ನಗರದ ಅಭಿವೃದ್ಧಿಗೆ ಯುನೈಟೆಡ್ ಬೆಂಗಳೂರಿನಿಂದ 'ಬೆಂಗಳೂರು ಡಿಮ್ಯಾಂಡ್ಸ್' ಚಳವಳಿ
ಬೆಂಗಳೂರು, ಜೂನ್ 21: ಸ್ವಚ್ಛ ಸುಂದರ ಬೆಂಗಳೂರು ಅಭಿವೃದ್ಧಿಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ 'ಯುನೈಟೆಡ್ ಬೆಂಗಳೂರು' ಒಕ್ಕೂಟ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದೆ.
ಜನಸಂಖ್ಯೆಯ ಒತ್ತಡದ ನಡುವೆ ಬೆಂಗಳೂರು ಅಡ್ಡಾದಿಡ್ಡಿಯಾಗಿ ಬೆಳೆಯುತ್ತಿದೆ. ಯೋಜನಾರಹಿತ ಅಭಿವೃದ್ಧಿ, ನೀತಿ ನಿರೂಪಣೆಯಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಯ ಕೊರತೆ ಮುಂತಾದವು ನಗರಕ್ಕೆ ಹೊಡೆತ ನೀಡಿವೆ.
ಅವುಗಳಿಗಿಂತ ಮಿಗಿಲಾಗಿ ಸಾಯುತ್ತಿರುವ ಕೆರೆಗಳು, ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ ಒತ್ತುವರಿ, ಕಸದ ರಾಶಿ, ಮರೆಯಾಗುತ್ತಿರುವ ಹಸಿರು, ಅಸುರಕ್ಷಿತತೆ ಮುಂತಾದವು ನಮ್ಮ ನಗರವನ್ನು ಹಾಳು ಮಾಡುತ್ತಿವೆ ಎಂದು ಅದು ಕಳವಳ ವ್ಯಕ್ತಪಡಿಸಿದೆ. 'ಬೆಂಗಳೂರು ಡಿಮ್ಯಾಂಡ್ಸ್' ಎಂಬ ಹ್ಯಾಷ್ಟ್ಯಾಗ್ ಬಳಸಿ ಅದು ಪ್ರಚಾರಕ್ಕೆ ಮುಂದಾಗಿದೆ.
30 ಮಹಿಳೆಯರನ್ನು ಸ್ವಾವಲಂಬಿಯಾಗಿಸಿದ ಯುನೈಟೆಡ್ ಬೆಂಗಳೂರು
ಈ ಸಂಬಂಧ ತನ್ನ ಎರಡನೆಯ ಚಳವಳಿ ಆರಂಭಿಸಿರುವ ಯುನೈಟೆಡ್ ಬೆಂಗಳೂರು, ನಗರದ ಸುರಕ್ಷತೆ, ಅಭಿವೃದ್ಧಿ ಮತ್ತು ಸ್ವಚ್ಛತೆಗೆ 11 ಅಂಶಗಳನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮುಂದಿಟ್ಟಿದೆ.
ವಸತಿ ಪ್ರದೇಶಗಳ ವಾಣಿಜ್ಯೀಕರಣಕ್ಕೆ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ. ನೀರು, ವಿದ್ಯುತ್ ಸಾರ್ವಜನಿಕ ಸಾರಿಗೆ ವ್ಯವಸ್ಥೆ ತುಂಬಾ ಕಳಪೆ ಮಟ್ಟದಲ್ಲಿದೆ. ಮೂಲಸೌಕರ್ಯಗಳ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದೆ.
ವಲಯ ಮತ್ತು ನಗರ ಮಟ್ಟದಲ್ಲಿ ವಾರ್ಡ್ ಸಮಿತಿಗಳನ್ನು ರಚಿಸಿ ಅವುಗಳ ಮೂಲಕ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕು. ಘನ ತ್ಯಾಜ್ಯಗಳ ನಿರ್ವಹಣೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ನಗರ ಅಭಿವೃದ್ಧಿ ಸಂಸ್ಥೆಗಳನ್ನು ರದ್ದುಗೊಳಿಸಬೇಕು. ಜತೆಗೆ, ಬಿಡಿಎ ರಚಿಸಿರುವ ದಿ ರಿವೈಸ್ಡ್ ಮಾಸ್ಟರ್ ಪ್ಲ್ಯಾನ್ 2031 ಭ್ರಷ್ಟ ಬಿಲ್ಡರ್ಗಳಿಗೆ ಅನುಕೂಲ ಮಾಡುವಂತಿದೆ. ಅದನ್ನು ರದ್ದುಗೊಳಿಸಬೇಕು.
ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ಮಂಡಳಿ ತಮ್ಮ ಅಸಮರ್ಥ ಸಂಸ್ಕರಣೆ ಮತ್ತು ಅವ್ಯವಸ್ಥಿತ ಕಸ ವಿಲೇವಾರಿ ಕಾರಣ ಕೆಟ್ಟ ವಾತಾವರಣ ನಿರ್ಮಿಸುತ್ತಿವೆ. ಈ ಘಟಕಗಳನ್ನು ಮುಚ್ಚಬೇಕು.
ಮತದಾರರ ಪಟ್ಟಿ ಸಮಸ್ಯೆ ಸರಿಪಡಿಸಲು ಯುನೈಟೆಡ್ ಬೆಂಗಳೂರು ಮನವಿ
ಬೆಂಗಳೂರಿನ ಕೆರೆಗಳಿಗೆ ಪುನರುಜ್ಜೀವನ ನೀಡಬೇಕು ಮತ್ತು ಕುಡಿಯುವ ನೀರಿನ ಸೌಲಭ್ಯವನ್ನು ಸುಸಜ್ಜಿತಗೊಳಿಸಬೇಕು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪ್ರದೇಶವನ್ನು ಸೂಕ್ಷ್ಮ ಜೈವಿಕ ವಲಯ ಎಂದು ಘೋಷಿಸಲಾಗಿದೆ. ಆದರೆ ಅವುಗಳ ಸುತ್ತಮುತ್ತ ಕಲ್ಲು ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿದ್ದು, ಅವುಗಳಿಗೆ ಕಡಿವಾಣ ಹಾಕಬೇಕು.
ರಿಯಲ್ ಎಸ್ಟೇಟ್ ಮಾಫಿಯಾವನ್ನು ನಿಯಂತ್ರಿಸಲು ಶಾಶ್ವತ ನಿಯಂತ್ರಣ ಪ್ರಾಧಿಕಾರವನ್ನು ರಚಿಸಬೇಕು. ರೇರಾದಲ್ಲಿ ಕೆಲವು ಬದಲಾವಣೆಗಳನ್ನು ತಂದು ನಿಯಮಗಳನ್ನು ಕಠಿಣಗೊಳಿಸಬೇಕು.
ನಗರದಲ್ಲಿ ಮಹಿಳೆಯರ ಮೇಲೆ ಅಪರಾಧ ಎಸಗುವ ಪ್ರಕರಣಗಳು ಹೆಚ್ಚುತ್ತಿದ್ದು, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಜನಸಂಖ್ಯೆ ಮತ್ತು ವಾಹನ ಸಂಖ್ಯೆ ಹೆಚ್ಚಳದಿಂದ ಓಡಾಡ ಕಷ್ಟಕರವಾಗಿದೆ. ಹೀಗಾಗಿ ಕೇಂದ್ರದ ಸಹಯೋಗದೊಂದಿಗೆ ಉಪನಗರ ರೈಲ್ವೆ ಜಾಲ ನಿರ್ಮಿಸಬೇಕು. ಬಿಎಂಟಿಸಿ ಕಾರ್ಯವೈಖರಿಯನ್ನು ಸುಧಾರಿಸಬೇಕು, ಮೆಟ್ರೊ ನಿರ್ಮಾಣ ಕಾಮಗಾರಿಯನ್ನು ತ್ವರಿತಗೊಳಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅಲ್ಲದೆ, ಬೆಂಗಳೂರಿನ ಸಮಗ್ರ ಅಭಿವೃದ್ಧಿ, ಸಮಸ್ಯೆಗಳ ಪರಿಹಾರಕ್ಕೆ ಅನುಕೂಲಕರವಾದ ಯೋಜನೆ ರೂಪಿಸಲು ಚರ್ಚೆ ನಡೆಸಲು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲು ಸಂಸದ ರಾಜೀವ್ ಚಂದ್ರಶೇಖರ್ ಅವರನ್ನು ಒಳಗೊಂಡ ಒಕ್ಕೂಟ ಸಮಯ ಕೋರಿದೆ.