ಬೆಂಗಳೂರಲ್ಲಿ ಇನ್ನೂ ಮೂರು ವನಿತಾ ಸಹಾಯವಾಣಿ ಕೇಂದ್ರ
ಬೆಂಗಳೂರು, ಮಾರ್ಚ್ 28: ನಗರದಲ್ಲಿ ಪ್ರಸ್ತುತ ಇರುವ ಸಹಾಯವಾಣಿ ಕೇಂದ್ರಗಳಲ್ಲಿ ದೂರುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಹೊಸದಾಗಿ ಮೂರು ವನಿತಾ ಸಹಾಯವಾಣಿ ಕೇಂದ್ರ ಸ್ಥಾಪಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ.
ಬಸವನಗುಡಿ, ಮಲ್ಲೇಶ್ವರ ಮತ್ತು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ವನಿತಾ ಸಹಾಯವಾಣಿ ಕಚೇರಿ ಇದೆ. ಮಹಿಳೆಯರ ಮೇಲೆ ದೌರ್ಜನ್ಯ, ಕೌಟುಂಬಿಕ ಸಮಸ್ಯೆ, ದಂಪತಿ ಮಧ್ಯೆ ವಿರಸಕ್ಕೆ ಸಂಬಂಧಿಸಿದ 50ಕ್ಕೂ ಅಧಿಕ ಪ್ರಕರಣಗಳು ಪ್ರತಿದಿನ ಇಲ್ಲಿ ದಾಖಲಾಗುತ್ತಿದ್ದವು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಆದರೆ ಇತ್ತೀಚೆಗೆ ಸಹಾಯವಾಣಿಯಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಪ್ತ ಸಮಾಲೋಚಕರಿಗೆ ಪ್ರತಿ ಪ್ರಕರಣವನ್ನು ಸೈಕ್ತ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿ ನಗರದ ಉಪ್ಪಾರಪೇಟೆ, ಮಾರತ್ತಹಳ್ಳಿ ಮತ್ತು ಪಲಕೇಶಿನಗರದಲ್ಲಿ ಹೊಸ ವನಿತಾ ಸಹಾಯವಾಣಿ ಕೇಂದ್ರ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಕೇಂದ್ರದಲ್ಲಿ ಅಧಿಕ ಪ್ರಕರಣ ದಾಖಲಾಗುತ್ತಿದ್ದು, ವನಿತಾ ಸಹಾಯವಾಣಿ ಮೊರೆ ಹೋದ ಬಹುತೇಕರು ಸಮಸ್ಯೆ ಬಗೆಹರಿಸಿಕೊಂಡು ಉತ್ತಮ ರೀತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಪ್ರತಿದಿನ ಒಬ್ಬ ಆಪ್ತ ಸಮಾಲೋಚಕರ ಬಳಿ ಕನಿಷ್ಠ 15 ಪ್ರಕರಣಗಳು ಬರುತ್ತವೆ. ಈ ಹಿನ್ನೆಲೆಯಲ್ಲಿ ಎಲ್ಲ ಪ್ರಕರಣಗಳ ಕೂಲಂಕುಷ ನಿರ್ವಹಣೆ ಕಷ್ಟವಾಗುತ್ತಿದ್ದು ನೂತನ ಸಹಾಯವಾಣಿ ತೆರೆಯಲು ಮುಂದಾಗಿದೆ.