ಪರಿಸರ ಉಳಿಸುವ ನಂದಿ ಹಿಲ್ಲಥಾನ್ಗೆ ದಿನಗಣನೆ
ಬೆಂಗಳೂರು, ಜೂನ್ 08: ಯುನೈಟೆಡ್ ವೇ ಬೆಂಗಳೂರು ಆಶ್ರಯದಲ್ಲಿ "ನಂದಿ ಹಿಲ್ಲಥಾನ್ " ಜೂನ್ 12 ಭಾನುವಾರ ನಡೆಯಲಿದೆ. ಪರಿಸರ ಸಮತೋಲನ, ಜಾಗೃತಿ, ಕಸ ವಿಲೇವಾರಿ, ಸುಂದರ ರಸ್ತೆಗಳು ಎಂಬ ಪರಿಕಲ್ಪನೆ ಆಧಾರದಲ್ಲಿ ಮ್ಯಾರಥಾನ್ ನಡೆಯಲಿದೆ.
ಯುನೈಟೆಡ್ ವೇ ಆಫ್ ಬೆಂಗಳೂರು ಸಂಸ್ಥೆಯ ಅಧ್ಯಕ್ಷ ಪ್ರಶಾಂತ್ ಸುದ್ದಿಗೋಷ್ಠಿಯಲ್ಲಿ ಹಿಲ್ಲಥಾನ್ ಬಗ್ಗೆ ಮತ್ತಷ್ಟು ವಿವರ ನೀಡಿದರು.[ನಂದಿ ಹಿಲ್ಲಥಾನ್ : ಯಾಕಾಗಿ? ಏನಿದರ ಮಹತ್ವ?]
"ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವುದು ಮತ್ತು ಬೆಟ್ಟದ ಪುನಶ್ಚೇತನಕ್ಕಾಗಿ ಜನರನ್ನು ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಕಾರ್ಯಕ್ರಮದಿಂದ ಸಂಗ್ರಹವಾದ ಪ್ರತಿಯೊಂದು ರೂಪಾಯಿಯನ್ನು ಬೆಟ್ಟದ ಪುನಶ್ಚೇತನಕ್ಕಾಗಿ ಬಳಸಲಾಗುವುದು ಎಂದು ತಿಳಿಸಿದರು.[ನಂದಿ ಬೆಟ್ಟದಡಿ 6 ಕಿಮೀ ಓಡಿ, ತಾಣ ಉಳಿವಿಗೆ ನೆರವು ನೀಡಿ]
ಓಟದಲ್ಲಿ ಸುಮಾರು 1000 ಜನರು ಭಾಗವಹಿಸಲಿದ್ದು, ನಂದಿ ಬೆಟ್ಟದ ತಪ್ಪಲನ್ನು ಉಳಿಸಲು ಇದೊಂದು ದಿಟ್ಟ ಹೆಜ್ಜೆಯಾಗಲಿದೆ. ಈ ಕಾರ್ಯಕ್ರಮಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತವು ಸಂಪೂರ್ಣ ಸಹಕಾರ ಮತ್ತು ಬೆಂಬಲ ನೀಡಿದೆ ಎಂದು ತಿಳಿಸಿದರು. ಪ್ರಪ್ರಥಮವಾಗಿ ಸುಮಾರು 70 ಕ್ಕೂ ಹೆಚ್ಚು ಮಂಗಳ ಮುಖಿಯರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ವಿಷೇಶವಾಗಿದೆ ಎಂದು ತಿಳಿಸಿದರು.
ಸದರಿ ಕಾರ್ಯಕ್ರಮಕ್ಕೆ ಸ್ಥಳೀಯ ಯುವಕ ಹಾಗೂ ಯುವತಿಯರಿಗೆ ಅವಕಾಶ ಕಲ್ಪಿಸಲಾಗಿದೆ. ಓಟಗಾರರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಪರಿಸರ ಸ್ನೇಹಿಗಳಾದ ಮಣ್ಣಿನ ಮಡಿಕೆ ಮತ್ತು ಮಣ್ಣಿನ ಲೋಟಗಳಲ್ಲಿ ಮಾಡಲಾಗಿದೆ.[ನಂದಿ ಬೆಟ್ಟ ಉಳಿಸಲು ಮ್ಯಾರಥಾನ್ ನಲ್ಲಿ ಭಾಗವಹಿಸಿ]
ಓಟದಲ್ಲಿ ಮೂರು ವಿಭಾಗವಿದ್ದು ಮ್ಯಾರಥಾನ್ ಓಟ 21 ಕಿ.ಮೀ. ಪ್ರಥಮ ಬಹುಮಾನ 30,000 ರು. ನಡಿಗೆ 6 ಕಿ.ಮೀ. ಬಹುಮಾನ 15,00೦ರು. ಹಾಗೂ ಸ್ಥಳೀಯ ಯುವಕ ಯುವತಿಯರಿಗೆ ನಂದಿ ಓಟ 6 ಕಿ.ಮೀ. ಓಟಕ್ಕೆ ಅವಕಾಶ ಇರುತ್ತದೆ. ಅಲ್ಲದೆ ಮಕ್ಕಳಿಗಾಗಿ ಪಾರಂಪರಿಕ ಆಟಗಳಾದ ಬುಗುರಿ, ಗಿಲ್ಲಿದಾಂಡು, ಗೋಲಿ, ಲಗೋರಿ ಚೌಕಬಾರ ಇತ್ಯಾದಿಗಳನ್ನು ಆಯೋಜಿಸಲಾಗಿದೆ.