ಎಸಿಬಿ ದಾಳಿ: ವಾಣಿಜ್ಯ ತೆರಿಗೆ ಅಧಿಕಾರಿಗಳ ಬಂಧನ
ಬೆಂಗಳೂರು, ನವೆಂಬರ್, 8: ಭ್ರಷ್ಟಾಚಾರ ನಿಗ್ರಹ ದಳದ (ACB) ಅದಿಕಾರಿಗಳು ನಡೆಸಿದ ದಾಳಿಯಲ್ಲಿ ಇಬ್ಬರು ವಾಣಿಜ್ಯ ತೆರಿಗೆ ಅಧಿಕಾರಿಗಳು ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದಿದ್ದು, ಅಧಿಕಾರಿಗಳನ್ನು ಬಂಧಿಸಿಲಾಗಿದೆ.
ಕೋರಮಂಗಲ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಮತ್ತು ವ್ಯಾಟ್ ಅಧಿಕಾರಿ ನಯೀಮುಲ್ಲಾ ಖಾನ್ ಹಾಗೂ ಜಂಟಿ ಆಯುಕ್ತ ವಾಣಿಜ್ಯ ತೆರಿಗೆ ಸತೀಶ್ ಕುಮಾರ್ ಎಲ್. ರವರುಗಳು ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಲಂಚ ಸ್ವೀಕಾರ ಸಮಯದಲ್ಲಿ ಎ.ಸಿ.ಬಿ. ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಬೆಂಗಳೂರು ನಗರದ ಖಾಸಗಿ ಕಂಪನಿ ವತಿಯಿಂದ ವ್ಯಾಟ್ ತೆರಿಗೆಯನ್ನು ಪಾವತಿಸಲಾಗಿತ್ತು. ನಂತರ ವಹಿವಾಟಿನ ಲೆಕ್ಕಾಚಾರದ ಪ್ರಕಾರ ಈ ಕಂಪನಿಯಿಂದ ಸುಮಾರು ರೂ.6 ಲಕ್ಷ ಮೊತ್ತದ ಹೆಚ್ಚುವರಿ ವ್ಯಾಟ್ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಿರುವುದು ತಿಳಿದು ಬಂದಿತ್ತು.
ನಿಯಮಾನುಸಾರ ವಾಣಿಜ್ಯ ತೆರಿಗೆ ಇಲಾಖೆಯಿಂದ ಇಷ್ಟೊಂದು ಮೊತ್ತದ ತೆರೆಗೆ ಕಟ್ಟಿಸಿಕೊಳ್ಳುವಂತಿರಲಿಲ್ಲ. ಹೆಚ್ಚುವರಿ ಹಣವನ್ನು ಕಂಪನಿಗೆ ಮರುಪಾವತಿ ಮಾಡಬೇಕಾಗಿತ್ತು.
ಕಂಪನಿಯಿಂದ ಪಾವತಿಸಿರುವ ಹೆಚ್ಚುವರಿ ವ್ಯಾಟ್ ತೆರಿಗೆ ಮೊತ್ತವನ್ನು ಕಂಪನಿಗೆ ಮರುಪಾವತಿ ಮಾಡುವಂತೆ ಕಂಪನಿಯ ಪ್ರತಿನಿಧಿಗಳು ಸಂಬಂಧಪಟ್ಟ ವಾಣಿಜ್ಯ ತೆರಿಗೆ ಅಧಿಕಾರಿಗಳ ಕಛೇರಿಗೆ ಮನವಿಯನ್ನು ಸಲ್ಲಿಸಿದ್ದರು.
ಆದರೆ ಈ ಭ್ರಷ್ಟ ಅಧಿಕಾರಿಗಳು ಹಣ ಮರುಪಾವತಿಸಲು 60 ಸಾವಿರ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರುದಾರರು ನೀಡಿದ ದೂರಿನ ಅನ್ವಯ ಬೆಂಗಳೂರು ನಗರ ಎಸಿಬಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಪ್ರಕರಣವನ್ನು ದಾಖಲಿಸಿ ಲಂಚ ಸ್ವೀಕರಿಸುವ ಸಮಯದಲ್ಲಿ ಅಧಿಕಾರಿಗಳನ್ನು ಬಂಧಿಸಿದ್ದಾರೆ.