ಕೋಟ್ಯಂತರ ರುಪಾಯಿ ನೋಟು ಬದಲಾವಣೆ ದಂಧೆ ನಡೆದದ್ದು ಹೀಗೆ
ಕರ್ನಾಟಕದಲ್ಲಿ ಸಿಕ್ಕವಲ್ಲ ಲಕ್ಷಗಟ್ಟಲೆ ಹೊಸ ನೋಟುಗಳು, ಅಷ್ಟು ಕಡಿಮೆ ಅವಧಿಯಲ್ಲಿ ಅಷ್ಟೊಂದು ಹೊಸ ನೋಟುಗಳನ್ನು ಪಡೆಯಲು ಹೇಗೆ ಸಾಧ್ಯವಾಯಿತು ಎಂಬ ರಹಸ್ಯ ಬಿಡಿಸಿಟ್ಟಿದ್ದಾರೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು.
ಬೆಂಗಳೂರು, ಡಿಸೆಂಬರ್ 9: ಹಳೇ ನೋಟುಗಳಿಗೆ ಬದಲಿಯಾಗಿ ದೊಡ್ಡ ಪ್ರಮಾಣದಲ್ಲಿ ಹೊಸ ನೋಟುಗಳನ್ನು ಪಡೆದವರು ಅನುಸರಿಸಿದ ಮಾರ್ಗ ಯಾವುದು? ಸರಕಾರದ ಅಧಿಕಾರಿಗಳೂ ಸೇರಿದಂತೆ ಏಳು ಮಂದಿ ಏನು ಮಾಡಿದ್ದರು? ಅದು ಮೂರು ಹಂತದ ಕಾರ್ಯಾಚರಣೆ. ಕುತೂಹಲಕಾರಿಯಾಗಿರುವ ಆ ವಂಚನೆ ಮಾರ್ಗವನ್ನು ಇಲ್ಲಿ ಬಿಚ್ಚಿಡಲಾಗಿದೆ.
ಜಾರಿ ನಿರ್ದೇಶನಾಲಯವು 93 ಲಕ್ಷ ರುಪಾಯಿ ವಶಪಡಿಸಿಕೊಂಡು, ಎಸ್.ಸಿ.ಜಯಚಂದ್ರ ವಿರುದ್ಧ ದೂರು ದಾಖಲಿಸಿತ್ತು. ಇದೇ ವೇಳೆ ಇತರರು ಕೂಡ ನೋಟು ಬದಲಾವಣೆ ಜಾಲದಲ್ಲಿ ಶಾಮೀಲಾಗಿರುವುದು ಕಂಡು ಬಂದಿತ್ತು. ಈ ಆರೋಪಿಗಳು ಹಣ ಬದಲಾವಣೆಗೆ ತುಂಬ ವ್ಯವಸ್ಥಿತವಾದ ಜಾಲ ರೂಪಿಸಿದ್ದರು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.[ಕಪ್ಪು ಹಣ: ಕರ್ನಾಟಕ, ಬಿಜೆಪಿಯವರದೇ ಮೇಲುಗೈ]
ಈ ಆರೋಪಿಗಳು ತಮ್ಮ ಬಳಿಯಿರುವ ದೊಡ್ಡ ಮೊತ್ತದ ಹಣದ ಬದಲಾವಣೆಗೆ ಶೇ 20ರಿಂದ 35ರವರೆಗೆ ಕಮಿಷನ್ ಕೊಡಲು ಸಿದ್ಧರಿದ್ದರು. ನವೆಂಬರ್ 9ರಿಂದ ಆಚೆಗೆ ರಾಜ್ಯದಾದ್ಯಂತ ವಿವಿಧೆಡೆಯಿಂದ ಹಣ ಬದಲಾವಣೆ ಮಾಡಿಕೊಂಡಿದ್ದಾರೆ. ಹಣ ವಿಥ್ ಡ್ರಾ ಮಾಡಬೇಕು ಎಂಬ ಕಾರಣಕ್ಕೆ ಹಲವರನ್ನು ಹುಡುಕಿಕೊಂಡಿದ್ದಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಾರಕ್ಕೆ 24,000ಕ್ಕೆ ಡ್ರಾ ಮಿತಿ ನಿಗದಿ ಮಾಡಿತ್ತು. ಆ ನಂತರ ಮಧ್ಯವರ್ತಿಗಳನ್ನು ಸಂಪರ್ಕಿಸಿ, ಹೊಸ ನೋಟುಗಳನ್ನು ಬದಲಾವಣೆಗೆ ಶೇ 25ರಷ್ಟು ಕಮಿಷನ್ ಎಂದು ಮಾತನಾಡಿದ್ದಾರೆ. ಈ ಮಧ್ಯವರ್ತಿಗಳು ಸ್ವಸಹಾಯ ಸಂಘಗಳಿಂದ ಹಣ ಸಂಗ್ರಹಿಸುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಏಜೆಂಟ್ ಗಳ ಸಂಪರ್ಕ ಸಾಧಿಸಿದ್ದಾರೆ.[ಜನಾ ರೆಡ್ಡಿಗೆ 100 ಕೋಟಿ ಅರೇಂಜ್ ಮಾಡಿದ್ದು ಭೀಮಾ ನಾಯ್ಕ್, ಹೌದೇ?]
ಅಂಥ ಸಂಸ್ಥೆಗಳಿಂದ ಹಳೇ ನೋಟು ಕಟ್ಟುವುದಕ್ಕೆ ರಿಸರ್ವ್ ಬ್ಯಾಂಕ್ ನಿಂದ ವಿನಾಯಿತಿ ಇತ್ತು. ಅದನ್ನು ಬಳಸಿಕೊಂಡಿದ್ದಾರೆ. ಆ ನಂತರ ಕರೆಂಟ್ ಅಕೌಂಟ್ (ಚಾಲ್ತಿ ಖಾತೆ)ನ ಸಹ ಬಳಸಿಕೊಂಡಿದ್ದಾರೆ. ಚಾಲ್ತಿ ಖಾತೆಗೆ ವಾರಕ್ಕೆ 50 ಸಾವಿರ ರುಪಾಯಿ (ಆರ್ ಬಿಐ ವಿಧಿಸಿದ ಗರಿಷ್ಠ ಮಿತಿ) ಡ್ರಾ ಮಾಡಬಹುದು. ಆರೋಪಿಗಳು ಅಂಥ ಖಾತೆದಾರರಿಂದಲೂ ಹಳೇ ನೋಟು ಬದಲಾವಣೆ ಮಾಡಿಕೊಂಡಿದ್ದಾರೆ. ಚಾಲ್ತಿ ಖಾತೆದಾರರಿಂದ ಹಳೇ ನೋಟುಗಳನ್ನು ಜಮೆ ಮಾಡಿ, ಅ ನಂತರ ಡ್ರಾ ಮಾಡಿಕೊಟ್ಟಿದ್ದಾರೆ.