ಬೆಂಗಳೂರಿನಲ್ಲಿ ಮೂರು ಶಂಕಿತ ನಿಪಾಹ್ ಪ್ರಕರಣ ಪತ್ತೆ
ಬೆಂಗಳೂರು, ಮೇ 30: ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರೂ ನಿಪಾಹ್ ವೈರಸ್ ಭೀತಿ ಆವರಿಸಿದೆ. ಈ ಮೊದಲು ಜ್ವರ ಬಂದರೆ ಮನೆಯಲ್ಲಿಯೇ ಔಷಧ ಮಾಡಿ ಕಡಿಮೆ ಮಾಡಿಕೊಳ್ಳುತ್ತಿದ್ದರು. ಆದರೆ ಇದೀಗ ಜ್ವರ ಬಂದರೆ ಆಸ್ಪತ್ರೆಗೆ ಹೋಗಲೇಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೀಗಿರುವಾಗ ನಗರದಲ್ಲಿ ಮೂರು ಶಂಕಿತ ನಿಪಾಹ್ ಪ್ರಕರಣಗಳು ದಾಖಲಾಗಿದೆ. ಅವರ ರಕ್ತದ ಮಾದರಿ, ಮೂರು ಹಾಗೂ ಗಂಟಲಿನ ದ್ರವವನ್ನು ಪಡೆದು ಮಣಿಪಾಲ್ ನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ. ಇವರು ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯಾಗಿದ್ದು, ಕೇರಳ ಮೂಲದವರಾಗಿದ್ದಾರೆ.
ಗೋವಾದಲ್ಲೂ ಶುರುವಾಯ್ತು ಮಾರಣಾಂತಿಕ ನಿಪಾಹ್ ವೈರಸ್ ಭೀತಿ
ಕಳೆದ ಹದಿನೈದು ದಿನಗಳ ಹಿಂದಷ್ಟೇ ಕೇರಳಕ್ಕೆ ಹೋಗಿ ಬಂದಿದ್ದ ಇವರಲ್ಲಿ ಜ್ವರ, ತಲೆನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಯೋಗಾಲಯದ ವರದಿ ಬಂದ ನಂತರ ಕಾರಣ ತಿಳಿಯಲಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಕಳೆದ ಎರಡು ವಾರಗಳಿಂದ ನಿಪಾಹ್ ವೈರಸ್ ಕೇರಳದ 11ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡಿದೆ.