ನಾಗಸಂದ್ರ ಮೆಟ್ರೋ ನಿಲ್ದಾಣ: ಪಾದಚಾರಿ ಸುರಂಗ ಮಾರ್ಗಕ್ಕೆ ಸಿದ್ಧತೆ
ಬೆಂಗಳೂರು, ಜೂನ್ 1: ಮೆಟ್ರೋ ಸುರಂಗ ಮಾರ್ಗಕ್ಕೆ ಮೆಟ್ರೋ ಸಿದ್ಧತೆ ನಡೆಸಿದೆ. ನಾಗಸಂದ್ರ ಮೆಟ್ರೋ ನಿಲ್ದಾಣ ಬಳಸುವ ಹಾಗೂ ಈ ಭಾಗದಲ್ಲಿ ದಿನನಿತ್ಯ ರಸ್ತೆ ದಾಟುವವರು ಸಮಸ್ಯೆ ಶೀಘ್ರ ದೂರವಾಗಲಿದೆ.
ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಈ ಮೆಟ್ರೋ ನಿಲ್ದಾಣಕ್ಕೆ ಜನರು ಬರುವ ವೇಳೆ ರಸ್ತೆ ದಾಟಲು ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ. ಅಷ್ಟೇ ಅಲ್ಲದೆ ಇದು ಸುರಕ್ಷತೆಯೂ ಅಲ್ಲ, ಕಳೆದ ವರ್ಷವಷ್ಟೇ ನಾಗಸಂದ್ರ ನಿಲ್ದಾಣದಲ್ಲಿ ಇಳಿದು ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಳು. ಆ ಬಳಿಕ ಎಚ್ಚೆತ್ತುಕೊಂಡ ಮೆಟ್ರೋ ಅಧಿಕಾರಿಗಳು ಸುರಂಗ ಮಾರ್ಗ ನಿರ್ಮಿಸಲು ನಿರ್ಧರಿಸಿದ್ದಾರೆ.
ಮೆಟ್ರೋ ಮುಷ್ಕರ: ನೌಕರರ ಮೇಲೆ ಎಸ್ಮಾ ಜಾರಿಗೆ ಕೇಂದ್ರ ಚಿಂತನೆ
ನಾಗಸಂಧ್ರ ನಿಲ್ದಾಣದಿಂದ ಅರ್ಧ ಕಿ.ಮೀ ಮುಂದೆ ಸ್ಕೈವಾಕ್ ಇದೆ. ಸ್ಕೈವಾಕ್ ಕೆಳಗೆ ಬಿಎಂಟಿಸಿ ಬಸ್ ಸ್ಟಾಪ್ ಇರುವುದರಿಂದ ಇಲ್ಲಿ ಜನರು ಬಸ್ ಗಾಗಿ ಕಾಯುತ್ತಾ ನಿಲ್ಲುತ್ತಾರೆ. ಆದರೆ ಸ್ಕೈವಾಕ್ನಿಂದ ಮೆಟ್ರೋ ಪ್ರಯಾಣಿಕರಿಗೆ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆಯನ್ನು ದಾಟಬೇಕೆಂದರೆ ಮೆಟ್ರೋ ಪ್ರಯಾಣಿಕರು ಅರ್ಧ ಕಿ.ಮೀ ನಡೆದು, ಬಳಿಕವೇ ಸ್ಕೈವಾಕ್ ಹತ್ತಬೇಕಾಗುತ್ತದೆ.
2017ರ ಸೆಪ್ಟೆಂಬರ್ನಲ್ಲಿ ಸುರಂಗಮಾರ್ಗ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿತ್ತು. ಆದರೆ ಕಂಪನಿ ಹೆಚ್ಚು ಮೊತ್ತದ ಬಿಡ್ ಸಲ್ಲಿಸಿದ್ದರಿಂದ ಆ ಕಾಮಗಾರಿ ವಿಚಾರವನ್ನು ಅಲ್ಲಿಯೇ ಬಿಡಲಾಗಿತ್ತು. ಎರಡು ನಿಲ್ದಾಣಗಳ ಸಮೀಪ ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಹೋಗುವಂತೆ ಒಟ್ಟು 12.13 ಕೋಟಿ ವೆಚ್ಚದಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುತ್ತದೆ. ಒಂದೂವರೆ ವರ್ಷದೊಳಗೆ ಕಾಮಗಾರಿ ಮುಗಿಸುವಂತೆ ತಿಳಿಸಲಾಗಿದೆ.