ವಿಧಾನಸಭಾ ಚುನಾವಣೆ : ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ!
ಬೆಂಗಳೂರು, ಏಪ್ರಿಲ್ 25 : ರಾಜ್ಯ ವಿಧಾನಸಭಾ ಚುನಾವಣೆ ಬಿಸಿ ನಿಧಾನವಾಗಿ ಏರುತ್ತಿದೆ. ಎಲ್ಲಿ ನೋಡಿದರಲ್ಲಿ ರಾಜಕಾರಣಿಗಳ ದಂಡು. ಕಾಲನಿ ಮಟ್ಟದ ನಾಯಕರಿಂದ ಹಿಡಿದು ರಾಷ್ಟ್ರೀಯ ನಾಯಕರವರೆಗೆ ಎಲ್ಲರೂ ಈ ಬಿರು ಬಿಸಿಲಿನಲ್ಲಿ ಮತ ಬೇಟೆ ಆರಂಭಿಸಿದ್ದಾರೆ. ರಣೋನ್ಮಾದ ಎಲ್ಲೆಡೆ ಭರ್ಜರಿಯಾಗಿ ಸೃಷ್ಟಿಯಾಗಿದೆ.
ಚುನಾವಣೆ ನಡೆಸಲು ಚುನಾವಣಾ ಆಯೋಗ ಖರ್ಚು ಮಾಡಲಿರುವುದು ನೂರಿನ್ನೂರು ಕೋಟಿಯಷ್ಟೇ. ಆದರೆ ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ಹರಿಸಲಿರುವ ಮೊತ್ತ ಕೇಳಿದರೆ ಕರ್ನಾಟಕದ ಮಹಾಜನತೆ ದಿಗ್ಬ್ರಾಂತರಾಗುವುದು ಖಚಿತ. ಏಕೆಂದರೆ ಈ ಮೊತ್ತದ ಲೆಕ್ಕಾಚಾರ ಕೂಡಾ ಕಷ್ಟದ ಕೆಲಸ.
2018 ಚುನಾವಣೆ ಕಣದಲ್ಲಿರುವ ರಾಜಕೀಯ ಪಕ್ಷಗಳ ಪಟ್ಟಿ
ಇಲ್ಲಿದೆ ಒಂದು ಸರಳ ವಿಶ್ಲೇಷಣೆ. ಪ್ರತಿಯೊಂದು ಕೇತ್ರದಲ್ಲೂ ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಕನಿಷ್ಠವೆಂದರೂ ರೂಪಾಯಿ 30 ಕೋಟಿಯಂತೂ ಖರ್ಚು ಮಾಡಲೇಬೇಕಿದೆ. ಇನ್ನು ಕೆಲ ಕೇತ್ರಗಳಲ್ಲಿ ಪ್ರಬಲ ಪಕ್ಷೇತರ ಅಭ್ಯರ್ಥಿಗಳು 40-50 ಕೋಟಿಯಷ್ಟು ಹಣಹೂಡಿಕೆಗೆ ಸಜ್ಜಾಗಿದ್ದಾರೆ. ಒಂದು ಮತಕ್ಕೆ ಕನಿಷ್ಠವೆಂದರೂ ಒಂದೂವರೆ ಸಾವಿರದಿಂದ ಎರಡು ಸಾವಿರ ಹಣ ನೀಡಲೇಬೇಕು ಎನ್ನುವ ಪರಿಸ್ಥಿತಿ ಇದೆ. ಇನ್ನು ಕಾರ್ಯಕರ್ತರ ದಿನದ ಭತ್ಯೆ, ಊಟದ ಭತ್ಯೆ, ವಾಹನ ಬಾಡಿಗೆ ಹೀಗೆ ಸಾಗುತ್ತದೆ ಲೆಕ್ಕಾಚಾರ. ಸರಾಸರಿ ಒಂದೊಂದು ಕ್ಷೇತ್ರದಲ್ಲೂ ಕನಿಷ್ಠ 100 ಕೋಟಿಯಷ್ಟು ಹಣ ಅಭ್ಯರ್ಥಿಗಳ ಕಡೆಯಿಂದ ಖರ್ಚಾಗಲಿದೆ.
ಸರಾಸರಿ 100 ಕೋಟಿ ರೂಪಾಯಿಯಂತೆ 224 ಕ್ಷೇತ್ರಗಳಲ್ಲಿ ಒಟ್ಟಾರೆ ಚುನಾವಣೆಗಾಗಿ ಹೂಡಿಕೆಯಾಗಲಿರುವ ಮೊತ್ತ 22400,00,00,000 ಮಾತ್ರ. ಅಂದರೆ ರಾಜ್ಯದ ಯಾವುದಾದರೊಂದು ಮಹತ್ವದ ನೀರಾವರಿ ಯೋಜನೆ ಅನುಷ್ಠಾನಗೊಳಿಸಬಹುದು ಇಲ್ಲವೆ ಕನಿಷ್ಠ 30 ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಕಟ್ಟಬಹುದು.
ರಾಜ್ಯದಲ್ಲಿ 5 ಕೋಟಿ ದಾಟಿದ ಮತದಾರರ ಸಂಖ್ಯೆ
ಅಂದಹಾಗೆ ಬಹುತೇಕ ಕ್ಷೇತ್ರಗಳಲ್ಲಿ ಗೆಲ್ಲುವ ಕುದುರೆ ಎಂಬ ಹಣೆಪಟ್ಟಿ ಹೊತ್ತಿರುವ ಅಭ್ಯರ್ಥಿಗಳು ಸುಮಾರು ನೂರು ಕೋಟಿಯಷ್ಟು ಹಣ ತೊಡಗಿಸಲೂ ಸಿದ್ಧರಿದ್ದಾರೆ. ಹೀಗಾಗಿ ಈ ಮೊತ್ತ ಸುಮಾರು 30 ಸಾವಿರ ಕೋಟಿಗೆ ಹಿಗ್ಗುವ ಸಾಧ್ಯತೆ ಇದೆ. ಯಾರದ್ದೋ ಹಣ; ಯಲ್ಲಮ್ಮನ ಜಾತ್ರೆ ಎನ್ನುವ ಹಾಗಿದೆ ಪರಿಸ್ಥಿತಿ. ಇಷ್ಟು ದೊಡ್ಡ ಮಟ್ಟದಲ್ಲಿ ಹಣದ ಹೊಳೆಯೇ ಹರಿಯುತ್ತಿರುವಾಗ ಒಳ್ಳೆಯ ಅಭ್ಯರ್ಥಿಗಳಿಗೆ ಕಾಲ ಎಲ್ಲಿದೆ?