ಸಿಎಂ ಕುಮಾರಸ್ವಾಮಿ ಡೈನಾಮಿಕ್ ನಿರ್ಧಾರಕ್ಕೆ ಸಾರ್ವಜನಿಕರ ಉಘೇ..ಉಘೇ..
Recommended Video
ಸರಕಾರವನ್ನು ಬುಡಮೇಲು ಮಾಡಲು ಕೆಲವೊಂದು ದುಷ್ಟ ಶಕ್ತಿಗಳು ಕೆಲಸ ಮಾಡುತ್ತಿವೆ, ಅಂತವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ಸಿಸಿಬಿಗೆ ಅಲೋಕ್ ಕುಮಾರ್ ಅವರನ್ನು ನೇಮಿಸಿದ್ದರು. ಅಧಿಕಾರ ಸ್ವೀಕರಿಸಿದ ಕೂಡಲೇ, ಸಮಾಜದ್ರೋಹಿಗಳ ವಿರುದ್ದ ಕಾರ್ಯಾಚರಣೆಯನ್ನು ಅಲೋಕ್ ಕುಮಾರ್ ಆರಂಭಿಸಿದ್ದರು.
ಬೆಂಗಳೂರಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸರಿದಾರಿಗೆ ತರಲು ಸಾಧ್ಯವಾಗುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಎರಡು ದಿನದ ಹಿಂದೆಯಷ್ಟೇ ಹೇಳಿದ್ದ ಕುಮಾರಸ್ವಾಮಿ, ಈಗ ಬೆಂಗಳೂರಿನ ಅತ್ಯಂತ ಆಯಕಟ್ಟಿನ ಹುದ್ದೆಗೆ ಇಬ್ಬರು ಖಡಕ್ ಅಧಿಕಾರಿಗಳನ್ನು ವರ್ಗಾಯಿಸಿ ನುಡಿದಂತೆ ನಡೆದಿದ್ದಾರೆ.
ಸಿಸಿಬಿ ಅಲೋಕ್ ಕುಮಾರ್ ರೌಡಿಗಳಿಗೆ 'ಸಿಂಹಸ್ವಪ್ನ' ಅನ್ನೋದು ಇದೇ ಕಾರಣಕ್ಕೆ
ಚಿಕ್ಕಮಗಳೂರಿನ ಎಸ್ಪಿಯಾಗಿದ್ದ ಅಣ್ಣಾಮಲೈ ಮತ್ತು ಹಾಸನದ ಪೊಲೀಸ್ ಮುಖ್ಯಸ್ಥರಾಗಿದ್ದ ರಾಹುಲ್ ಕುಮಾರ್ ಶಹಾಪುರ್ವಾಡ್ ಅವರನ್ನು ಬೆಂಗಳೂರು ನಗರಕ್ಕೆ ವರ್ಗ ಮಾಡಲಾಗಿದ್ದು, ಮುಖ್ಯಮಂತ್ರಿಗಳ ಈ ನಿರ್ಧಾರ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆಗೊಳಗಾಗಿದೆ.
ರಾಜಧಾನಿಯಲ್ಲಿ ಅಪರಾಧ ನಿಯಂತ್ರಣಕ್ಕೆ ನಾನು ಕಟಿಬದ್ದನಾಗಿದ್ದು , ಮುಂದಿನ ದಿನಗಳಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡುವವನಿದ್ದೇನೆ, ಅಧಿಕಾರಿಗಳು ನನ್ನ ವೇಗಕ್ಕೆ ಸ್ಪಂದಿಸುತ್ತಿಲ್ಲ, ನಿಮ್ಮ ವರ್ಕಿಂಗ್ ಸ್ಟೈಲ್ ಅನ್ನು ಬದಲಾಯಿಸಿಕೊಳ್ಳಿ ಎಂದು ಕುಮಾರಸ್ವಾಮಿ ವಾರದ ಹಿಂದೆಯಷ್ಟೇ ಹೇಳಿದ್ದರು.
ಬೆಂಗಳೂರಿಗೆ ಬರ್ತಿದ್ದಾರೆ 'ಸಿಂಗಂ' ಅಣ್ಣಾಮಲೈ: 5 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಅಣ್ಣಾಮಲೈ ಮತ್ತು ರಾಹುಲ್ ಅವರ ನೇಮಕದಿಂದ, ರಾಜಧಾನಿಯ ಪೂರ್ವ, ದಕ್ಷಿಣ ಮತ್ತು ಪಶ್ಚಿಮ ವಿಭಾಗಕ್ಕೆ ಡೈನಾಮಿಕ್ ಅಧಿಕಾರಿಗಳ ನೇಮಕವಾದಂತಾಗಿದೆ. ಆ ಮೂಲಕ, ಬೆಂಗಳೂರಿನ ಕೆಲವು ಭಾಗಗಳಲ್ಲಿ ರೌಡಿಗಳ ಪುಂಡಾಟಿಕೆಗೆ ಇನ್ನಾದರೂ ಬ್ರೇಕ್ ಬೀಳಬಹುದು ಎನ್ನುವ ಆಶಾಭಾವನೆಯನ್ನು ಜನರು ಹೊಂದಿದ್ದಾರೆ. ನಗರಕ್ಕೆ ನಾಲ್ಕು ಖಡಕ್ ಪೊಲೀಸ್ ಅಧಿಕಾರಿಗಳು, ಮುಂದೆ ಓದಿ..
ಬೆಂಗಳೂರಿಗೆ ವಿಶ್ವದಲ್ಲೇ ಒಂದು ವಿಶಿಷ್ಟವಾದ ಬ್ರಾಂಡ್
ನಮ್ಮ ಬೆಂಗಳೂರಿಗೆ ವಿಶ್ವದಲ್ಲೇ ಒಂದು ವಿಶಿಷ್ಟವಾದ ಬ್ರಾಂಡ್ ಇದೆ. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಅಪರಾಧ ಕೃತ್ಯಗಳಿಂದ ಬೆಂಗಳೂರಿಗೆ ಕೆಟ್ಟ ಹೆಸರು ಬರುತ್ತಿದೆ. ಹಾಗಾಗಿ, ಕಾನೂನು ಮತ್ತು ಸುವ್ಯವಸ್ಥೆ ಬಿಗಿಗೊಳಿಸುವ ಕೆಲಸವಾಗಬೇಕಾಗಿದೆ. ಹಾಗಾಗಿ, ಇಬ್ಬರು ಅಧಿಕಾರಿಗಳನ್ನು ನಗರಕ್ಕೆ ವರ್ಗಾಯಿಸಲಾಗಿದೆ. ಈ ರೀತಿಯ ಕೆಲವು ಪ್ರಮುಖ ಬದಲಾವಣೆಗಳು ಮುಂದಿನ ದಿನಗಳಲ್ಲೂ ನಡೆಯಲಿದೆ - ಸಿಎಂ ಕುಮಾರಸ್ವಾಮಿ.
ಪೊಲೀಸರ ಚುನಾವಣಾ ಭತ್ಯೆ ಹೆಚ್ಚಳ: ಹಣಕಾಸು ಇಲಾಖೆ ಗ್ರೀನ್ ಸಿಗ್ನಲ್
ಪಶ್ಚಿಮ ವಿಭಾಗದ ಡಿಸಿಪಿಯಾಗಿ ಗಿ ರವಿ ಚೆನ್ನಣ್ಣನವರ್
ಮೈಸೂರಿನಲ್ಲಿ ಒಂದೂವರೆ ವರ್ಷದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ರವಿ ಚೆನ್ನಣ್ಣನವರ್ ಅವರನ್ನು ಈ ವರ್ಷದ ಮಾರ್ಚ್ ತಿಂಗಳಲ್ಲಿ ಬೆಂಗಳೂರು ನಗರ ಪಶ್ಚಿಮ ವಿಭಾಗದ ಡಿಸಿಪಿಯಾಗಿ ನೇಮಿಸಲಾಗಿತ್ತು. ಇದಕ್ಕೂ ಮೊದಲು ಶಿವಮೊಗ್ಗದ ಎಸ್ಪಿಯಾಗಿದ್ದ ರವಿ, ರೌಡಿಗಳು ಮತ್ತು ಮೀಟರ್ ಬಡ್ಡಿ ದಂಧೆಕೋರರಿಗೆ ಸಿಂಹಸ್ವಪ್ನರಾಗಿ ಕಾಡಿದ್ದರು. ನಗರದಲ್ಲಿ ಅಪರಾಧ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಖಡಕ್ ಅಧಿಕಾರಿಗಳನ್ನು ನಗರಕ್ಕೆ ವರ್ಗಾಯಿಸುವಂತೆ ಬೇಡಿಕೆ ಕೇಳಿ ಬಂದ ಹಿನ್ನೆಲೆಯಲ್ಲಿ ರವಿ ಅವರನ್ನು ಬೆಂಗಳೂರಿಗೆ ವರ್ಗಾಯಿಸಲಾಗಿತ್ತು.
ಮೈಸೂರು ಎಸ್ಪಿ ರವಿ ಡಿ.ಚನ್ನಣ್ಣನವರ್ ಸಂದರ್ಶನ
ರೌಡಿಗಳ ಪಾಲಿನ ಟೆರರ್ ಅಲೋಕ್ ಕುಮಾರ್ ಸಿಸಿಬಿಗೆ
ಬೆಳಗಾವಿ ಉತ್ತರ ವಲಯದ ಐಜಿಪಿಯಾಗಿದ್ದ, ರೌಡಿಗಳ ಪಾಲಿನ ಟೆರರ್ ಅಲೋಕ್ ಕುಮಾರ್ ಅವರನ್ನು ಸಿಸಿಬಿಯ (ಸಿಟಿ ಕ್ರೈಂ ಬ್ರಾಂಚ್) ಐಜಿಪಿ, ಜಂಟಿ ಕಮಿಷನರ್ ಆಗಿ ಸೆಪ್ಟಂಬರ್ ತಿಂಗಳಲ್ಲಿ ವರ್ಗಾಯಿಸಲಾಗಿತ್ತು. ಕುಮಾರಸ್ವಾಮಿ ತೆಗೆದುಕೊಂಡ ಅತ್ಯಂತ ಪ್ರಮುಖ ನಿರ್ಧಾರಗಳಲ್ಲಿ ಇದೂ ಒಂದು ಎಂದೇ ಬಿಂಬಿತವಾಗಿತ್ತು. ಮಟ್ಕಾ, ಬೆಟ್ಟಿಂಗ್, ರಿಯಲ್ ಎಸ್ಟೇಟ್, ಮೀಟರ್ ಬಡ್ಡಿ ದಂಧೆಯ ಮೂಲಕ ಕೋಟ್ಯಾಂತರ ರೂಪಾಯಿ ಕೈಕೈಬದಲಾಗುತ್ತದೆ. ಇದೆಲ್ಲವೂ, ಪೊಲೀಸರ ರಕ್ಷೆಯಿಂದಲೇ ನಡೆಯುತ್ತಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದರು. ಬೆಂಗಳೂರಿನ ಅಪರಾಧ ಇತಿಹಾಸದಲ್ಲೇ ದೊಡ್ಡ ದಾಳಿ ಅಲೋಕ್ ನೇತೃತ್ವದಲ್ಲಿ ನಡೆದು, ನಗರದ ರೌಡಿಗಳ ಮನೆ, ಅಡ್ಡ, ಕಟ್ಟಡಗಳ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಬೆಂಗಳೂರಿನ ದಕ್ಷಿಣ ವಿಭಾಗದ ಡಿಸಿಪಿಯಾಗಿ ಅಣ್ಣಾಮಲೈ
ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಸೇರಿದಂತೆ ಐವರು ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಕ್ಟೋಬರ್ 15ರಂದು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಉಡುಪಿ, ಚಿಕ್ಕಮಗಳೂರುಗಳಲ್ಲಿ ತಮ್ಮ ಖಡಕ್ ನೀತಿಗಳಿಂದ 'ಸಿಂಗಂ' ಎಂಬ ಖ್ಯಾತಿ ಪಡೆದಿರುವ ಅಣ್ಣಾಮಲೈ ರಾಜಧಾನಿ ಬೆಂಗಳೂರಿನ ದಕ್ಷಿಣ ವಿಭಾಗದ ಡಿಸಿಪಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಭದ್ರಾ ಜಲಾಶಯ ಬಲದಂಡೆ ನಾಲೆಯಿಂದ ನೀರು ತುಂಬಿಸಿಕೊಳ್ಳಲು ತಾಲೂಕು ಆಡಳಿತ ನಿಷೇಧ ಹೇರಿರುವ ಕ್ರಮದ ವಿರುದ್ದ ರೈತರು ಪ್ರತಿಭಟನೆ ನಡೆಸುತ್ತಿದ್ದಾಗ, ರೈತರನ್ನು ಅಣ್ಣಾಮಲೈ ನಿಂದಿಸಿದ್ದರು ಎನ್ನುವ ಆರೋಪ ಇವರ ಮೇಲಿತ್ತು.
ರಾಹುಲ್ ಕುಮಾರ್ ಶಹಾಪುರ್ ವಾಡ್
ಹಾಸನದ ಎಸ್ಪಿಯಾಗಿದ್ದ, ಮಹಾರಾಷ್ಟ್ರ ಮೂಲದ ರಾಹುಲ್ ಕುಮಾರ್ ಶಹಾಪುರ್ ವಾಡ್ ಅವರನ್ನು ವರ್ಗಾಯಿಸಿ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿಯಾಗಿ ವರ್ಗಾಯಿಸಲಾಗಿದೆ. ಆ ಮೂಲಕ, ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನಾಲ್ಕು ಜನ ಖಡಕ್ ಅಧಿಕಾರಿಗಳನ್ನು ಸರಕಾರ ನೇಮಿಸಿದೆ. ರೌಡಿಗಳ ಪರೇಡ್ ಮತ್ತೆ ಆರಂಭವಾಗಿದ್ದು, ಕುಮಾರಸ್ವಾಮಿ ಸರಕಾರದ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.