ಚುನಾವಣಾ ಪ್ರಚಾರದಲ್ಲಿ ಕಳೆದು ಹೋದ ಮಗು ರಕ್ಷಿಸಿದ ಟ್ರಾಫಿಕ್ ಪೊಲೀಸ್
ಬೆಂಗಳೂರು, ಮೇ 08: ಚುನಾವಣಾ ಪ್ರಚಾರಕ್ಕೆ ಬಂದಿದ್ದ ರಾಜಕೀಯ ಪಕ್ಷದ ಕಾರ್ಯಕರ್ತರೊಂದಿಗೆ ತೆರಳಿ ಕಳೆದು ಹೋಗಿದ್ದ ಒಂದೂವರೆ ವರ್ಷದ ಬಾಲಕನೊಬ್ಬನನ್ನು ಟ್ರಾಫಿಕ್ ಪೇದೆಯೊಬ್ಬರು ಪಾಲಕರ ಮಡಿಲಿಗೆ ಒಪ್ಪಿಸಿದ ಘಟನೆ ಹೊಸೂರು ರಸ್ತೆಯಲ್ಲಿ ನಡೆದಿದೆ.
ಕೇವಲ ಟ್ರಾಫಿಕ್ ನಿಯಂತ್ರಣ ಮಾತ್ರ ತನ್ನ ಕೆಲಸ ಎಂದುಕೊಂಡಿದ್ದರೆ ಬಾಲಕ ಶಾಶ್ವತವಾಗಿ ಪಾಲಕರಿಂದ ದೂರಾಗುವ ಅಪಾಯ ಇತ್ತಾದರೂ ಟ್ರಾಫಿಕ್ ಪೇದೆ ಲೋಕೇಶ್ ಅವರ ಮಾನವೀಯತೆಯ ಪರಿಣಾಮ ಮಗುವೊಂದು ಹೆತ್ತವರ ಮಡಿಲು ಸೇರಿದೆ.
ಬಕಾಸುರನ ಹೊಟ್ಟೆಗೆ ಮಜ್ಜಿಗೆಯಂತಾದ ಟ್ರಾಫಿಕ್ ಮತ್ತು ಪೊಲೀಸರು!
ನಡೆದದ್ದಾದರೂ ಏನು?: ಚುನಾವಣಾ ಪ್ರಚಾರಕ್ಕೆಂದು ರಾಜಕೀಯ ಪಕ್ಷದ ಮುಖಂಡರು ಮತಯಾಚನೆಗಾಗಿ ಲಕ್ಷ್ಮೀ ಲೇಔಟ್ನಲ್ಲಿರುವ ಚಿರು(ಮಗು) ಮನೆಗೆ ಭೇಟಿ ನೀಡಿದ್ದರು. ಅವರು ಮನೆಯಿಂದ ಹಿಂದಿರುಗುವಾಗ ಮಗುವು ಕೂಡ ಅವರ ಗುಂಪಿನೊಳಗೆ ಸೇರಿಕೊಂಡಿದೆ. ಯಾರೂ ಕೂಡ ಗಮನಸಿಸಿಲ್ಲ.
ನಂತರ ಹೊಸೂರು ರಸ್ತೆಯಲ್ಲಿರುವ ಗರ್ವಭಾವಿಪಾಳ್ಯದ ಸಿಗ್ನಲ್ ಬಳಿ ಈ ಮಗುವನ್ನು ನೋಡಿದ ಟ್ರಾಫಿಕ್ ಪೊಲೀಸ್ ಲೋಕೇಶ್ ಆ ಮಗುವು ತಪ್ಪಿಸಿಕೊಂಡಿರುವುದು ಗೊತ್ತಾಗಿದೆ. ನಂತರ ಆ ಮಗುವನ್ನು ಕರೆದುಕೊಂಡು ಹೋಗಿ ಜ್ಯೂಸ್ ಕೊಡಿಸಿ, ಅವರ ವಿಳಾಸದ ಕುರಿತು ವಿಚಾರಣೆ ನಡೆಸಿದರು. ನಂತರ ಅವರ ಬೈಕ್ಮೇಲೆ ಕೂರಿಸಿಕೊಂಡು ಅಲ್ಲಿನ ಸುತ್ತಮುತ್ತಲ ಪ್ರದೇಶವೆಲ್ಲಾ ಸುತ್ತಾಡಿ ಎಲ್ಲರ ಬಳಿಯೂ ವಿಚಾರಣೆ ನಡೆಸಿದ್ದಾರೆ.
ಆದರೂ ಎಲ್ಲಿಯೂ ಬಾಲಕನ ಪೋಷಕರರಿರುವ ಮನೆಯನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ನಂತರ ವಾಪಾಸ್ ಬಂದು ಬಾಲಕನ ಜತೆಗೆ ಫೋಟೊ ಕ್ಲಿಕ್ಕಿಸಿ ಅದನ್ನು ವಾಟ್ಸ್ ಆಪ್ನಲ್ಲಿ ಎಲ್ಲರಿಗೂ ಸಂದೇಶ ರವಾನಿಸಲಾಯಿತು.
ಒಂದೊಮ್ಮೆ ಕಾಣೆಯಾದ ಮಗುವಿನ ಬಗ್ಗೆ ದೂರು ದಾಖಲಿಸಲು ಪೋಷಕರು ಬರಬಹುದೆಂದು ಊಹಿಸಿ ಪೊಲೀಸ್ ಠಾಣೆಗೆ ಮಗುವಿನ ಫೋಟೊ ಕೂಡ ನೀಡಿದ್ದಾರೆ. ಎರಡು ಗಂಟೆಯ ಬಳಿಕ ಮಗುವಿನ ಅಜ್ಜಿಗೆ ಈ ವಿಷಯ ತಿಳಿದು ಸಿಗ್ನಲ್ ಬಳಿ ಬಂದು ಪೊಲೀಸ ರಿಂದ ಮಗುವನ್ನು ಕರೆದುಕೊಂಡು ಹೋಗಿದ್ದಾರೆ.