳಿಕೆಯನ್ನು ಕೊಡಲು ಸಿದ್ಧರಾದ ಯುಆರ್ ರಾವ್ ಅವರು, "ಸತ್ತಿದ್ದು ಯಾರು?" ಎಂದು ಕೇಳಿ ಮಾಧ್ಯಮದವರನ್ನೇ ಕಕ್ಕಾಬಿಕ್ಕಿಯಾಗಿಸಿದ್ದರು. ವಿಜ್ಞಾನದಲ್ಲಿ ಅವರು ಎಷ್ಟು ಮುಳುಗಿದ್ದರೆಂದರೆ ಇದಕ್ಕಿಂತ ನಿದರ್ಶನ ಬೇಕೆ?
ಮೇಕ್ ಇನ್ ಇಂಡಿಯಾ ತರಾಟೆಗೆ ತೆಗೆದುಕೊಂಡಿದ್ದ ರಾವ್
ಭಾರತದಲ್ಲಿನ ಎಷ್ಟೋ ಸಂಸ್ಥೆಗಳಿಗೆ ಐಎಎಸ್ ಅಧಿಕಾರಿಗಳು ಮುಖ್ಯಸ್ಥರಾಗಿರುತ್ತಾರೆ. ಆದರೆ ವಿಜ್ಞಾನಿಗಳನ್ನು ಏಕೆ ಮುಖ್ಯಸ್ಥರನ್ನಾಗಿ ಮಾಡುವುದಿಲ್ಲ? ಅವರಿಂದ ಇನ್ನಷ್ಟು ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ಯುಆರ್ ರಾವ್ ಅವರು ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. ವಿದೇಶಿ ವಿಮಾನಗಳನ್ನು ಆಮದು ಮಾಡಿಕೊಂಡರೆ ಹಣವನ್ನು ದುಂದು ಮಾಡಿದಂತಾಗುತ್ತದೆ ಎಂದು ಮೋದಿಯವರ 'ಮೇಕ್ ಇನ್ ಇಂಡಿಯಾ' ಅಭಿಯಾನವನ್ನು ತರಾಟೆಗೆ ತೆಗೆದುಕೊಂಡಿದ್ದರು. ಪಿಎಚ್ಡಿಗಾಗಿ ತಾವು ಮಾರ್ಗದರ್ಶ ಪಡೆದಿದ್ದ ವಿಕ್ರಂ ಸಾರಾಭಾಯ್ ಅವರಿಗೆ ಮಹೋನ್ನತ ಪ್ರಶಸ್ತಿಯಾದ 'ಭಾರತ ರತ್ನ' ನೀಡಬೇಕೆಂದು ಅವರು ಆಗ್ರಹಿಸಿದ್ದರು.