ಗೌರಿ ಲಂಕೇಶ್ ಹತ್ಯೆಯ ಕಡೆಯ ಕ್ಷಣಗಳು ಹೇಗಿದ್ದವು?
ಬೆಂಗಳೂರು, ಸೆಪ್ಟೆಂಬರ್ 07 : ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದ ತಂಡದಲ್ಲಿ ಎಷ್ಟು ಜನರಿದ್ದರು? ಹತ್ಯೆ ಮಾಡಿದ್ದು ಯಾರು? ಪೊಲೀಸರ ತನಿಖೆ ಯಾವ ದಿಕ್ಕಿನತ್ತ ಸಾಗುತ್ತಿದೆ? ಇಲ್ಲಿಯವರೆಗೆ ಏನಾದರೂ ಸುಳಿವುಗಳು ಸಿಕ್ಕಿವೆಯಾ? ಎಷ್ಟು ಜನರನ್ನು ಬಂಧಿಸಿದ್ದಾರೆ? ಈ ಹತ್ಯೆಯ ಹಿಂದೆ ಯಾವ ಸಂಘಟನೆಯ ಕೈವಾಡವಿದೆ?
ಇತ್ಯಾದಿ ಪ್ರಶ್ನೆಗಳಿಗೆ ಯಾವುದೇ ಸ್ಪಷ್ಟವಾದ ಉತ್ತರಗಳು ಸಿಕ್ಕಿಲ್ಲ. ಅವರಿವರಿಂದ ಕೇಳಿಬರುತ್ತಿರುವ ಮಾತುಗಳು ಬರೀ ಊಹಾಪೋಹಗಳಷ್ಟೆ. ಸಿಸಿಟಿವಿ ಫುಟೇಜ್ ಗಳೇ ಅಸ್ಪಷ್ಟವಾಗಿರುವುದರಿಂದ ತನಿಖೆ ಕೈಗೊಂಡಿರುವ ಪೊಲೀಸರು ಕೂಡ ಇದು ಹೀಗೇ ಎಂದು ನಿಖರವಾಗಿ ಹೇಳಲು ಸಾಧ್ಯವಾಗುತ್ತಿಲ್ಲ.
ಗೌರಿ ಲಂಕೇಶ್ ಹತ್ಯೆ, ಪ್ರಾಥಮಿಕ ವರದಿಯಲ್ಲೇನಿದೆ?
ಆದರೆ, ಗೌರಿ ಲಂಕೇಶ್ ಅವರು ರಾಜರಾಜೇಶ್ವರಿ ನಗರದ ಅವರ ಮನೆ ಎದುರಲ್ಲಿ ಗುಂಡೇಟಿನಿಂದ ಹತ್ಯೆಯಾದ ಕಡೆಯ ಕೆಲ ಕ್ಷಣಗಳು ಹೇಗಿದ್ದವು ಎಂಬುದನ್ನು ಬೆಂಗಳೂರು ಪೊಲೀಸ್ ಆಯುಕ್ತ ಅವರು, ಸಿಸಿಟಿವಿಗಳಿಂದ ಹೆಕ್ಕಲಾಗಿರುವ ಕೆಲ ತುಣುಕುಗಳಿಂದ ಕಂಡುಕೊಂಡಿದ್ದಾರೆ.
ಅವರು ಕೊಲೆಯಾದ ಸಂದರ್ಭದಲ್ಲಿ ಅಲ್ಲಿ ಮೂವರು ಆಗಂತುಕರಿದ್ದರು, ಅವರಲ್ಲಿ ಒಬ್ಬ ಗುಂಡಿನ ಮಳೆಗರೆದ, ನಂತರ ಮೂವರೂ ನಾಪತ್ತೆಯಾದರು ಎಂಬಿತ್ಯಾದಿ ಹರಿದಾಡುತ್ತಿದ್ದ ಸುದ್ದಿಗಳನ್ನು ಅಲ್ಲಗಳೆದಿದ್ದು, ಅಲ್ಲಿ ಆಸಮಯದಲ್ಲಿ ಎಷ್ಟು ಜನರಿದ್ದರು ಎಂಬುದರ ಬಗ್ಗೆಯೇ ಸ್ಪಷ್ಟತೆಯಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಹಾಗಿದ್ದರೆ ಈ ಕೆಲ ಕ್ಷಣಗಳಲ್ಲಿ ಆಗಿದ್ದಾದರೂ ಏನು? ಹಿರಿಯ ಪೊಲೀಸರೊಬ್ಬರು ವಿವರಗಳನ್ನು ತಿಳಿಸಿದ್ದಾರೆ.
ಕೆಲಹೊತ್ತು ಕಾರಿನಲ್ಲಿಯೇ ಅವರು ಕುಳಿತಿದ್ದರು
ಸುಮಾರು 7.40ರಿಂದ 7.50ರ ಸಮಯದಲ್ಲಿ ಬಸವನಗುಡಿಯಲ್ಲಿನ 'ಗೌರಿ ಲಂಕೇಶ್ ಪತ್ರಿಕೆ'ಯ ಕಚೇರಿಯಿಂದ ಮನೆಗೆ ಮರಳಿದ ಗೌರಿ ಲಂಕೇಶ್ ಅವರು ಮನೆಯ ಮುಂದೆ, ದೊಡ್ಡ ಗೇಟಿನ ಎದುರಲ್ಲಿ ಕೆಲ ಕ್ಷಣ ಕಾರಿನಲ್ಲಿಯೇ ಕುಳಿತಿದ್ದರು. ಹೆಡ್ ಲೈಟ್ ಆನ್ ಆಗಿತ್ತು, ಮ್ಯೂಸಿಕ್ ಮೊಳಗುತ್ತಿತ್ತು, ಕೈಯಲ್ಲಿ ಮೊಬೈಲ್ ಹಿಡಿದು ಕೆಲಹೊತ್ತು ಏನೋ ಮಾಡುತ್ತಿದ್ದರು.
ಗೌರಿ ಲಂಕೇಶ್ ಹತ್ಯೆ, ಮಂಗಳವಾರ ನಿಜಕ್ಕೂ ನಡೆದದ್ದೇನು?
ದೊಡ್ಡ ಗೇಟ್ ತೆರೆಯುವಷ್ಟರಲ್ಲಿಯೇ ಸಿಡಿದ ಗುಂಡು
ಕಾರಿನ ಹೆಡ್ ಲೈಟ್, ಮ್ಯೂಸಿಕ್ ಆನ್ ಇಟ್ಟೇ ಅವರು ಮೊದಲು ಚಿಕ್ಕ ಗೇಟನ್ನು ತೆರೆದು ಒಳಹೋಗಿದ್ದಾರೆ. ನಂತರ ದೊಡ್ಡ ಗೇಟನ್ನು ತೆರೆದಿದ್ದಾರೆ. ಅಷ್ಟರಲ್ಲಿ ಸಣ್ಣ ಗೇಟಿನ ಬಳಿಯಿದ್ದ ಕಪ್ಪು ಹೆಲ್ಮೆಟ್ ಧರಿಸಿದ್ದ ದುಷ್ಕರ್ಮಿ ಅವರ ಪಕ್ಕೆಯ ಬಳಿ ನೇರವಾಗಿ ಗುಂಡು ಹಾರಿಸಿದ್ದಾನೆ. ಅವರು ಹೌಹಾರಿ ಮನೆಯೆಡೆ ಓಡಲು ಆರಂಭಿಸಿದ್ದಾರೆ. ಅವರನ್ನು ಬೆನ್ನತ್ತಿದ ಆಗಂತುಕ ಮತ್ತೆ ನಾಲ್ಕಾರು ಸುತ್ತು ಗುಂಡು ಹಾರಿಸಿ ಅಲ್ಲಿಂದ ತಕ್ಷಣ ಪರಾರಿಯಾಗಿದ್ದಾನೆ.
ಕಂಟ್ರಿ ಮೇಡ್ ಪಿಸ್ತೂಲು ಎಂದರೇನು? ಅಂಡರ್ ವರ್ಲ್ಡ್ ಗೆ ಇದೇಕೆ ಇಷ್ಟ?
ಗುಂಡು ಹಾರಿಸಿದ ಆಗಂತುಕ ಮಧ್ಯವಯಸ್ಕ
ಗುಂಡುಗಳು ಮೊರೆಯುತ್ತಿದ್ದಂತೆ ಹೊರಗೆ ನಿಲ್ಲಿಸಿದ್ದ ಕಾರಿನ ಮೇಲೆ ಒಂಟಿ ಹೆಡ್ ಲೈಟ್ ಇರುವ ವಾಹನದ ಬೆಳಕು ಕಾಣಿಸಿಕೊಂಡಿದೆ ಮತ್ತು ಬೈಕ್ ಮೇಲೆ ಕುಳಿತಿದ್ದವರು ಅದನ್ನು ವಾಪಸ್ ತಿರುಗಿಸಿದ್ದಾರೆ. ನಂತರ ಅಲ್ಲಿಂದ ಕ್ಷಣಾರ್ಧದಲ್ಲಿ ಮಾಯವಾಗಿದೆ. ಇದರಿಂದ ತಿಳಿದುಬಂದಿದ್ದೇನೆಂದರೆ, ಆಗಂತುಕರು ಬೈಕ್ ಬಳಸಿದ್ದಾರೆ ಮತ್ತು ಗುಂಡು ಹಾರಿಸಿದ ವ್ಯಕ್ತಿ 35-40 ವರ್ಷ ವಯಸ್ಸಿನವನಿರಬಹುದು.
ಹಂತಕರು 15 ದಿನದಿಂದ ಗೌರಿ ಲಂಕೇಶ್ ಹಿಂಬಾಲಿಸುತ್ತಿದ್ದರು
ಎದೆಗೂಡು ಹೊಕ್ಕ ಗುಂಡಿನಿಂದ ಹೋದ ಪ್ರಾಣಪಕ್ಷಿ
ಮರುದಿನ ಪೋಸ್ಟ್ ಮಾರ್ಟಂ ಮಾಡಿದ ನಂತರ ತಿಳಿದುಬಂದ ಮಾಹಿತಿಯೇನೆಂದರೆ, ಗೌರಿ ಲಂಕೇಶ್ ಅವರ ದೇಹದೊಳಗೆ ಮೂರು ಗುಂಡುಗಳು ಹೊಕ್ಕಿವೆ. ಎರಡು ಪುಪ್ಪುಸದ ಭಾಗದಲ್ಲಿ ಸಿಕ್ಕಿದ್ದರೆ, ಒಂದು ಹೃದಯದ ಬಳಿ ಸಿಕ್ಕಿದೆ. ಹೃದಯಕ್ಕೆ ನುಗ್ಗಿದ ಗುಂಡಿನಿಂದಲೇ ಅವರ ಪ್ರಾಣಪಕ್ಷಿ ಹಾರಿಹೋಗಿದೆ. ಸದ್ಯಕ್ಕೆ ಇಷ್ಟು ಮಾತ್ರ ಮಾಹಿತಿ ಸಿಕ್ಕಿದ್ದು, ಪೊಲೀಸರು ಬಸವನಗುಡಿಯಿಂದ ರಾಜರಾಜೇಶ್ವರಿ ನಗರದ ರಸ್ತೆಯಲ್ಲಿರುವ ಸಿಸಿಟಿವಿಯನ್ನು ಪರಿಶೀಲಿಸುತ್ತಿದ್ದಾರೆ.