ಅಣ್ಣನ ಸಾವಿಗೆ ನೊಂದ ಪರೋಪಕಾರಿ ಯಮಧರ್ಮನ ಕತೆ ಕೇಳಿ
Recommended Video
ಬೆಂಗಳೂರು, ಆಗಸ್ಟ್ 1: ಬೆಂಗಳೂರು ನಗರದ ಟ್ರಾಫಿಕ್ನಲ್ಲಿ ನಿತ್ಯ ಪ್ರಾಣ ಕಳೆದುಕೊಳ್ಳುವವರು ಹಲವಾರು ಹಲ್ಮೆಟ್ಗಳಿಲ್ಲದೆ ಬೈಕ್ಗಳ ಚಾಲನೆ, ಮಿತಿಮೀರಿದ ವೇಗ ಹಾಗೂ ಸಂಚಾರಿ ನಿಯಮ ಉಲ್ಲಂಘನೆ ಕಾರಣಕ್ಕಾಗಿ ಹಲವಾರು ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ.
ಇನ್ನೂ ಕೆಲವು ಶಾಶ್ವತವಾಗಿ ಅಂಗವಿಕಲರಾಗುತ್ತಾರೆ. ಇಂತಹ ಅವಘಡಗಳನ್ನು ತಪ್ಪಿಸಲು ಟ್ರಾಫಿಕ್ ಪೊಲೀಸರ ಜೊತೆಗೂಡಿ ಯಮನ ವೇಷಧಾರಿಯಾಗಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ರಂಗಭೂಮಿ ಕಲಾವಿದ ವೀರೇಶ್ ಮುತ್ತಿನಮಠ ಕಳೆದ ಕೆಲವು ದಿನಗಳಿಂದ ನಗರದ ಟ್ರಾಫಿಕ್ ನಲ್ಲಿ ಕೇಂದ್ರ ಬಿಂದುವಾಗಿದ್ದಾರೆ.
ಯಮ ಬರ್ತಾನೆ, ನಿಮ್ಮ ಬೈಕ್ ಹಿಂದೆ ಕೂರ್ತಾನೆ, ಹೆಲ್ಮೆಟ್ ಹಾಕ್ತೀರಾ ಇಲ್ವಾ?
ಸಾರ್ವಜನಿಕರ ಹಿರದೃಷ್ಟಿಯಿಂದ ಜನಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡಿರುವ ಕಲಾವಿದ ವೀರೇಶ್ ಈ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳುವುದರ ಹಿಂದಿನ ದಾರುಣ ಕತೆಯನ್ನು ಬಿಚ್ಚಿಟ್ಟಿದ್ದಾರೆ. ಟ್ರಾಫಿಕ್ ಪೊಲೀಸರು ನೀಡುವ ಗೌರವ ಧನಕ್ಕೆ ಮಾತ್ರವಲ್ಲದೆ ತಮ್ಮ ವಯಕ್ತಿಕ ಜೀವನದ ಘಟನೆಯ ಕಾರಣದಿಂದಾಗಿ ಟ್ರಾಫಿಕ್ ನಿಯಮ ಉಲ್ಲಂಘನೆ ವಿರುದ್ಧ ಜನಜಾಗೃತಿ ಅಭಿಯಾನವನ್ನೇ ಆರಂಭಿಸಿದ್ದಾರೆ.
ಇತ್ತೀಚೆಗೆ ಒನ್ ಇಂಡಿಯಾ ಕಚೇರಿಗೆ ಭೇಟಿ ನೀಡಿದ್ದ ವೀರೇಶ್ ತಾವು ಯಮಧರ್ಮನ ಪಾತ್ರಧಾರಿಯಾಗಿ ಟ್ರಾಫಿಕ್ನಲ್ಲಿ ನಿಂತು ನಿತ್ಯ ಜನಜಾಗೃತಿ ಮೂಡಿಸುತ್ತಿರುವುದರ ಹಿಂದಿನ ಮನಮಿಡಿಯುವ ಕತೆಯನ್ನು ಬಿಚ್ಚಿಟ್ಟಿದ್ದಾರೆ. ವೀರೇಶ್ ಬೆಂಗಳೂರಿನ ರವೀಂದ್ರ ಕಲಾಕೇತ್ರದಲ್ಲಿ ಹಲವಾರು ರಂಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಇವರ ಸಹೋದರ ಮರಿಸ್ವಾಮಿ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನೆಲೆಸಿದ್ದರು, ವೀರೇಶ್ ಕೂಡ ಮೂಲತಃ ಗಂಗಾವತಿಯವರು, ಸಹೋದರ ಮರಿಸ್ವಾಮಿ ಹೋಮ್ ಗಾರ್ಡ್ ಆಗಿದ್ದ ಕಳೆದ ವರ್ಷ 2017ರ ಜೂನ್ 24 ರಂದು ನಿಧನರಾಗಿದ್ದಾರೆ. ಅವರ ನಿಧನದ ಹಿನ್ನೆಲೆಯೇ ವೀರೇಶ್ ಬದುಕಿನಲ್ಲಿ ಅಗಾಧ ಪರಿಣಾಮ ಬೀರಿದೆ.
ಟ್ರಾಫಿಕ್ ಸಿಗ್ನಲ್ನಲ್ಲಿ ನಿಂತು ಅಪಘಾತದ ಬಗ್ಗೆ ಎಚ್ಚರಿಕೆ ಹಾಗೂ ಜಾಗೃತಿ ಮೂಡಿಸುತ್ತಿರುವುದು ಸಹೋದರ ಮರಿಸ್ವಾಮಿ ನಿಧನದ ಕಾರಣಕ್ಕಾಗಿಯೇ, 2017ರ ಜೂನ್ 21ರಂದು ಕೊಪ್ಪಳದಿಂದ ಗಂಗಾವತಿಗೆ ಹೊರಟಿದ್ದ ಮರಿಸ್ವಾಮಿ ಬೈಕ್ ಅಪಘಾತದಲ್ಲಿ ಮೃತಪಟ್ಟರು, ಹಿಂಬದಿ ಸವಾರರಾಗಿದ್ದ ಅವರು ಹೆಲ್ಮೆಟ್ ಧರಿಸಿರಲಿಲ್ಲ. ಹೀಗಾಗಿ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಅಪಘಾತ ಸಂಭವಿಸಿದ ಸ್ಥಳದಿಂದ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಯಿತಾದರೂ ಚಿಕಿತ್ಸೆ ಫಲಿಸಲಿಲ್ಲ.
ಮರಿಸ್ವಾಮಿ ನಿಧನರಾದ ಬಳಿಕ ವೀರೇಶ್ ಮೇಲೆ ತುಂಬಾ ಪರಿಣಾಮ ಬೀರಿದೆ. ಯಾವುದೇ ವ್ಯಕ್ತಿ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಬಾರದು ಎನ್ನುವ ಸಾರ್ವಜನಿಕ ಕಳಕಳಿ ಹಾಗೂ ವಯಕ್ತಿಕ ಬದುಕಿನಲ್ಲಿ ಉಂಟಾದ ದುರ್ಘಟನೆ ಕಾರಣಕ್ಕಾಗಿ ಬೆಂಗಳೂರು ಪೊಲೀಸರ ಜತೆಗೂಡಿ ಯಮಧರ್ಮನ ವೇಷಧಾರಿಯಾಗಿ ಅವರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಈ ಮೊದಲು ಟ್ರಾಫಿಕ್ ಪೊಲೀಸರು ಹಲವಾರು ಕಲಾವಿದರನ್ನು ಸಂಪರ್ಕಿಸಿದರೂ ಕೂಡ ರಸ್ತೆಯಲ್ಲಿ ಯಮಧರ್ಮನ ವೇಧಾರಿಯಾಗಲು ಯಾರೂ ಮುಂದೆ ಬಂದಿರಲಿಲ್ಲ.ಆದರೆ ಕಲಾವಿದ ವೀರೇಶ್ ತಮ್ಮ ಬದುಕಿನಲ್ಲಾಗಿರುವ ದುರ್ಘಟನೆ ಕಾರಣದಿಂದ ಬೇರೆಯವರ ಬದುಕಿನಲ್ಲೂ ಇಂತಹ ಅವಘಡಗಳು ಸಂಭವಿಸಬಾರದು ಎನ್ನುವ ಕಾರಣಕ್ಕೆ ಇಂತಹ ಅಭಿಯಾನದಲ್ಲಿ ಪಾಲ್ಗೊಳ್ಳಲು ಒಪ್ಪಿದರು. ಒನ್ ಇಂಡಿಯಾದ ಬಳಿ ತಮ್ಮ ಜೀವನದಲ್ಲಿ ನಡೆದಿರುವ ಘಟನೆಗಳನ್ನು ಹೇಳಿಕೊಳ್ಳುವಾಗ ವೀರೇಶ್ ಗದ್ಗದಿತರಾದರು.