ಕರ್ನಾಟಕ ಬಂದ್: ವಾಟಾಳ್ ಮತ್ತು ತಂಡ ಪೊಲೀಸ್ ವಶಕ್ಕೆ
ಬೆಂಗಳೂರು, ಜೂನ್ 12: ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕಾರ್ಪೋರೇಶನ್ ವೃತ್ತದ ಬಳಿ ಪ್ರತಿಭಟನೆ ನಡೆಸುತ್ತಿದ್ದ ವಾಟಾಳ್ ನಾಗರಾಜ್ ಮತ್ತು ಅವರ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದರು.
ಪ್ರತಿಭಟನೆಯ ವೇಳೆ ವಾಟಾಳ್ ನಾಗರಾಜ್ ಅವರ ಶರ್ಟ್ ಹರಿದುಹೋದ ಬಗ್ಗೆಯೂ ವರದಿಯಾಗಿದೆ! ವಶಕ್ಕೆ ಪಡೆದ ಪ್ರತಿಭಟನಾಕಾರರನ್ನು ಪೊಲೀಸರು ಬಿಎಂಟಿಸಿ ಬಸ್ ನಲ್ಲಿ ಕರೆದೊಯ್ದರು.
ಬೆಂಗಳೂರು ಮಹಾನಗರದಲ್ಲಿ ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಹಾದಾಯಿ ಸೇರಿದಂತೆ ಮತ್ತಷ್ಟು ಯೋಜನೆಗಳನ್ನು ಜಾರಿಗೆ ತರುವಲ್ಲಿ ರಾಜ್ಯ ಸರಕಾರ ವಿಫಲವಾಗಿರುವುದನ್ನು ಖಂಡಿಸಿ, ಇಂದು ( ಜೂ. 12) ವಿವಿಧ ಕನ್ನಡಪರ ಸಂಘಟನೆಗಳು ಬಂದ್ ಗೆ ಕರೆನೀಡಿದ್ದವು.
ಕರ್ನಾಟಕ ಬಂದ್ : ಬಸ್ ಸಂಚಾರ, ಹೋಟೆಲ್, ಸ್ಕೂಲ್ ಓಪನ್ ಇರುತ್ತಾ?
ಆದರೆ ರಾಜಧಾನಿಯಲ್ಲಿ ಬಂದ್ ಗೆ ಯಾವುದೇ ರೀತಿಯ ಬೆಂಬಲ ಸಿಕ್ಕಂತಿಲ್ಲ. ಬೆಳಗ್ಗೆ ಉದ್ಯಾನ ನಗರಿಯಲ್ಲಿ ಜಿಟಿ ಜಿಟಿ ಸುರಿಯುತ್ತಿರುವ ಮಳೆಯ ನಡುವಲ್ಲೂ ಜನರು ಎಂದಿನಂತೇ ತಮ್ಮ ತಮ್ಮ ಕೆಲಸಗಳಿಗೆ ತೆರಳುತ್ತಿರುವುದು ಕಂಡುಬರುತ್ತಿದೆ. ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ ಗಳೂ ಎಂದಿನಂತೇ ಕಾರ್ಯನಿರ್ವಹಿಸುತ್ತಿವೆ. ಆಟೋಗಳು ಸಹ ಮಾಮೂಲಿನಂತೆ ಓಡಾಡುತ್ತಿವೆ.
ಅಂಗಡಿ ಮುಂಗಟ್ಟುಗಳೂ ತೆರೆದಿವೆ. ಬಂದ್ ಹಿನ್ನೆಲೆಯಲ್ಲಿ ಕೆಲವು ಶಾಲೆಗಳು ಶಾಲೆಯ ಆಡಳಿತ ಮಂಡಳಿಯ ನಿರ್ಧಾರದ ಮೇಲೆ ಮುನ್ನೆಚ್ಚರಿಕೆಯ ದೃಷ್ಟಿಯಿಂದ ರಜಾ ಘೋಷಣೆ ಮಾಡಿದ್ದರೂ, ಹೆಚ್ಚಿನ ಸಂಖ್ಯೆಯ ಶಾಲೆಗಳು ಎಂದಿನಂತೇ ಕಾರ್ಯನಿರ್ಹಹಿಸುತ್ತಿವೆ. ಯಾವುದೇ ಕಂಪೆನಿಗಳಿಗೆ ರಜಾ ಘೋಷಣೆಯಾಗಿಲ್ಲ.
ಬೆಂಗಳೂರು ಪೆಟ್ರೋಲಿಯಂ ವಿತರಕರ ಒಕ್ಕೂಟ ಬಂದ್ ಗೆ ನೈತಿಕ ಬೆಂಬಲ ನೀಡುವುದಾಗಿ ಹೇಳಿದ್ದರೂ, ಪೆಟ್ರೋಲ್ ಬಂಕ್ ಗಳನ್ನು ಮುಚ್ಚುವುದಿಲ್ಲ ಎಂದು ಒಕ್ಕೂಟ ಹೇಳಿದೆ.
ಮಲ್ಟಿಪ್ಲೆಕ್ಸ್ ಗಳು ಸಹ ಯಾವ ಅಡ್ಡಿಯಿಲ್ಲದೆ ಕೆಲಸ ನಿರ್ವಹಿಸುತ್ತಿವೆ.
ಜೂನ್ 12ರಂದು ಕರ್ನಾಟಕ ಬಂದ್ ಗೆ ಕರೆ: ವಾಟಾಳ್ ನಾಗರಾಜ್
ಪ್ರತಿಭಟನಾಕಾರರು 10 ಗಂಟೆಗೆ ಟೌನ್ ಹಾಲ್ ಬಳಿ ಪ್ರತಿಭಟನೆ ನಡೆಸುವ ನಿರೀಕ್ಷೆ ಇರುವುದರಿಂದ ಟೌನ್ ಹಾಲ್ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರತಿಭಟನೆಗೆ ಅಧಿಕೃತ ಅನುಮತಿ ನೀಡಲಾಗಿಲ್ಲ.
ಬಾಗಲಕೋಟೆ, ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಒತ್ತಾಯ ಪೂರ್ವಕವಾಗಿ ಬಂದ್ ಗೆ ಬೆಂಬಲ ನೀಡುವಂತೆ ಆಗ್ರಹಿಸಿ, ಅಂಗಡಿ ಮುಂಗಟ್ಟುಗಳನ್ನು ಪ್ರತಿಭಟನಾಕಾರರೇ ಮುಚ್ಚುತ್ತಿರುವ ದೃಶ್ಯ ಕಂಡುಬರುತ್ತಿದೆ.