ಬೆಂಗಳೂರು : ಬಿಲ್ಡರ್ಗಳ ನಾಪತ್ತೆ ಪ್ರಕರಣಕ್ಕೆ ತಿರುವು!
ಬೆಂಗಳೂರು, ಜುಲೈ 04 : ಬೆಂಗಳೂರಿನ ಬಿಲ್ಡರ್ ಪ್ರಸಾದ್ ಬಾಬು ನಾಪತ್ತೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಸಿಸಿಬಿ ಪೊಲೀಸರು ಸೈಕಲ್ ರವಿ ಅವರನ್ನು ಬಂಧಿಸಿದ ಬಳಿಕ ನಗರದ ಇಬ್ಬರು ಬಿಲ್ಡರ್ಗಳು ನಾಪತ್ತೆಯಾಗಿದ್ದಾರೆ. ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.
ಜೂನ್ 27ರ ಬುಧವಾರ ರೌಡಿ ಶೀಟರ್ ಸೈಕಲ್ ರವಿ (42) ಮೇಲೆ ಸಿಸಿಬಿ ಪೊಲೀಸರು ಗುಂಡಿನ ದಾಳಿ ನಡೆಸಿ ಆತನನ್ನು ಬಂಧಿಸಿದ್ದರು. ಜೂನ್ 28ರಂದು ನಗರದ ಬಿಲ್ಡರ್ಗಳಾದ ಪ್ರಸಾದ್ ಬಾಬು ಮತ್ತು ಬಾಲಾಜಿ ನಾಪತ್ತೆಯಾಗಿದ್ದಾರೆ.
ಬೆಂಗಳೂರು : ಬಿಲ್ಡರ್ ನಾಪತ್ತೆ, ಅಪಹರಣ ಶಂಕೆ
ಪ್ರಸಾದ್ ಬಾಬು ಅವರನ್ನು ಜೆ.ಪಿ.ನಗರ ಬಳಿಯ ಇಂದಿರಾ ವೃತ್ತದಿಂದ ಅಪಹರಣ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಪ್ರಸಾದ್ ಬಾಬು ಅವರ ಪತ್ನಿ ದೂರು ದಾಖಲಿಸಿದ್ದಾರೆ. ಬಾಲಾಜಿ ನಾಪತ್ತೆ ಬಗ್ಗೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಈ ಇಬ್ಬರೂ ಬಿಲ್ಡರ್ಗಳು ಸೈಕಲ್ ರವಿ ಜೊತೆ ಸಂಪರ್ಕ ಹೊಂದಿದ್ದರು. ಸೈಕಲ್ ರವಿ ಬಂಧನವಾಗುತ್ತಿದ್ದಂತೆ ಇವರೂ ಸಹ ಬಂಧನದ ಭೀತಿಯಿಂದ ನಾಪತ್ತೆಯಾಗಿರಬಹುದು ಅಥವ ಬೇರೆಯವರು ಅಪಹರಣ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ರೌಡಿ ಶೀಟರ್ ಸೈಕಲ್ ರವಿ ವಿರುದ್ಧದ ತನಿಖೆ ಇಡಿಗೆ ಹಸ್ತಾಂತರ
ಸೈಕಲ್ ರವಿ ಪ್ರಕರಣದ ತನಿಖೆಯನ್ನು ಮುಂದುವರೆಸಿರುವ ಸಿಸಿಬಿ ಪೊಲೀಸರು ಬೇನಾಮಿ ಆಸ್ತಿಯ ವಿವರಗಳನ್ನು ಸಂಗ್ರಹಿಸಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿರುವ ಸೈಕಲ್ ರವಿ ಶಿಷ್ಯ ಗಿರೀಶ್ ಮನೆಯಲ್ಲಿ ಪೊಲೀಸರು ಶೋಧ ನಡೆಸಿದ್ದಾರೆ.
ಮೈಸೂರು ರಸ್ತೆ, ಕುಂಬಳಗೋಡು, ದೇವನಹಳ್ಳಿ ಸುತ್ತಮುತ್ತ ಕೋಟ್ಯಾಂತರ ರೂ. ಮೌಲ್ಯದ ಭೂಮಿಯನ್ನು ಬೇನಾಮಿ ಹೆಸರಿನಲ್ಲಿ ಖರೀದಿ ಮಾಡಿರುವ ಬಗ್ಗೆ ದಾಖಲೆಗಳು ಲಭ್ಯವಾಗಿವೆ. ಆದ್ದರಿಂದ ಪ್ರಕರಣವನ್ನು ಜಾರಿ ನಿರ್ದೇಶನಾಲಯಕ್ಕೆ ಹಸ್ತಾಂತರ ಮಾಡಲು ಪೊಲೀಸರು ನಿರ್ಧರಿಸಿದ್ದಾರೆ.