ಉಕ್ಕಿನ ಸೇತುವೆ ವಿರುದ್ಧ ನಾಗರಿಕರ ಉಗ್ರ ಹೋರಾಟ
ಬೆಂಗಳೂರು, ಅಕ್ಟೋಬರ್, 21: ಉಕ್ಕಿನ ಸೇತುವೆ ವಿರೋಧಿಸಿ ಬೆಂಗಳೂರಿನ ನಾಗರಿಕರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ರಾಜರಾಜೇಶ್ವರಿನಗರದಿಂದ ಮಾನ್ಯತಾ ಟೆಕ್ ಪಾರ್ಕ್ ವರೆಗೆ ಮತ್ತು ಮಲ್ಲೇಶ್ವರಂ, ವಸಂತ್ ನಗರ್, ಚರ್ಟ್ ಸ್ಟ್ರೀಟ್, ರಂಗಶಂಕರ ಜಯನಗರ ಟಿಟಿಎಂಸಿ ಸೇರಿದಂತೆ ನಗರದ ಹಲವು ಕಡೆಗಳಲ್ಲಿ ಯೋಜನೆ ಕೈಬಿಡುವಂತೆ ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನ ಆರಂಭವಾಗಿದೆ.
ಈ ಅಭಿಯಾನದಲ್ಲಿ ನೂರಾರು ಸ್ವಯಂ ಸೇವಕರು ಸೇರಿಕೊಂಡು ಸಹಸ್ರಾರು ಜನರಿಗೆ ಉಕ್ಕಿನ ಸೇತುವೆ ನಿರ್ಮಾಣದಿಂದ ಆಗುವ ದುಷ್ಪಪರಿಣಾಮಗಳ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಬೆಂಗಳೂರು ಉಳಿವಿಗಾಗಿ ಯುವಕರು, ವೃದ್ಧರು, ವಿದ್ಯಾರ್ಥಿಗಳು ಹೀಗೆ ಹಲವರು ಭಾಗವಹಿಸಿ ಉಕ್ಕಿನ ಸೇತುವೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಉಕ್ಕಿನ ಸೇತುವೆ ಯೋಜನೆ ಕೈಬಿಡುವಂತೆ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಕಾರ್ಯಕರ್ತರು ಸಿದ್ಧರಾಗಿದ್ದರು. ಆದರೆ ರಾಜ್ಯಪಾಲರನ್ನು ಭೇಟಿಯಾಗಲು ಸಾಧ್ಯವಾಗದ್ದರಿಂದ ಮನವಿ ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ಶೀಘ್ರದಲ್ಲೇ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದು ನಾಗರಿಕರು ಮಾಧ್ಯಮಗಳಿಗೆ ಇಂದು ತಿಳಿಸಿದರು.
ಹಿಂದಿನ ಸರ್ಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ವಿಪಕ್ಷ ನಾಯಕ ಮುಖಂಡ ಆರ್.ಅಶೋಕ ಅವರು ಸಹ ಉಕ್ಕಿನ ಸೇತುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅವರ ಬೆಂಬಲವೂ ನಾಗರಿಕರ ಅಭಿಯಾನಕ್ಕೆ ಇದೆ ಎಂದು ಸ್ವಯಂ ಸೇವಕರು ತಿಳಿಸಿದ್ದಾರೆ.
ಉಕ್ಕಿನ ಸೇತುವೆ ದುಷ್ಪರಿಣಾಮಗಳ ಕುರಿತು ಮತ್ತಷ್ಟು ಜನರಿಗೆ ತಿಳಿಸಿ ನಗರದ ಸೌಂದರ್ಯ ಕಾಪಾಡಲು ಶ್ರಮಿಸಲಾಗುವುದು ಎಂದು ಸ್ವಯಂ ಸೇವರಕು ಹೇಳಿದರು.
ಉಕ್ಕಿನ ಸೇತುವೆ ಯೋಜನೆ ವಿರೋಧಿಸಿ ಶನಿವಾರ (ಅ.22) ಮೆಜೆಸ್ಟಿಕ್ ಸೇರಿದಂತೆ ನಗರದ ವಿವಿಧೆಡೆ ಮನವಿ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸುವ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಸೆಂಟ್ ಜೋಸೆಫ್ ಕಲಾ ಮತ್ತು ವಿಜ್ಞಾನದ ವಿಭಾಗದ ವಿದ್ಯಾರ್ಥಿಗಳೂ ಸಹ ಶನಿವಾರ ಅಭಿಯಾನದಲ್ಲಿ ಭಾಗವಹಿಸಿ ಸಹಿ ಸಂಗ್ರಹ ಮಾಡಲಿದ್ದಾರೆ ಎಂದು ಸ್ವಯಂ ಸೇವಕರು ತಿಳಿಸಿದರು.
ಶನಿವಾರ ಮುಂಜಾನೆಯಿಂದ ನೂರಾರು ಸ್ವಯಂ ಸೇವಕರು ಸೇರಿ ಉಕ್ಕಿನ ಸೇತುವೆ ನಿರ್ಮಾಣವಾಗುತ್ತಿರುವ ಪಥದಲ್ಲಿ ಕಡಿಯಲು ಉದ್ದೇಶಿಸಿರುವ ಮರಗಳನ್ನು ಸಮೀಕ್ಷೆ ನಡೆಸಲಾಗುತ್ತಿದ್ದು, ಎಲ್ಲರೂ ಬಂದು ಭಾಗವಹಿಸಿ ಎಂದು ಸ್ವಯಂ ಸೇವಕರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಭಾನುವಾರ ತಜ್ಞರಿಂದ ಈ ಕುರಿತು ಸಲಹೆ ಪಡೆಯಲಾಗುವುದು ಮತ್ತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಸ್ವಯಂ ಸೇವಕರು ತಿಳಿಸಿದರು.
ನಾವು ಆರಂಭಿಸಿರುವ ಸಹಿ ಸಂಗ್ರಹ ಅಭಿಯಾನಕ್ಕೆ ನಿಮ್ಮದೂ ಒಂದು ಸಹಿ ಇರಲಿ ಎಂದು ಸ್ವಯಂ ಸೇವಕರು ಮನವಿ ಮಾಡಿದ್ದಾರೆ.