ಆಗ ಖರ್ಗೆಗೆ ಅರಸು ಪ್ರಶಸ್ತಿ, ಈಗ ದೇವೇಗೌಡರಿಗೆ ವಾಲ್ಮೀಕಿ ಪುರಸ್ಕಾರ!
Recommended Video
ಬೆಂಗಳೂರು, ಅಕ್ಟೋಬರ್ 24: ರಾಜ್ಯ ಸರ್ಕಾರ ನೀಡುವ ಪ್ರತಿಷ್ಠಿತ ಲಕ್ಷಗಟ್ಟಲೆ ಮೊತ್ತದ ಬಹುಮಾನ ಇರುವಂತಹ ಪ್ರಶಸ್ತಿಗಳು ರಾಜ್ಯದ ಬಹುದೊಡ್ಡ ರಾಜಕಾರಣಿಗಳಿಗೆ ಸಂದಾಯವಾಗುತ್ತಿರುವುದು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಈ ಹಿಂದೆ 2016ರಲ್ಲಿ ದಿವಂಗತ ಮುಖ್ಯಮಂತ್ರಿ ದೇವರಾಜ ಅರಸು ಪ್ರತಿಷ್ಠಿತ ಪ್ರಶಸ್ತಿಯನ್ನು ಸಂಸತ್ತಿನಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಲಾಗಿತ್ತು.ಇದೀಗ ಸಮ್ಮಿಶ್ರ ಸರ್ಕಾರದ ಬೆನ್ನೆಲುಬಾಗಿರುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರಿಗೆ ವಾಲ್ಮೀಕಿ ಪ್ರಶಸ್ತಿಯನ್ನು ನೀಡಿರುವುದು ಕಾಕತಾಳಿಯವೇ ಎಂಬಂತಾಗಿದೆ.
ಮಾಜಿ ಪ್ರಧಾನಿ ದೇವೇಗೌಡರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ
ರಾಜ್ಯ ಸರ್ಕಾರ ದಿವಂಗತ ದೇವರಾಜ ಅರಸು ಅವರ ಹೆಸರಿನಲ್ಲಿ ಹಲವಾರು ವರ್ಷಗಳಿಂದ ಪ್ರಶಸ್ತಿ ನೀಡುತ್ತಾ ಬಂದಿದೆ. ಆದರೆ 2016ರಲ್ಲಿ ಅಂದು ಪುರಸ್ಕಾರ ಮೊತ್ತವನ್ನು 5ಲಕ್ಷ ರೂಗಳಿಗೆ ಏರಿಸಲಾಗಿತ್ತು. ಅದೇ ವರ್ಷದಲ್ಲಿ ಆ ಪ್ರಶಸ್ತಿಯನ್ನು ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಿದ್ದರು.
ವಿಶೇಷವೆಂದರೆ ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯ ಅವರ ಬಳಿಕ ಎರಡು ವರ್ಷದ ಅವಧಿಗೆ ಮುಖ್ಯಮಂತ್ರಿಯಾಗುತ್ತಾರೆ ಎಂಬ ಮಾತು ಚಾಲ್ತಿಯಲ್ಲಿತ್ತು,ಆದರೆ ಇದ್ದಕ್ಕಿದ್ದಂತೆ ಖರ್ಗೆಯವರ ಪುತ್ರನಿಗೆ ಸಚಿವ ಸ್ಥಾನ ನೀಡಿದ ಸರ್ಕಾರ ಅವರಿಗೆ ಅದೇ ವರ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅರಸು ಪ್ರಶಸ್ತಿ ನೀಡಿತ್ತು.
ಆ ವೇಳೆ ಖರ್ಗೆ ಅವರಿಗೆ ಅರಸು ಪ್ರಶಸ್ತಿ ನೀಡಿರುವುದು ಚರ್ಚೆಗೆ ಕಾರಣವಾಗಿತ್ತು, ಖರ್ಗೆ ಅವರಿಗಿಂತ ವಯಸ್ಸಿನಲ್ಲಿ ಮತ್ತು ಸೇವೆಯಲ್ಲಿ ಹಿರಿಯರಾದ ಅನೇಕರಿಗೆ ಹಿಂದಿನ ವರ್ಷಗಳಲ್ಲಿ ಪ್ರಶಸ್ತಿ ನೀಡಲಾಗಿತ್ತು.ಆದರೆ ಇದ್ದಕ್ಕಿದ್ದಂತೆ ಪ್ರಶಸ್ತಿ ಮೊತ್ತ ಹೆಚ್ಚಿಸಿ ಖರ್ಗೆ ಅವರಿಗೆ ಪ್ರಶಸ್ತಿ ನೀಡಿದ್ದರಿಂದ ಅಂದಿನ ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ ತೀವ್ರ ಟೀಕೆಗೆ ಒಳಗಾಗಿದ್ದರು.
ಉಪಚುನಾವಣೆ ಬಿಟ್ಟು ಲಂಡನ್ಗೆ ಹಾರುತ್ತಿದ್ದಾರೆ ದೇವೇಗೌಡರು
ಇದೀಗ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿರುವುದು ಅದೇ ಮಲ್ಲಿಕಾರ್ಜುನ್ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ , ಅವರ ಸಮಾಜ ಕಲ್ಯಾಣ ಖಾತೆಗೆ ಸೇರಿದ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯು ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿಯವರ ತಂದೆ ದೇಶದ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರಿಗೆ ನೀಡಲಾಗುತ್ತಿದೆ.
ಇದೇ ಪ್ರಶಸ್ತಿಯನ್ನು ಕಳೆದ ವರ್ಷ ಮಾಜಿ ಸಚಿವ ಹಾಗೂ ಹಾಲಿ ವಿಧಾನಪರಿಷತ್ ಸದಸ್ಯ ವಿಎಸ್ ಉಗ್ರಪ್ಪ ಅವರ ಮಾವ ವೀರಣ್ಣ ಅವರಿಗೆ ನೀಡಲಾಗಿತ್ತು. ವೀರಣ್ಣ ಅವರ ನಂತರ ದೇವೇಗೌಡರಿಗೆ ಆ ಪ್ರಶಸ್ತಿ ನೀಡುತ್ತಿರುವುದು ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ.
ವ್ಯಕ್ತಿಚಿತ್ರ: ಕರ್ನಾಟಕದ 'ಕಿಂಗ್ ಮೇಕರ್' ದೇವೇಗೌಡ
ದೇವೇಗೌಡರು ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಎಷ್ಟು ಅರ್ಹರೋ ಅಷ್ಟೇ ಖರ್ಗೆ ಕೂಡ ಅರಸು ಪ್ರಶಸ್ತಿಗೆ ಅಷ್ಟೇ ಅರ್ಹರಾಗಿದ್ದರು.ದೇವೇಗೌಡರು ಅರ್ಹರೇ ಆಗಿದ್ದಾರೆ. ಆದರೆ ಪ್ರಶಸ್ತಿ ನೀಡುತ್ತಿರುವ ಸಮಯ ಹಾಗೂ ಸಂದರ್ಭ ಸರಿಇಲ್ಲ, ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಇರುವಾಗ ಪುತ್ರನೇ ಸಿಎಂ ಆಗಿರುವಾಗ ದೇವೇಗೌಡರು ಪ್ರಶಸ್ತಿ ಪಡೆಯುತ್ತಿರುವುದು ಎಷ್ಟು ಸೂಕ್ತ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದಾರೆ.
ಈ ಹಿಂದೆಯೂ ಖರ್ಗೆ ಅವರು ಅರಸು ಪ್ರಶಸ್ತಿ ಪಡೆದಾಗ ಪುತ್ರ ಸಚಿವರಾಗಿದ್ದರು. ಹೀಗಾಗಿ ಆಯಾ ಸರ್ಕಾರಗಳಿಗೆ ಬೆನ್ನೆಲುಬಾಗಿ ನಿಂತ ಹಿರಿಯ ನಾಯಕರಿಗೆ ಸರ್ಕಾರದಿಂದ ಪ್ರಶಸ್ತಿಗಳನ್ನು ನೀಡುತ್ತಿರುವುದು ಪ್ರಜ್ಞಾವಂತರಲ್ಲಿ ಜಿಜ್ಞಾಸೆ ಮೂಡಿಸಿದೆ.