'ಮೂರು ತಲೆಮಾರುಗಳ ಮಿಲನ'ದಲ್ಲಿ ಬಾಲ ಪ್ರತಿಭೆಗಳ ಅನಾವರಣ
ಬೆಂಗಳೂರು, ಜನವರಿ 22: ಬನಶಂಕರಿಯ 2ನೇ ಹಂತದಲ್ಲಿರುವ ಜ್ಞಾನಜ್ಯೋತಿ ಹಿರಿಯ ನಾಗರಿಕರ ವೇದಿಕೆ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ 'ಮೂರು ತಲೆಮಾರುಗಳ ಮಿಲನ' ಕಾರ್ಯಕ್ರಮವು ಪ್ರತಿಭಾ ಬಾಲ ಮಂದಿರದಲ್ಲಿ ಯಶಸ್ವಿಯಾಗಿ ಜರುಗಿತು.
ಈ ವಿಭಿನ್ನ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕ ವೇದಿಕೆಯ ಹಿರಿಯ ಸದಸ್ಯರ ಮಕ್ಕಳು ಹಾಗೂ ಮೊಮ್ಮಕ್ಕಳು ಸೇರಿ ಕೆಲ ಸಮಯವನ್ನು ನಕ್ಕು, ನಲಿದು, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸವಿದರು.
ವಿವಿಧ ಮಕ್ಕಳು ನಾನಾ ರೀತಿಯ ವೇಷಭೂಷಣಗಳನ್ನು ತೊಟ್ಟು, ಮಿಮಿಕ್ರಿ, ನೃತ್ಯ, ಗಾಯನ ಮುಂತಾದ ಅನೇಕ ಸಾಂಸ್ಕೃತಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಎಲ್ಲರ ಮೆಚ್ಚುಗೆ ಗಳಿಸಿದರು.
ಮಧ್ಯಾಹ್ನ 3:45ಕ್ಕೆ ಆರಂಭವಾದ ಕಾರ್ಯಕ್ರಮದಲ್ಲಿ ಮಯೂರಾ ಅವರು ಸ್ವಾಗತ ಕೋರಿದರು. ಸವಿತಾ ಶ್ರೀರಾಮ್ ಅವರು ಕಾರ್ಯಕ್ರಮ ನಿರೂಪಿಸಿದರೆ, ಶುಭಾ ಸಂತೋಷ್ ಹಾಗೂ ರೇಷ್ಮಾ ಪೈ ಕಾರ್ಯಕ್ರಮ ನಡೆಸಿಕೊಟ್ಟರು.
ಸುಮಾರು 23 ಮಕ್ಕಳು ವೇದಿಕೆಯ ಮೇಲೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಅದರಲ್ಲೂ ಸಮರ್ಥನ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ವಿಹಾಳ ಭಾವಗೀತೆಗಳು ಅಪಾರ ಮೆಚ್ಚುಗೆ ಗಳಿಸಿದವು.
ಸ್ನೇಹಾ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮಕ್ಕೆ ತೆರೆಬಿತ್ತು.