ಟಿವಿ ನಮ್ಮ ಜೀವನವನ್ನು ನರಕವನ್ನಾಗಿಸಿದೆ: ಮಂಗಳಮುಖಿಯರ ಅಳಲು
ಬೆಂಗಳೂರು, ಅಕ್ಟೋಬರ್, 22: ಸುದ್ದಿವಾಹಿನಿಯೊಂದರ ಕಾರ್ಯಚರಣೆಯಿಂದ ನಮ್ಮ ಬದುಕು ನರಕಯಾತನೆ ಅನುಭವಿಸುತ್ತಿದೆ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಮಂಗಳಮುಖಿಯರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಉರಿಬಿಸಿಲಿನ ನಡುವೆಯೂ ಲಿಂಗ ಅಲ್ಪಸಂಖ್ಯಾತರ ಸಂಘಟನೆ ಸದಸ್ಯರು ಟೌನ್ ಹಾಲ್ ಎದರು ನೂರಾರು ಸಂಖ್ಯೆಯಲ್ಲಿ ಶುಕ್ರವಾರ ಸೇರಿ ಮಾಧ್ಯಮ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.[ಮಾಧ್ಯಮ ಸಂಸ್ಥೆ ವಿರುದ್ಧ ಲಿಂಗ ಅಲ್ಪಸಂಖ್ಯಾತರ ಆಕ್ರೋಶ]
ಖಾಸಗಿ ಸುದ್ದಿವಾಹಿನಿಯೊಂದು ನಡೆಸಿದ ರಹಸ್ಯಕಾರ್ಯಚರಣೆಯಿಂದಾಗಿ ಕಳೆದ ನಾಲ್ಕು ವಾರಗಳಿಂದ ನಮ್ಮ ಬದುಕು ನರಕಯಾತನೆ ಅನುಭವಿಸುವಂತಾಗಿದೆ ಎಂದು ಸುದ್ದಿ ಸಂಸ್ಥೆ ವಿರುದ್ಧ ದೂರಿದರು.
ಸೆ. 25ರಂದು ಕನ್ನಡದ ಕನ್ನಡ ಖಾಸಗಿ ಸುದ್ದಿವಾಹಿನಿಯೊಂದು ಅಕ್ರಮವಾಗಿ ಲಿಂಗ ಪರಿವರ್ತನೆ ಮಾಡುತ್ತಿರುವ ಕುರಿತು ರಹಸ್ಯ ಕಾರ್ಯಚರಣೆ ನಡೆಸಿತ್ತು. ಕಾರ್ಯಚರಣೆಯಲ್ಲಿ ಕೆಲವು ಮಂದಿ ಮಂಗಳಮುಖಿಯರು ಶಾಮೀಲಾಗಿರುವುದು ಬೆಳಕಿಗೆ ಬಂದಿತ್ತು.
"ಸುದ್ದಿ ವಾಹಿನಿ ಪ್ರಸಾರ ಮಾಡಿದ ಕಾರ್ಯಕ್ರಮವು ನಮ್ಮನ್ನು ಸಮಾಜದಲ್ಲಿ ತಲೆ ಎತ್ತಿಕೊಳ್ಳದಂತೆ ಮಾಡಿದೆ. ನಮ್ಮನ್ನು ದುಷ್ಟರಂತೆ ಬಿಂಬಿಸಲಾಗಿದೆ ಎಂದು ಮಂಗಳಮುಖಿಯರು ಆರೋಪಿಸಿದರು.
ಕಾರ್ಯಚರಣೆ ಕುರಿತು ಸುಮಂಗಳಿ ಎಂಬ ಮಂಗಳಮುಖಿಯೊಬ್ಬರು ಪ್ರತಿಕ್ರಿಯೆ ನೀಡಿ" ಸೆ.26ರಂದು ನಾವು ಭಿಕ್ಷೆ ಬೇಡಲು ಅಂಗಡಿಗಳ ಬಳಿಗೆ ಹೋದಾಗ ಅಲ್ಲಿದ್ದ ಹಲವು ಮಂದಿ ನಮ್ಮನ್ನು ತುಚ್ಛವಾಗಿ ಮಾತನಾಡಿದರು. ಅವಮಾನಿಸಿದರು" ದುಃಖ ವ್ಯಕ್ತಪಡಿಸಿದರು.
ಕಾರ್ಯಚರಣೆಯಿಂದಾಗಿ ನಮಗೆ ಸಮಾಜದಲ್ಲಿ ಗೌರವ ಸಿಗುತ್ತಿಲ್ಲ. ಮಾಧ್ಯಮಗಳ ಮೇಲೆ ನಮಗೆ ನಂಬಿಕೆ ಹೋಗಿದೆ. ಎಲ್ಲಿ ನಮ್ಮ ಹೇಳಿಕೆಗಳನ್ನು ತಿರುಚುತ್ತಾರೋ ಎಂಬ ಭಯವಿದೆ. ಆದ್ದರಿಂದ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಮಂಗಳಮುಖಿಯೊಬ್ಬರು ಹೇಳಿದರು.
ಈ ಕುರಿತು ಮಾತನಾಡಿದ ಮಂಗಳಮುಖಿಯೊಬ್ಬರು " ನಾನು ಮನೆ ಬಿಟ್ಟು 7 ವರ್ಷ ಆಗಿತ್ತು. ಈಗ ನಮ್ಮ ಮನೆಯವರು ನನ್ನನ್ನು ಮಗಳಾಗಿ ಸ್ವೀಕರಿಸಲು ಸಿದ್ಧರಿದ್ದರು. ಆದರೆ ಈಗ ಸುದ್ದಿ ವಾಹಿನಿ ನಡೆಸಿದ ಕಾರ್ಯಚರಣೆಯಿಂದಾಗಿ ಮನೆಯವರೂ ಸಹ ನನ್ನನ್ನು ದೂರ ಮಾಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ಸುದ್ದಿ ವಾಹಿನಿಯಲ್ಲಿ ಮಾತನಾಡಿದ ರಿಯಾನ ಎಂಬ ಮಂಗಳಮುಖಿ ಮಾತನಾಡಿ ನಾನು 'ಮಂಗಳಮುಖಿಯಾಗಿ ಜೀವನ ನಡೆಸುತ್ತಿರುವುದಕ್ಕೆ ಹೆಮ್ಮೆ ಇದೆ. ಆದರೆ ನಮ್ಮ ತಂದೆ ತಾಯಿ ನಾನು ಆನಂದಿ ಎಂಬ ಮಂಗಳಮುಖಿಯೊಬ್ಬರು ನನ್ನನ್ನು ಅಕ್ರಮವಾಗಿ ಲಿಂಗ ಪರಿವರ್ತನೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದು ಸುಳ್ಳು ಎಂದು ಹೇಳಿದರು.
ನನ್ನ ಸಹಿ ಮತ್ತು ಫೋಟೊಗಳನ್ನು ಮಾಧ್ಯಮ ಸಂಸ್ಥೆಯವರು ನನ್ನ ಅನುಮತಿ ಇಲ್ಲದೆ ಪಡೆದುಕೊಂಡಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ವಾಹಿನಿಯ ಸಿಬ್ಬಂದಿ ಮತ್ತು ಸೆಕ್ಯೂರಿಟಿಯವರು ನನ್ನನ್ನು ಹೊರಗೆ ದಬ್ಬಿದ್ದಾರೆ ಎಂದು ಅವರು ಹೇಳಿದರು.