ತಂಬಾಕು ಬಳಕೆ ನಿಯಂತ್ರಣ : ಕನ್ನಡಿಗ ಡಾ.ವಿಶಾಲ್ರಾವ್ ಅವರಿಗೆ ಪ್ರತಿಷ್ಠಿತ ವಿಲ್ಕೆನ್ಫೆಲ್ಡ್ ಪ್ರಶಸ್ತಿ
"ತಂಬಾಕಿನಿಂದ ಬಂದಿರುವ ಮಾರಣಾಂತಿಕ ರೋಗಗಳಿಗೆ ಕೇವಲ ಚಿಕಿತ್ಸೆಯನ್ನು ನೀಡಿದರೆ ಸಾಲದು. ಇದರ ಜತೆಜತೆಯಲ್ಲೇ ಭಾರತೀಯ ಯುವ ಪೀಳಿಗೆ ತಂಬಾಕು ಚಟದಿಂದ ದೂರವಿಡಬೇಕಾಗಿದೆ. ಈ ನಿಟ್ಟಿನಲ್ಲಿ ಕಟ್ಟು ನಿಟ್ಟಿನ ಕಾನೂನು ಜಾರಿಗೆ ತರಲೇಬೇಕಾಗಿದೆ."
ಬೆಂಗಳೂರು, ಮೇ 13 : ರಾಜ್ಯ ಮತ್ತು ದೇಶದಲ್ಲಿ ತಂಬಾಕು ಬಳಕೆ ನಿಯಂತ್ರಣಕ್ಕೆ ಗಣನೀಯ ಸೇವೆ ಸಲ್ಲಿಸುತ್ತಿರುವ ಕನ್ನಡಿಗ ಖ್ಯಾತ ಕ್ಯಾನ್ಸರ್ ತಜ್ಞರಾದ ಡಾ. ಯು. ಎಸ್. ವಿಶಾಲ್ರಾವ್ ಅವರಿಗೆ ವಿಶ್ವ ಆರೋಗ್ಯ ಸಂಸ್ಥೆಯ ಮತ್ತು ಬ್ಲೂಂಬರ್ಗ್ ದಿ ಕ್ಯಾಂಪೇನ್ ಫಾರ್ ಟೊಬ್ಯಾಕೋ-ಫ್ರೀ ಕಿಡ್ಸ್ನ ಪ್ರತಿಷ್ಠಿತ ವಿಲ್ಕೆನ್ಫೆಲ್ಡ್ ಪ್ರಶಸ್ತಿ ಲಭಿಸಿದೆ.
ಮೇ 10ರಂದು ವಾಷಿಂಗ್ಟನ್ನಲ್ಲಿ ನಡೆದ ವಾರ್ಷಿಕ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಶ್ವ ಆರೋಗ್ಯ ಸಂಸ್ಥೆಯ ತಂಬಾಕು ನಿಯಂತ್ರಣಕ್ಕೆ ವಿಶ್ವದಾದ್ಯಂತ ನಡೆಯುತ್ತಿರುವ ಅಭಿಯಾನವನ್ನು ಕರ್ನಾಟಕ ಮತ್ತು ಭಾರತದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಮತ್ತು ಈ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಡಾ.ವಿಶಾಲ್ರಾವ್ ಅವರು ಕಳೆದ ಹಲವು ವರ್ಷಗಳಿಂದ ಗಣನೀಯ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಅವರ ಈ ಸೇವೆಯನ್ನು ಗಮನಿಸಿದ ವಿಶ್ವ ಆರೋಗ್ಯ ಸಂಸ್ಥೆ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಜಾಗತಿಕ ಮಟ್ಟದಲ್ಲಿ, ಟೊಬ್ಯಾಕೊ- ಫ್ರೀ ಕಿಡ್ಸ್ ನ ಸಂಸ್ಥಾಪಕಿ ದಿವಂಗತ ಜುಡಿ ವಿಲ್ಕೆನ್ಫೆಲ್ಡ್ ಅವರ ಗೌರವಾರ್ಥವಾಗಿ ಈ ವಿಲ್ಕೆನ್ಫೆಲ್ಡ್ ಪ್ರಶಸ್ತಿಯನ್ನು ನೀಲಾಗುತ್ತಿದೆ. ತಂಬಾಕು ನಿಯಂತ್ರಣ ಮಾಡುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ವಿವಿಧ ದೇಶಗಳ ನಡುವೆ ಒಪ್ಪಂದ ಏರ್ಪಡಲು ಇವರು ಪ್ರಮುಖ ಪಾತ್ರ ವಹಿಸಿದ್ದರು. ಇದರ ಪರಿಣಾಮ ಪ್ರಸ್ತುತ 180ಕ್ಕೂ ದೇಶಗಳು ಈ ಒಪ್ಪಂದವನ್ನು ಅಳವಡಿಸಿಕೊಂಡಿವೆ. ಪ್ರತಿ ವರ್ಷ ತಂಬಾಕು ನಿಯಂತ್ರಣ ಕ್ಷೇತ್ರದಲ್ಲಿ ಸಾಧನೆಗೈದ ಒಬ್ಬ ವ್ಯಕ್ತಿಯನ್ನು ಈ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ. [ತಂಬಾಕು ತ್ಯಜಿಸಿದರೆ ಯಾರಿಗೆ ಲಾಭ? ಯಾರಿಗೆ ನಷ್ಟ?]
ಡಾ.ರಾವ್ ಅವರು ಪ್ರಸ್ತುತ ಹೆಲ್ತ್ ಕೇರ್ ಗ್ಲೋಬಲ್ ಎಂಟರ್ಪ್ರೈಸ್ ಕ್ಯಾನ್ಸರ್ ಹಾಸ್ಪಿಟಲ್ನ ಹೆಡ್ ಅಂಡ್ ನೆಕ್ ಸರ್ಜಿಕಲ್ ಆಂಕಾಲಜಿಯ ಮುಖ್ಯಸ್ಥರಾಗಿದ್ದು, ವಾಯ್ಸ್ ಆಫ್ ಟೊಬ್ಯಾಕೊ ವಿಕ್ಟಿಮ್ಸ್(VoTV)ನ ಸಲಹೆಗಾರರು. ಅಲ್ಲದೇ ಕರ್ನಾಟಕ ಸರ್ಕಾರ ರಚಿಸಿರುವ ತಂಬಾಕು ನಿಯಂತ್ರಣ ಉನ್ನತ ಮಟ್ಟದ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಕ್ಯಾನ್ಸರ್ ತಜ್ಞರು ಮತ್ತು ಸಾರ್ವಜನಿಕ ಆರೋಗ್ಯ ಸೇವೆಗಳ ಸಲಹೆಗಾರರಾಗಿರುವ ಡಾ.ರಾವ್ ಅವರು, ಮಾರಣಾಂತಿಕ ರೋಗಗಳನ್ನು ಹರಡುವ ತಂಬಾಕು ವಿರುದ್ಧದ ಹೋರಾಟಗಳ ನಾಯಕತ್ವ ವಹಿಸಿಕೊಂಡಿದ್ದಾರೆ. ಇದರಿಂದ ಬರುವ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಡಾ.ರಾವ್ ಅವರು ಸರ್ಕಾರ, ಸ್ವಯಂಸೇವಾ ಸಂಘಟನೆಗಳು ಮತ್ತು ಖಾಸಗಿ ಕ್ಷೇತ್ರದ ಪ್ರಮುಖರನ್ನು ಒಂದೆಡೆ ಕೂಡಿಸಿ ಜಾಗೃತಿ ಮೂಡಿಸುವ ಕಾಯಕದಲ್ಲಿ ತೊಡಗಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಮಾಡುವುದು, ತಂಬಾಕು ಉತ್ಪನ್ನಗಳ ಜಾಹೀರಾತು ನಿಷೇಧಿಸುವುದು ಮತ್ತು ತಂಬಾಕು ಉತ್ಪನ್ನಗಳ ಪ್ಯಾಕೇಟ್ಗಳ ಮೇಲೆ ಅಪಾಯ ಸೂಚಿಸುವ ದೊಡ್ಡದಾದ ಚಿತ್ರ ಮುದ್ರಿಸುವ ಕುರಿತಾದ ಸಿಗರೇಟ್ ಮತ್ತು ಇತರೇ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ 2003ನ್ನು ದೇಶಾದ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. [ಧೂಮಪಾನ ಮಾಡುವುದು ಬಿಡುವುದು ನಿಮ್ಮಿಷ್ಟ!]
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಾ.ರಾವ್, "ತಂಬಾಕಿನಿಂದ ಉಂಟಾಗುವ ದುಷ್ಪರಿಣಾಮಗಳನ್ನು ನಾನು ನನ್ನ ಬಳಿ ಬರುವ ರೋಗಿಗಳಲ್ಲಿ ಗಮನಿಸಿದ್ದೇನೆ. ತಂಬಾಕಿನಿಂದ ಬಂದಿರುವ ಮಾರಣಾಂತಿಕ ರೋಗಗಳಿಗೆ ಕೇವಲ ಚಿಕಿತ್ಸೆಯನ್ನು ನೀಡಿದರೆ ಸಾಲದು. ಇದರ ಜತೆಜತೆಯಲ್ಲೇ ಭಾರತೀಯ ಯುವ ಪೀಳಿಗೆ ತಂಬಾಕು ಚಟದಿಂದ ದೂರವಿಡಬೇಕಾಗಿದೆ. ಈ ನಿಟ್ಟಿನಲ್ಲಿ ಕಟ್ಟು ನಿಟ್ಟಿನ ಕಾನೂನು ಜಾರಿಗೆ ತರಲೇಬೇಕಾಗಿದೆ. ಸರ್ಕಾರದ ಬದ್ಧತೆ, ಸಮಾಜದ ಎಲ್ಲಾ ವರ್ಗಗಳ ಸಹಯೋಗ ಮತ್ತು ಸಹಕಾರದ ಪರಿಣಾಮದಿಂದ ನಾವು ಭಾರತದಲ್ಲಿ ತಂಬಾಕು ಉತ್ಪನ್ನ ಬಳಕೆಯನ್ನು ಸಾಕಷ್ಟು ಕಡಿಮೆ ಮಾಡಬಹುದಾಗಿದೆ" ಎಂದು ತಿಳಿಸಿದರು.
ಡಾ.ರಾವ್ ಅವರ ಪ್ರಯತ್ನದಿಂದಾಗಿ ಕರ್ನಾಟಕದಲ್ಲಿ ಗುಟ್ಕಾ, ಜಗಿಯುವ ತಂಬಾಕು ಮತ್ತು ಇ-ಸಿಗರೇಟು ನಿಷೇಧ ಮಾಡಲಾಗಿದೆ. ಇದರಿಂದ ಸುಮಾರು 65 ದಶಲಕ್ಷಕ್ಕೂ ಅಧಿಕ ಜನರಿಗೆ ಅನುಕೂಲವಾಗಿದ್ದು, ಅವರ ಆರೋಗ್ಯ ರಕ್ಷಣೆಯಾದಂತಾಗಿದೆ.
ತಂಬಾಕಿನಿಂದಾಗುವ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಮಾತ್ರವಲ್ಲದೇ, ತಂಬಾಕಿನಿಂದಾಗಿ ಕ್ಯಾನ್ಸರ್ಗೆ ತುತ್ತಾಗಿ ಧ್ವನಿ ಪೆಟ್ಟಿಗೆ ಕಳೆದುಕೊಂಡವರ ಪಾಲಿಗೆ ಡಾ.ರಾವ್ ವರವಾಗಿದ್ದಾರೆ. ಅತ್ಯಂತ ಕಡಿಮೆ ಬೆಲೆಗೆ ಕೃತಕ ಧ್ವನಿಪೆಟ್ಟಿಗೆ(ವಾಯ್ಸ್ ಪ್ರೋಸ್ತಸಿಸ್) ಕಂಡುಹಿಡಿದ ಹೆಗ್ಗಳಿಕೆ ಇವರದ್ದಾಗಿದೆ. ಇದರಿಂದಾಗಿ ಸಾವಿರಾರು ಬಡ ಕ್ಯಾನ್ಸರ್ರೋಗಿಗಳ ಧ್ವನಿ ಮರಳಿದೆ.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕ್ಯಾಂಪೇನ್ ಫಾರ್ ಟೊಬ್ಯಾಕೋ-ಫ್ರೀ ಕಿಡ್ಸ್ ನ ಅಧ್ಯಕ್ಷರಾದ ಮ್ಯಾಥ್ಯೂ ಎಲ್. ಮೇಯರ್ "ಡಾ. ವಿಶಾಲ್ ರಾವ್ ರವರು ತಂಬಾಕು ಮುಕ್ತ ಸಮಾಜ ರೂಪಿಸುವ ನಿಟ್ಟಿನಲ್ಲಿ ನೀಡುತಿರುವ ಕೊಡುಗೆ ಪ್ರಶಂಸನಾರ್ಹವಾದದ್ದು, ಇಂತಹ ವ್ಯಕ್ತಿಗಳ ಶ್ರಮದಿಂದ ಸಮಾಜದಲ್ಲಿ ನಿಜವಾದ ಬದಲಾವಣೆ ತರಲು ಸಾಧ್ಯ. ಇನ್ನು ಮುಂದೆಯೂ ಸಹ ತಂಬಾಕು ಮುಕ್ತ ಭಾರತದೆಡೆಗೆ ಅವರ ಕೊಡುಗೆ ನಿರಂತರವಾಗಿರಲಿ" ಎಂದು ಹಾರೈಸಿದರು.