ಮಲ್ಲೇಶ್ವರಂನಲ್ಲಿ ವಿವೇಕ ಜಯಂತಿ, ಕಲಾಂ ಸ್ಮರಣೆ
ಬೆಂಗಳೂರು, ಜನವರಿ 12: ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಮಲ್ಲೇಶ್ವರಂನ ಕೃಷ್ಣದೇವರಾಯ ಕಲಾ ಮಂದಿರದಲ್ಲಿ ನವಕರ್ನಾಟಕ ಜನಪರ ಶಕ್ತಿ ವೇದಿಕೆ ವತಿಯಿಂದ ಶುಕ್ರವಾರ 'ಯೂತ್ ಎಂಪವರ್ ಮೀಟ್' ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಬಿಜೆಪಿಯ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ, ಮಲ್ಲೇಶ್ವರಂ ಶಾಸಕ ಡಾ.ಅಶ್ವಥ್ನಾರಾಯಣ್, ಯುವ ಮೋರ್ಚಾದ ನಗರಾಧ್ಯಕ್ಷ ಸಪ್ತಗಿರಿ ಗೌಡ, ಕಳೆದ ಬಾರಿಯ ಮಿಸ್ ಇಂಡಿಯಾ ಶ್ರೀನಿಧಿ ರಮೇಶ್ ಶೆಟ್ಟಿ, ಯುವ ಸಿಇಓ ಸುಹಾಸ್ ಗೋಪಿನಾಥ್, ಪ್ರೇರಣಾತ್ಮಕ ಭಾಷಣಕಾರ ಸೃಜನ್ ಪಾಲ್ ಸಿಂಗ್ ಉದ್ಘಾಟಿಸಿದರು.
ವಿವೇಕಾನಂದರ ನೆನೆದು 'ಯುವದಿನ'ಕ್ಕೆ ಶುಭನುಡಿದ ಗಣ್ಯರು
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅರವಿಂದ ಲಿಂಬಾವಳಿ, ಪ್ರಧಾನಿ ಅವರ 'ಮನ್ ಕೀ ಬಾತ್' ಕಾರ್ಯಕ್ರಮದಲ್ಲಿ ಉಲ್ಲೇಖಿತವಾಗುತ್ತಿರುವ ಬಹುತೇಕ ವಿಷಯಗಳು ದೇಶದ ಯುವ ಜನರಿಂದ ಸೂಚಿಸಲ್ಪಟ್ಟಿರುವವು ಎಂದರು.
ಯುವಕರು ಹೊಸ ಆಲೋಚನೆಗಳೊಂದಿಗೆ ಮುಂದೆ ಬನ್ನಿ, ರಾಜ್ಯವನ್ನು ಬದಲಾಯಿಸಲು ಯುವಕರ ಭಾಗವಹಿಸುವಿಕೆ ಅಗತ್ಯ ಎಂದ ಅವರು ಯುವಕರು ನೀಡುವ ಸಲಹೆಗಳನ್ನು ಬಿಜೆಪಿಯ ಪ್ರಣಾಳಿಕೆಯಲ್ಲಿ ಸೇರಿಸಲಾಗುತ್ತದೆ, ಹಾಗೂ ಉತ್ತಮ ಸಲಹೆಗಳನ್ನು ವಿಷನ್ ಡಾಕ್ಯುಮೆಂಟ್ನಲ್ಲಿ ಸೇರಿಸಿ ಜಾರಿಗೆ ತರಲಾಗುತ್ತದೆ ಎಂದರು.
ಪ್ರಸ್ತುತ ಆಡಳಿತದಲ್ಲಿರುವ ಸರ್ಕಾರ ಇತ್ತೀಚೆಗಷ್ಟೆ 'ಯೂತ್ ಪಾಲಿಸಿ' ಒಂದನ್ನು ತಂದಿದೆ, ಆದರೆ ಆ ಬಗ್ಗೆ ಸದನದಲ್ಲಿ ಚರ್ಚೆ ಸಹ ಆಗಲಿಲ್ಲ, ಯುವಕರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದರು.
ಮಹದೇವಪುರ ಕ್ಷೇತ್ರದ ಯುವಕನ ಮಾತಿಗೆ ಮಣೆ
ರಾಜಕಾರಣಿಗಳ ವಿಐಪಿ ಹಾವಳಿ ಹೆಚ್ಚಿದ್ದಾಗ, ಮಹದೇವಪುರ ಕ್ಷೇತ್ರದ ಯುವಕನೋರ್ವ ಸಾಮಾಜಿಕ ಜಾಲತಾಣದ ಮೂಲಕ ರಾಜಕಾರಣಿಗಳ ವಿಐಪಿ ಸಂಸ್ಕೃತಿಯಿಂದ ಜನಗಳಿಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ಪ್ರಧಾನಿ ಕಚೇರಿಯ ಗಮನ ಸೆಳೆದಿದ್ದರು. ಆತನ ಸಲಹೆ ಗಂಭೀರವಾಗಿ ಪರಿಗಣಿಸಿ ರಾಜಕಾರಣಿಗಳ ಕಾರಿನ ಮೇಲಿದ್ದ ಕೆಂಪು ದೀಪ ತೆಗೆಸುವ ನಿರ್ಣಯ ಕೈಗೊಳ್ಳಲಾಯಿತು ಎಂದು ಹೇಳಿದರು.
ಸೃಜನ್ ಪಾಲ್ ಮಾತು
ಮಾಜಿ ಇಸ್ರೋ ಉದ್ಯೋಗಿ, ಪ್ರೇರಣಾಧಾಯಕ ಮಾತುಗಾರ ಸೃಜನ್ ಪಾಲ್ ಮಾತನಾಡಿ, ಕಲಾಂ ಅವರೊಂದಿಗಿನ ದಿನಗಳನ್ನು ನೆನೆಸಿಕೊಂಡರು. ಕಲಾಂ ಅವರು ಸದಾ ವಿದ್ಯಾರ್ಥಿಯಾಗಿದ್ದರು, ಅವರಿಗಿದ್ದ ಕುತೂಹಲ, ಕಲಿಯುವ ಆಸಕ್ತಿ ಅಪರಿಮಿತವಾದುದು ಎಂದರು. ನಾವೂ ಅವರಂತಾಗುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು.
ಭಾರತ ರತ್ನ ಅಬ್ದುಲ್ ಕಲಾಂ ಸ್ಫೂರ್ತಿದಾಯಕ ನುಡಿಮುತ್ತುಗಳು
ಕಲಾಂ ನೆನಪು
ಕಲಾಂ ಅವರೊಂದಿಗಿನ ದಿನಗಳನ್ನು ನೆನೆಸಿಕೊಂಡ ಸೃಜನ್ ಪಾಲ್ ಅವರು, ಅವರೊಂದಿಗೆ ನಡೆಸಿದ್ದ ಮಾತುಕತೆಯೊಂದನ್ನು ಹಂಚಿಕೊಂಡರು. ಕಲಾಂ ಅವರಿಗೆ ತನ್ನನ್ನು ರಾಷ್ಟ್ರಪತಿಯಾಗಿ, ಅಣು ವಿಜ್ಞಾನಿಯಾಗಿ, ಬಾಹ್ಯಾಕಾಶ ವಿಜ್ಞಾನಿಯಾಗಿ, ಕ್ಷಿಪಣಿ ವಿಜ್ಞಾನಿಯಾಗಿ ಜನ ನೆನೆಸಿಕೊಳ್ಳುವುದು ಇಷ್ಟವಿರಲಿಲ್ಲ ಅವರನ್ನು ದೇಶದ ಜನ ಶಿಕ್ಷಕನನ್ನಾಗಿ ಗುರುತಿಸಲಿ ಎಂಬುದು ಅವರ ಆಸೆಯಾಗಿತ್ತು ಎಂದು ಹೇಳಿದರು.
ವಯಸ್ಸಾದವರೂ ಯುವಕರೇ
ಯುವಕ ಎಂದರೆ ಯಾರು? ಯುವತ್ವವನ್ನು ವಯಸ್ಸಿನಿಂದ ಅಳೆಯಲಾಗುವುದೇ? ಎಂದು ಪ್ರಶ್ನಿಸಿದ ಸೃಜನ್, 'ಯಾರು ಹೊಸದಾಗಿ ಯೋಚಿಸುತ್ತಾರೆಯೋ, ಯಾರಿಗೆ ಕಲಿಯುವ ತುಡಿತ ಸಾಯುವುದಿಲ್ಲವೋ, ಯಾರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಮನಸ್ಸು ಚಡಪಡಿಸುತ್ತದೆಯೋ' ಅವರೆಲ್ಲರೂ ಯುವಕರೇ ಎಂದರು.
ದೇಶದ ಧ್ವಜ ಎದೆಯಲ್ಲಿರಲಿ
ಕಾರ್ಯಕ್ರಮದಲ್ಲಿ ಹಾಜರಿದ್ದ ಯುವ ವಿದ್ಯಾರ್ಥಿಗಳಿಗೆ ಸೃಜನ್ ಪಾಲ್ ಪ್ರತಿಜ್ಞೆ ಬೋಧಿಸಿದರು. 'ದೊಡ್ಡ ಕನಸ್ಸನ್ನೇ ಕಾಣುತ್ತೇವೆ, ಕಂಡ ಕನಸ್ಸಿನ ಸಾಕಾರಕ್ಕೆ ಶ್ರಮವಹಿಸಿ ದುಡಿಯುತ್ತೇವೆ, ದೇಶಕ್ಕೆ ಏನು ಕೊಡಬಹುದೆಂದು ಸದಾ ಯೋಚಿಸುತ್ತೇವೆ, ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತೇವೆ, ತಾಯಿಯನ್ನು ಸದಾ ಚೆನ್ನಾಗಿ ನೋಡಿಕೊಳ್ಳುತ್ತೇ, ಮತ್ತು ದೇಶದ ಬಗ್ಗೆ ಅಪಾರ ಗೌರವ ಹೊಂದಿರುತ್ತೇವೆ' ಎಂದು ಎಲ್ಲರೂ ಪ್ರತಿಜ್ಞೆ ಸ್ವೀಕರಿಸಿದರು.